Tuesday, April 10, 2018

ಅಗ್ನಿಪರೀಕ್ಷೆ

ಸಮರ ಮುಗಿಯಲ್ ರಾಮನೆದು-
ರಿಗೆ ಸೀತೆಯನ್ ತಂದಿರಿಸಿದಂ ವಿಭೀಷಣಂ |
ಸೂರ್ಯಕಾಂತಿ ರವಿಯ ನೋಡು-
ವವೊಲರವಿಂದವದನನ ಜಾನಕಿ ನೋಡಿದಳ್ ||

ದೇವ ನೋಡೈ ಶ್ರೀರಾಮ
ವೈದೇಹಿ ಕರುಣಾರ್ದ್ರತೆಯಿಂದೀಕ್ಷಿಸುತಿಹಳ್ |
ಆರಿಗಾಗಿ ಈಯನುವರ-
ವ ಗೈಯ್ದೆವೋ ಆ ತಾಯ್ ನಿಂತಿಹಳೆಮ್ಮೆದುರಿಗೆ ||

ಪನ್ನೆರೆಡು ಮಾಸದಿಂ ಮೈ-
ಥಿಲಿ ದುರ್ಲಭ ಚಿಂತೋದಧಿಯಲ್ ಮಿಂದಿರ್ಪಳ್ |
ಸಂತಸದಿ ಸ್ವೀಕರಿಸೈ
ಪ್ರಭೋ ದಾಶರಥಿಯೆಂದನಂಜನೀಪುತ್ರಂ ||

ಬಾಷ್ಪಗಳುದುರಿದವ್ ಪ್ರಥಮ-
ದಲಿ ಮರುಚಣದೊಳ್ ವದನ ಗಂಭೀರವಾಯ್ತುಂ |
ಲಂಕೇಶ್ವರನ ಮೊಗನೋಡಿ
ರಾಮಂ ಸೀತೆಯನಲಂಕರಿಸಿ ತಾರೆಂದಂ ||

ಲಲನಾವ್ರಜದೊಳಿದ್ದ ಸೀ-
ತೆಯ ಬಳಿಸಾರ್ದು ವಿಭೀಷಣಂ ಕೈಮುಗಿದು ತಾಯ್ |
ನಿನ್ನ ಪ್ರಭು ಸರ್ವಾಲಂಕಾ-
ರಭೂಷಿತೆಯಾಗೀಕ್ಷಿಸಬೇಕೆಂದನೆಂದನ್ ||

ತೊಟ್ಟುಡುಗೆಯೊಳ್ ತಾನ್ ನಾಥ-
ನಂ ನೋಡಬೇಕೈ ರಾಕ್ಷಸಾಧಿಪನೆಂದಳ್ |
ಜಾನಕಿ ಮೇಣ್ ರಾಜಾಜ್ಞೆಗೆ
ತಲೆಬಾಗಿಯೊಪ್ಪಿದೆನೆಂದರಮನೆಗೆಪೋದಳ್ ||

ಪೊಳೆಯುವ ಪಲ್ಲಕ್ಕಿ ರೇಷಿ-
ಮೆಯ ವಸ್ತ್ರ ಫಳಫಳನೆ ಮಿಂಚುವಾಭರಣಗಳ್ |
ಮೊಗದೊಳ್ ಮಂದಹಾಸದಿಂ
ಬಂದಳ್ ವೈದೇಹಿ ರಾಮಚಂದ್ರನ ಕಾಣಲ್ ||

ಪೆರ್ಗಾಳಿ ಬೀಸಲಬ್ಬರಿ-
ಸುವಾಂಬುಧಿಯವೊಲಿದ್ದ  ವಾನರ ಭಲ್ಲೂಕಾ- |
ಸುರ ನಿವಹಂ ಸೀತೆಯ ನೋ-
ಡಲ್ತ್ವರೆಪಡುತ್ತಿರಲವರನ್ ಹರೆಯುತಿರ್ದರ್ ||

ಕಾರ್ಪಣ್ಯದೊಳ್ ಸಮರದೊಳ್
ಪತಿಸಮಕ್ಷದೊಳ್ ವಿವಾಹ ಯಾಗಾದಿಗಳೊಳ್ |
ನಾರಿಯನ್ ನೋಡುವುದನುಚಿ-
ತವಲ್ಲವರಂ ತಡೆಯದಿರೆಂದನಾ ರಾಮಂ ||

ಹಾಸಮೊಗದಿಂದಲ್ ಬೆರಗು
ಸಂಭ್ರಮ ವಾತ್ಸಲ್ಯದಿಂದಲ್ ನಾಥನಂ ಕಾ- |
ಣ್ಬ ಹೆಬ್ಬಯಕೆಯಿಂದಲ್ ಅರ-
ವಿಂದವದನನೆದುರು ಜಾನಕಿ ಬಂದುನಿಂತಳ್ ||

ಭದ್ರೆ ಮಾನುಷ ಯತ್ನದೊಳ್
ಲಂಕೇಶಂ ವಧಿಸಿ ನಿನ್ನಂ ನಾಂ ಗೆಲ್ವಿಹೆಂ |
ಲೋಕವೀಕ್ಷಿಸಿತು ನನ್ನೀ
ಬಾಹುಬಲಮಂ ಫಲಕೊಟ್ಟಿತೀಪರಿಶ್ರಮಂ ||

ಅಮಾನುಷದಿಂದಾದನ-
ರ್ಥವನ್ ಮಾನುಷದಿಂ ಪರಿಹರಿಸಿದೆನೈ ಧರಿ- |
ತ್ರೀಸುತೆ ಹನುಮ ಸುಗ್ರೀವ
ವಿಭೀಷಣ ಕಪಿಭಲ್ಲೂಕಾದಿಳ ನೆರವಿನೊಳ್ ||

ಆನುಡಿಯಕೇಳ್ದಾ ಧರಿ-
ತ್ರೀಸುತೆಯಮುಖಕಮಲವರಳಿತು ಹರಿಣದವೊಲ್ |
ರಾಮನಂತರಂಗವದುರಿ-
ತಿತ್ತಂ ಲೋಕೋಪವಾದದಾಲೋಚನೆಯೊಳ್ ||

ಜನಕರಾಜಪುತ್ರಿ ಕೇಳೆ
ನ್ನಪಮಾನಂ ಕಳೆಯಲೀಯನುವರಮೆಸಗಿದೆನ್ |
ವಂಶದ ಕೀರುತಿಯಂ ಮೆರೆ-
ಯಿಸಲಂ ಲೋಕಶೋಕನಾಶಕಂ ಲಂಕಾವಿನಾಶಂ ||

ಕ್ಷೀಣಾಕ್ಷಿಗಂ ಪರಂಜ್ಯೋ-
ತಿಯೊಪ್ಪದವೊಲ್ ಸತ್ಕುಲಜಾತಗಂ ನೀನೆಂ- |
ತೊಪ್ಪುವೆಯೈ ನೀಂ ಪೋಗುಂ
ನಿನ್ನಿಚ್ಛೆ  ನಿನ್ನಿಂದುಪಕಾರವಿಲ್ಲೆನಗಂ |

ರಾವಣಾಧೀನಳಾದವ-
ಳಿಗಂ ಎನ್ನವಾತ್ಸಲ್ಯವಿಲ್ಲಂ ಪೋಗು ನೀಂ |
ದಶದೆಸೆಯೊಳ್ ಭರತಶತೃ
ಘ್ನ ವಿಭೀಷಣರಬಳಿಗೋ ಲಕ್ಷ್ಮಣನಬಳಿಗೋ ||

ಆಗಂತುಕ ಮಾತುಗಳಿಂ
ಸರ್ವರೆದುರಿಗಾದಪಮಾನದಿಂ ಹೊನಲಿನಂ- |
ತೊರಲಿ ಬರುತಿರ್ಪಶ್ರು ಧಾ-
ರೆಯಿಂ ಸೀತೆ ಮೆಲ್ಲನೆಯಿಂತು ಗದ್ಗದಿಸಿದಳ್ ||

ರಾಕ್ಷಸನಿಗೆ ದೊರಕಿದುದೆನ-
ತಪ್ಪಲ್ಲೆನ್ನ ಮನ ನಿನ್ನನ್ನಗಲಿಲ್ಲ ಎ- |
ನ್ನಲ್ಲವಿಶ್ವಾಸ ನಿನಗುಚಿ-
ತವಲ್ಲ ಕೋಸಲೇಂದ್ರ  ಎಮ್ಮ ದಾಂಪತ್ಯದೊಳ್ ||

ಶೋಕವೇಕೆ ಹನುಮನ ಸಾ
ಗರೋಲ್ಲಂಘನವೇಕೆ ಸಖರ ಕಾರ್ಪಣ್ಯವೇ- |
ಕೆ ಮೇಣೇಕೀ ನಿಷ್ಫಲ
ಪ್ರಾಣಹರಣ ರಾವಣ ಲಂಕಾವಿನಾಶಮಂ ||

ಅಂದೇ ಪ್ರಾಣ ತೊರೆಯುತಿ-
ರ್ದೆನ್ ಹನುಮನಿಂ ಪೇಳ್ಪೊಡೆ ಎನ್ನಭಕ್ತಿಯಲ- |
ಕ್ಷಿಸಲ್ಪಟ್ಟಿತೀಗ ಚಿತೆಯಂ
ಪೇರಿಸು ಸೌಮಿತ್ರಿ ಅಗ್ನಿಗಾಹುತಿಯಾಗೆಪೆನ್ ||

ಹೋಹೋ ಹಾಹಾ ಎಂದಳ-
ಲಿದರ್ ಸುರಾಸುರರ್ ಸೀತೆ ಯಜ್ಞಾಹುತಿಯಾ- |
ಗಲ್ ದೇವ ದಾನವ ಯಕ್ಷ
ಗಂಧರ್ವ ಋಷಿ ಕಿನ್ನರಾದಿ ಸಮಕ್ಷಮದೊಳ್ ||

ಭದ್ರಬಾಹುಗಳೊಳ್ ಜನಕ
ಸುತೆಯಂ ಪಿಡಿದು ಮೂರ್ತನಾದನಗ್ನಿದೇವನ್ |
ಪಾಪರಹಿತಳಿವಳ್ ಸ್ವೀಕ
ರಿಸೈ ರಾಮ ಮನೋವಾಕ್ಕಾಯ ಶುದ್ಧಳಿವಳ್ ||

ಜಾನಕಿ ಪರಿಶುದ್ದಳ್ ಮೇಣ್
ಲೋಗರಲ್ವರ್ ಸ್ವಪ್ನದೊಳಾಗಲ್ ದುಷ್ಟಾತ್ಮನ್ |
ಸೀತೆಯಂ ತಾಕಲಾರನ್
ಹವ್ಯವಾಹನಿವಳನೀಗ ಸ್ವೀಕರಿಸಿಹೆನ್ ||

[ಪುಷ್ಪಗಳುದುರಿದವ್ ವ್ಯೋಮ-
ದೊಳ್ ಕಪಿ ಕೇಕೆಗಳಾದವ್ ಪೃಥ್ವಿಯೊಳ್ ಹಸ- |
ನ್ಮೊಗವಾಯ್ತು ಸಕಲರೊಳ್ಮ-
ತ್ತೊಂದಾದರ್ ಲಂಕೆಯೊಳ್ ಜಾನಕೀರಾಮರ್ ||]