Friday, February 14, 2020

ಅಭಿಜ್ಞಾನ ಶಾಕುಂತಲ 7

                                                                             ದೃಶ್ಯ ೭

(ಆಕಾಶಮಾರ್ಗದಲ್ಲಿ ರಥಾರೂಢರಾದ ದುಷ್ಯಂತ ಮತ್ತು ಮಾತಲಿಯ ಪ್ರವೇಶ)

ದುಷ್ಯಂತ: ಮಾತಲಿ, ಇಂದ್ರ ಹೇಳಿದ ಕೆಲಸ ಮುಗಿಸಿದ್ದರೂ, ಅವನ ಸತ್ಕಾರವನ್ನು ಪಡೆದಮೇಲೆ, ನಾನು ಅವನಿಗೆ ಉಪಯುಕ್ತನಾದಂತೆ ಅನ್ನಿಸುತ್ತಿಲ್ಲ.

ಮಾತಲಿ: (ನಗುತ್ತಾ) ಆಯುಷ್ಮಾನ್, ನಿಮ್ಮಿಬ್ಬರಿಗೂ ಸಮಾಧಾನವಾಗಿಲ್ಲವೆಂದೆನಿಸುತ್ತದೆ. ನೀನು ನಿನ್ನ ಸಹಾಯವನ್ನು ಕಡಿಮೆಯೆಂದರೆ, ಇಂದ್ರ ಅವನ ಸತ್ಕಾರ ಕಡಿಮೆ ಎನ್ನುತ್ತಾನೆ.

ದುಷ್ಯಂತ: ಹಾಗಲ್ಲ. ಅವನು ನನಗೆ ಮಾಡಿದ ಸತ್ಕಾರ ಭೂಮಿಯಲ್ಲಿ ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನನ್ನನ್ನು ದೇವತೆಗಳ ಎದುರು ಅವನ ಸಿಂಹಾಸನದ ಮೇಲೆ ಕೂರಿಸಿಕೊಂಡು ಬಿಟ್ಟ. ಅವನ ಪಕ್ಕದಲ್ಲಿ ಮಗ ಜಯಂತ ಅಸೂಯೆಯಿಂದ ನೋಡುತ್ತಿದ್ದರೂ ಅವನ ಕಡೆಗೆ ಸುಮ್ಮನೆ ನಕ್ಕು, ತನ್ನ ಕೊರಳಿನಲ್ಲಿದ್ದ ಗಂಧಪೂರಿತವಾದ ಮಂದಾರ ಮಾಲೆಯನ್ನು ನನಗೆ ಹಾಕಿದ.

ಮಾತಲಿ: ಇದರಲ್ಲಿ ನಿನಗೆ ಅರ್ಹವಾಗದದ್ದು ಯಾವುದು? ಸುಖಪರನಾದ ಇಂದ್ರನಿಗೆ ಬಂದ ಕಂಟಕವನ್ನು ನೀನು ನಿನ್ನ ಶರಗಳಿಂದ ಹೋಗಲಾಡಿಸಿದೆ. ಈ ಕೆಲಸವನ್ನು ನಿನಗೆ ಮುಂಚೆ ನರಸಿಂಹನ ನಖಗಳು ಮಾತ್ರ ಮಾಡಿದ್ದವಷ್ಟೆ!

ದುಷ್ಯಂತ: ಇಲ್ಲ, ಆದರೂ ಇಂದ್ರನ ಮಹಿಮೆಯೇ ದೊಡ್ಡದು. ನಾಯಕರ ಮಹಿಮೆಯಿಂದಲೇ ಸೇವಕರು ದೊಡ್ಡ ಕೆಲಸಗಳನ್ನು ಮಾಡುತ್ತಾರೆ. ಸೂರ್ಯನ ಸಹಸ್ರಕಿರಣಗಳಿಲ್ಲದಿದ್ದರೆ ಅರುಣ ಕತ್ತಲೆಯನ್ನು ನಾಶಪಡಿಸುತ್ತಿದ್ದನೇ?

ಮಾತಲಿ: ನಿನಗೆ ತಕ್ಕುದಾದನ್ನೇ ಹೇಳಿದೆ. (ಸ್ವಲ್ಪ ಮುಂದೆ ಹೋಗಿ) ಆಯುಷ್ಮಾನ್ ಸ್ವರ್ಗವಾಸಿಗಳಿಗೆ ನೀನು ತಂದ ಸೌಭಾಗ್ಯವನ್ನು ನೋಡು! ಸುರಸುಂದರಿಯರು ಬಣ್ಣಗಳಿಂದ ಎಲೆಗಳ ಮೇಲೆ ನಿನ್ನ ಸಾಹಸವನ್ನು ಕುರಿತು ಗೀತಯೋಗ್ಯವಾದ ಹಾಡುಗಳನ್ನು ಬರೆಯುತ್ತಿದ್ದಾರೆ. 

ದುಷ್ಯಂತ: ಮಾತಲಿ, ಅಸುರರನ್ನು ಸಂಹಾರಮಾಡುವ ಉತ್ಸುಕತೆಯಲ್ಲಿ ಇಲ್ಲಿಗೆ ಬರುತ್ತಿದ್ದಾಗ ನಾನು ದಾರಿಯನ್ನು ಗಮನಿಸಲಿಲ್ಲ, ಈಗ ನಾವು ಯಾವ ವಾಯುವಿನ ಸ್ಥಾನದಲ್ಲಿದ್ದೇವೆ?

ಮಾತಲಿ: ಗಂಗೆಯನ್ನು ಸ್ವರ್ಗದಲ್ಲಿ ಪ್ರವಹಿಸುವಂತೆ ಮಾಡುವ, ನಕ್ಷತ್ರಗಳ ರಶ್ಮಿಗಳನ್ನು ಪಸರಿಸುವ, ವಿಷ್ಣು ತನ್ನ ಎರಡನೆಯ ಪಾದವನ್ನು ಇಟ್ಟ ಪರಿವಹ ಎಂಬ ವಾಯುವಿನ ಮಾರ್ಗದಲ್ಲಿದ್ದೇವೆ.

ದುಷ್ಯಂತ: ಆದ್ದರಿಂದಲೇ ನನ್ನ ಬಾಹ್ಯಾಂತಃಕರಣಗಳಿಗೆ ಸಂತೋಷವಾಗುತ್ತಿದೆ. 
(ರಥವನ್ನು ನೋಡುತ್ತಾ)
ಮೇಘಗಗಳ ಬಳಿಗೆ ಬಂದಿದ್ದೇವೆ.

ಮಾತಲಿ: ಹೇಗೆ ಗೊತ್ತಾಯಿತು?

ದುಷ್ಯಂತ: ಈ ರಥದ ಅರಗಳ ನಡುವೆ ಜಾತಕ ಪಕ್ಷಿಗಳು ಹಾರಿಹೋಗುತ್ತಿವೆ. ಕುದುರೆಗಳು ಮಿಂಚಿನಿಂದ ಹೊಳೆಯುತ್ತಿವೆ. ನೀರು ತುಂಬಿದ ಮೋಡಗಳಿಂದ ನಿನ್ನ ರಥದ ಮೇಲೆ ನೀರು ಚಿಮ್ಮುತ್ತಿದೆ.

ಮಾತಲಿ: ನಾವು ಇನ್ನು ಸ್ವಲ್ಪ ಹೊತ್ತಿನಲ್ಲಿ ನಿನ್ನ ಭೂಮಿಗೆ ಬಂದುಬಿಡುತ್ತೇವೆ.

ದುಷ್ಯಂತ: (ಕೆಳಗೆ ನೋಡುತ್ತಾ) ನಾವು ಕೆಳಗೆ ಹೋಗುತ್ತಿರುವ ವೇಗದಿಂದ ಮನುಷ್ಯಲೋಕ ತುಂಬಾ ಆಶ್ಚರ್ಯವಾಗಿ ಕಾಣುತ್ತಿದೆ. ಬೆಟ್ಟದಿಂದ ಕೆಳಗೆ ಇಳಿಯುತ್ತಿದೆಯೋ ಎಂಬಂತೆ ಭೂಮಿ ಶಿಖರಗಳ ನಡುವಿನಿಂದ ಉದ್ಭವಿಸುತ್ತಿದೆ. ಇಲ್ಲಿಯವರೆಗೂ ಮರಗಳ ಎಲೆಗಳು ಮಾತ್ರ ಕಾಣುತ್ತಿತ್ತು, ಈಗ ಅವುಗಳ ಕೊಂಬೆಗಳೂ ಕಾಣುತ್ತಿವೆ. ಸಣ್ಣದಾಗಿ ಕಾಣಿಸದಿದ್ದ ನದಿಗಳು ಈಗ ದೂಡ್ಡದಾದ ತೊರೆಗಳಾಗಿ ಕಾಣುತ್ತಿವೆ. ಯಾರೋ ಭೂಮಿಯನ್ನು ನನ್ನ ಕಡೆಗೆ ಎತ್ತಿ ಎಸೆಯುತ್ತಿರುವಂತೆ ಕಾಣುತ್ತಿದೆ.

ಮಾತಲಿ: ಚೆನ್ನಾಗಿ ನೋಡುತ್ತಿದ್ದೀಯ. 
(ದೀರ್ಘವಾಗಿ ನೋಡಿ)
ಈ ಭೂಮಿ ಎಷ್ಟು ಚೆನ್ನಾಗಿ ಕಾಣುತ್ತಿದೆ.

ದುಷ್ಯಂತ: ಮಾತಲಿ, ಇದೇನು ಪೂರ್ವ ಪಶ್ಚಿಮ ಸಮುದ್ರಗಳವರೆಗೆ ಹರಡಿಕೊಂಡು ದ್ರವಬಂಗಾರವನ್ನು ಹರಡಿದ ಸಂಜೆಯಂತೆ ಮೇಘಗಳಿಂದ ಆವೃತವಾದ ಬೆಟ್ಟದ ಸಾಲು?

ಮಾತಲಿ: ಆಯುಷ್ಮಾನ್, ಇದು ಹೇಮಕೂಟವೆಂಬ ಕಿಂಪುರುಷರ ತಪಃಸಂಸಿದ್ಧಿ ಕ್ಷೇತ್ರ. ಸ್ವಯಂಭುವಾದ ಮರೀಚಿಗಳ ಮಗನಾದ, ಸುರಾಸುರರ ಗುರುವಾದ, ಕಶ್ಯಪ ಪ್ರಜಾಪತಿಯು 
ಸಪತ್ನೀಕರಾಗಿ ತಪಸ್ಸು ಮಾಡುತ್ತಿರುವ ಸ್ಥಳ.

ದುಷ್ಯಂತ: ಶ್ರೇಯಸ್ಸನ್ನು ಅತಿಕ್ರಮಿಸಿ ಹೋಗಬಾರದು. ಇಲ್ಲಿ ಇಳಿದು ಪ್ರದಕ್ಷಿಣೆ ಮಾಡಿ ಹೋಗೋಣ.

ಮಾತಲಿ: ಅದೇ ಮೊದಲ ಕೆಲಸ. 
(ರಥವನ್ನು ಕೆಳಗೆ ಇಳಿಸುತ್ತಾರೆ)

ದುಷ್ಯಂತ: (ಆಶ್ಚರ್ಯದಿಂದ) ರಥದ ಶಬ್ದ ಕೇಳಿಸುತ್ತಿಲ್ಲ. ಧೂಳು ಕಾಣಿಸುತ್ತಿಲ್ಲ. ಭೂಮಿಯ ಮೇಲೆ ಬಂದಿಲ್ಲವಾಗಿ ನೀನು ಇಳಿಸಿದರೂ ಕೆಳಗಿಳಿದಂತೆ ಅನಿಸುತ್ತಿಲ್ಲ.

ಮಾತಲಿ: ನಿಮಗೂ ಇಂದ್ರನಿಗೂ ಇರುವ ವ್ಯತ್ಯಾಸ ಇದೊಂದೇ!

ದುಷ್ಯಂತ: ಮಾತಲಿ, ಈ ಪ್ರದೇಶದಲ್ಲಿ ಕಶ್ಯಪರ ಆಶ್ರಮ ಎಲ್ಲಿದೆ? 

ಮಾತಲಿ: (ಕೈ ತೋರಿಸುತ್ತಾ) ಅಲ್ಲಿ ನೋಡು ಆ ಋಷಿಯ ಮೈಯ ಸುತ್ತಲೂ ಹುತ್ತ ಬೆಳೆದಿದೆ. ಮೈಮೇಲೆ ಹಾವು ಪೊರೆ ಬಿಟ್ಟಿದೆ. ಭುಜಗಳಿಗೆಲ್ಲ ಬಳ್ಳಿಗಳು ಹಬ್ಬಿಕೊಂಡಿವೆ. ಜಟಾಮಂಡಲದಲ್ಲಿ ಹಕ್ಕಿಗಳು ಗೂಡು ಮಾಡಿಕೊಂಡಿವೆ. ಸ್ಥಾಣುವಿನಂತೆ ನಿಂತು ಸೂರ್ಯನನ್ನೇ ನೋಡುತ್ತಾ ತಪಸ್ಸುಮಾಡುತ್ತಿದ್ದಾನೆ.

ದುಷ್ಯಂತ: ಕಷ್ಟತಪಸ್ವಿಗೆ ನಮಸ್ಕಾರ!

ಮಾತಲಿ: (ರಥವನ್ನು ಹಿಡಿದು) ಅಲ್ಲಿ ದೇವಮಾತೆ ಅದಿತಿಯೇ ಬೆಳಸಿದ ಮಂದಾರ ವೃಕ್ಷವಿದೆ. ಅಲ್ಲಿ ಕಶ್ಯಪರ ಆಶ್ರಮವಿದೆ.

ದುಷ್ಯಂತ: ಈ ಸ್ಥಳ ಸ್ವರ್ಗಕ್ಕಿಂತಲೂ ಅಧಿಕವಾಗಿದೆ. ಅಮೃತದಲ್ಲಿ ತೇಲಿದಂತಾಗಿದೆ.

ಮಾತಲಿ: ಆಯುಷ್ಮಾನ್, ರಥದಿಂದ ಇಳಿ.

ದುಷ್ಯಂತ: (ಇಳಿದು) ಮಾತಲಿ ನೀನು?

ಮಾತಲಿ: ನಾನೂ ಕೆಳಗೆ ಇಳಿಯುತ್ತೇನೆ.
(ಇಳಿಯುತ್ತಾನೆ)
(ಇಬ್ಬರೂ ಸ್ವಲ್ಪ ಮುಂದೆ ಹೋಗುತ್ತಾರೆ)
ಋಷಿಗಳ ತಪೋವನವನ್ನು ನೋಡೋಣ.

ದುಷ್ಯಂತ: ನನಗಂತೂ ವಿಸ್ಮಯವಾಗಿದೆ. ಇಷ್ಟೊಂದು ಕಲ್ಪವೃಕ್ಷಗಳಿರುವ ಈ ಕಾಡಿನಲ್ಲಿ ಋಷಿಗಳು ಪ್ರಾಣಾಯಾಮ ಮಾಡುತ್ತಿದ್ದಾರೆ. ಬಂಗಾರದ ತಾವರೆಗಳಿರುವ ಈ ಸರೋವರದಲ್ಲಿ ಪೂಜೆ ಮಾಡುತ್ತಿದ್ದಾರೆ. ರತ್ನಶಿಲೆಗಳ, ಅಪ್ಸರೆಯರ ಸನ್ನಿಧಿಯಲ್ಲಿ ಸಂಯಮದಿಂದ ಧ್ಯಾನಮಾಡುತ್ತಿದ್ದಾರೆ. ಎಲ್ಲರೂ ತಪಸ್ಸು ಮಾಡಿ ಹೋಗಬೇಕೆಂದುಕೊಳ್ಳುವ ಪ್ರದೇಶದಲ್ಲಿ ಇವರು ತಪಸ್ಸು ಮಾಡುತ್ತಿದ್ದಾರೆ!!

ಮಾತಲಿ: ನಿನ್ನ ಪ್ರಾರ್ಥನೆ ತುಂಬಾ ಚೆನ್ನಾಗಿದೆ!
(ಮುಂದೆ ನಡೆಯುತ್ತಾರೆ)

(ಆಕಾಶದಲ್ಲಿ)
ಶಾಕಲ್ಯ, ಕಶ್ಯಪರು ಏನು ಮಾಡುತ್ತಿದ್ದಾರೆ?
ಏನು ಹೇಳೋಣ? ಅವರು, ತಪಸ್ವಿನಿಯರ ಜೊತೆ ಇರುವ ಅದಿತಿಯವರಿಗೆ ಪತಿವ್ರತಾಧರ್ಮದ ಕುರಿತು ಹೇಳುತ್ತಿದ್ದಾರೆ. 

ದುಷ್ಯಂತ: (ಆ ಕಡೆ ಕಿವಿ ಕೊಡುತ್ತಾ) ಪ್ರವಚನ ಮುಗಿಯುವವರೆಗೂ ಕಾಯಬೇಕು.

ಮಾತಲಿ: (ರಾಜನನ್ನು ಕುರಿತು) ಆಯುಷ್ಮಾನ್, ಈ ಅಶೋಕವೃಕ್ಷದ ಕೆಳಗೆ ಸ್ವಲ್ಪ ಹೊತ್ತು ನಿಂತಿರು. ನಾನು ನಿನ್ನ ಬರವನ್ನು ಕಶ್ಯಪರಿಗೆ ತಿಳಿಸುವ ಅವಕಾಶವಿದೆಯೋ ಎಂದು ನೋಡಿಕೊಂಡು ಬರುತ್ತೇನೆ.

ದುಷ್ಯಂತ: ನಿನ್ನಿಷ್ಟ.
(ಅಲ್ಲೇ ನಿಲ್ಲುತ್ತಾನೆ)

ಮಾತಲಿ: ಹೋಗಿಬರುತ್ತೇನೆ.
(ಮಾತಲಿಯ ನಿಷ್ಕ್ರಮನ)

ರಾಜ: (ಶುಭನಿಮಿತ್ತವನ್ನು ಅನುಭವಿಸಿ) ಬಲಬಾಹುವೇ ಏಕೆ ಸ್ಪಂದಿಸುತ್ತೀಯ? ಒಳ್ಳೆಯದಾಗುವ ಸೂಚನೆಯಿಲ್ಲ. ಒಂದು ಬಾರಿ ಬಿಟ್ಟ ಶ್ರೇಯಸ್ಸು ದುಃಖವಾಗಿ ಪರಿವರ್ತಿತವಾಗುತ್ತದೆ.

(ನೇಪಥ್ಯದಲ್ಲಿ)
ತುಂಟತನ ಮಾಡಬೇಡ! 
ಏನು? ಅವನ ಸ್ವಭಾವವೇ ಅದು.

ದುಷ್ಯಂತ: (ಆ ಕಡೆ ಕಿವಿಕೊಡುತ್ತಾ) ಅವಿನಯಕ್ಕೆ ಇದು ಜಾಗವಲ್ಲವಲ್ಲ. ಇದೆಲ್ಲ ಇಲ್ಲಿ ನಿಷಿದ್ಧವಲ್ಲ?
(ಶಬ್ದ ಬರುವ ಕಡೆ ನೋಡುತ್ತಾ, ಆಶ್ಚರ್ಯದಿಂದ)
ಅರೆ! ಇವನ್ಯಾರು? ತಪಸ್ವಿಗಳಿಗೆ ಅಪರೂಪವಾದ ಧೈರ್ಯನಾದ ಬಾಲಕನನ್ನು ಇಬ್ಬರು ತಪಸ್ವಿನಿಯರು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ತಾಯಿಯ ಹಾಲನ್ನು ಅರ್ಧಕುಡಿದ ಸಿಂಹದಮರಿಯನ್ನು ಬಲಾತ್ಕಾರವಾಗಿ ಆಟವಾಡಲು ಎಳೆಯುತ್ತಿದ್ದಾನಲ್ಲ!!

(ಹಾಗೆ ಮಾಡುತ್ತಿದ್ದ ಬಾಲಕನ ಪ್ರವೇಶ, ಅವನ ಜೊತೆ ಇಬ್ಬರು ತಪಸ್ವಿನಿಯರು)

ಬಾಲಕ: ಸಿಂಹದ ಮರಿ, ನಿನ್ನ ಬಾಯನ್ನು ತೆಗಿ, ಹಲ್ಲುಗಳನ್ನು ಎಣಿಸಬೇಕು.

ಮೊದಲ ತಪಸ್ವಿನಿ: ಅವಿನೀತ, ಏಕೆ ಈ ಪ್ರಾಣಿಗಳನ್ನು ಹಿಂಸಿಸುತ್ತೀಯಾ? ನಿನ್ನ ಉತ್ಸಾಹ ಕೊಲ್ಲುತ್ತದೆ. ಈ ಋಷಿಜನರು ನಿನ್ನನ್ನು ಸರ್ವದಮನ ಎಂದು ಕರೆಯುವುದು ಸರಿಯಾಗಿಯೇ ಇದೆ!

ದುಷ್ಯಂತ: ಇದೇನು ಇವನು ನನ್ನ ಔರಸಪುತ್ರನೆಂಬ ಭಾವನೆ ಉಂಟಾಗುತ್ತಿದೆಯಲ್ಲ? ಮಕ್ಕಳಿಲ್ಲದಿದ್ದರಿಂದಲೇ ಈ ವಾತ್ಸಲ್ಯ!

ಎರಡನೆಯ ತಪಸ್ವಿ: ನೀನು ಈ ಸಿಂಹದ ಮರಿಯನ್ನು ಬಿಡದಿದ್ದರೆ, ಅದರ ಅಮ್ಮ ನಿನ್ನನ್ನು ಬಿಡುವುದಿಲ್ಲ.

ಬಾಲಕ: (ನಗುತ್ತಾ) ಓಹೋಹೋ! ನನಗೆ ಭಯವಾಗುತ್ತದೆ. 
(ಬೆನ್ನು ತೋರಿಸುತ್ತಾನೆ) 

ದುಷ್ಯಂತ: ಇವನು ಯಾರೋ ಮಹಾಬಲಶಾಲಿಯ ಮಗನೇ ಇರಬೇಕು. ಉರಿಯಲು ಸಿದ್ದವಾಗಿರುವ ಬೆಂಕಿಯ ಕಿಡಿಯಂತಿದ್ದಾನೆ.

ಮೊದಲ ತಪಸ್ವಿ: ಮಗು, ಈ ಸಿಂಹವನ್ನು ಬಿಟ್ಟುಬಿಡು. ನಿನಗೆ ಆಟವಾಡಲು ಬೇರೆ ಆಟಿಕೆ ಕೊಡುತ್ತೇನೆ.

ಬಾಲಕ: ಎಲ್ಲಿ ಕೊಡು ನೋಡೋಣ?
(ಕೈಚಾಚುತ್ತಾನೆ)

ದುಷ್ಯಂತ: ಇವನಲ್ಲಿ ಚಕ್ರವರ್ತಿಯ ಲಕ್ಷಣಗಳು ಕಾಣಿಸುತ್ತಿವೆ. ಆಟಿಕೆಯನ್ನು ಪಡೆಯಲು ಕೈ ಚಾಚಿರುವ ಇವನ ಕೈಗಳು ಆಗತಾನೆ ಅರಳಿರುವ ತಾವರೆಯ ಹೂವಿನಂತೆ ಇದೆ.

ಎರಡನೆಯ ತಪಸ್ವಿ: ಇವನು ಸುಮ್ಮನೆ ಬಿಡುವುದಿಲ್ಲ. ನೀನು ಹೋಗು. ನನ್ನ ಆಶ್ರಮದ ಹತ್ತಿರ ಋಷಿಕುಮಾರ ಮಾರ್ಕಂಡೇಯನ ಚಿತ್ರಿತವಾದ ನವಿಲಿನ ಆಟಿಕೆಯಿದೆ, ಅದನ್ನು ತೆಗೆದುಕೊಂಡು ಬಾ.

ಮೊದಲ ತಪಸ್ವಿ: ಸರಿ. 
(ನಿಷ್ಕ್ರಮಿಸುತ್ತಾಳೆ)

ಬಾಲಕ: ಅಲ್ಲಿಯವರೆಗೂ ಇದರ ಜೊತೆ ಆಟವಾಡುತ್ತೇನೆ.
(ಅವಳನ್ನು ನೋಡಿ ನಗುತ್ತಾನೆ)

ದುಷ್ಯಂತ: ಈ ಮಗುವಿನ ಬಗೆಗೆ ನನಗೆ ಇಷ್ಟ ಬೆಳೆಯುತ್ತಿದೆ. ಕಾರಣವಿಲ್ಲದೆ ನಗುವ, ತೊದಲು ಮಾತಾದರೂ ರಮಣೀಯವಾಗಿ ಮಾತಾಡುವ, ತೊಡೆಯಮೇಲೆ ಹತ್ತಲು ನುಗ್ಗಿ ಬರುವ ಈ ಮಕ್ಕಳ ಕಾಲಿನ ಧೂಳಿನಿಂದ ತಮ್ಮ ವಸ್ತ್ರವನ್ನು ಮಲಿನ ಮಾಡಿಕೊಳ್ಳುವ ತಂದೆಯರೇ ಧನ್ಯರು!

ತಪಸ್ವಿನಿ: ಇರಲಿ. ನಾನು ಗಮನಿಸುವುದಿಲ್ಲ.
(ಪಕ್ಕಕ್ಕೆ ನೋಡುತ್ತಾಳೆ)
ಋಷಿಕುಮಾರರು ಯಾರಾದರೂ ಇದ್ದಾರಾ?
(ರಾಜನನ್ನು ನೋಡಿ)
ನೀವು ಇಲ್ಲಿ ಬನ್ನಿ. ಗಟ್ಟಿಯಾಗಿ ಹಿಡಿದು ಹಿಂಸೆಮಾಡುತ್ತಿರುವ ಈ ತುಂಟನಿಂದ ಸಿಂಹದಮರಿಯನ್ನು ಬಿಡಿಸಿರಿ.

ದುಷ್ಯಂತ: (ನಗುತ್ತಾ ಹತ್ತಿರಬಂದು) ಮಹರ್ಷಿಪುತ್ರ! ಆಶ್ರಮ ವಿರುದ್ಧವಾದ ಈ ವೃತ್ತಿಯೇನು? ಚಂದನದ ಮರದಲ್ಲಿ ಘಟಸರ್ಪ ಬಂದಂತೆ, ಈ ಶಾಂತವಾದ ವನದಲ್ಲಿ ಪ್ರಾಣಿಹಿಂಸೆ ಮಾಡುತ್ತಿದ್ದೀಯ?

ತಪಸ್ವಿ: ಭದ್ರಮುಖ, ಇವನು ಋಷಿಕುಮಾರನಲ್ಲ.

ದುಷ್ಯಂತ: ಇವನ ಚಹರೆಯೇ ಅದನ್ನು ಹೇಳುತ್ತದೆ. ಆದರೂ ಆಶ್ರಮವೆಂದು ಹಾಗೇ ಹೇಳಿದೆ.
(ಸಿಂಹವನ್ನು ಬಿಡಿಸುತ್ತಾ, ಬಾಲಕನ ಸ್ಪರ್ಶದ ಅನುಭವವನ್ನು ಅನುಭವಿಸಿ, ಸ್ವಗತ)
ಯಾರೋ ಬೇರೆಯವರ ಮಗುವಾದ ಇವನು ನನ್ನ ತೊಡೆಯ ಮೇಲೆ ಕುಳಿತುಕೊಂಡಾಗ, ನನಗೇ ಇಷ್ಟು ಸಂತೋಷವಾದರೆ, ಇನ್ನು ಅವನ ತಂದೆಗೆ ಇನ್ನೆಷ್ಟು ಸಂತೋಷವಾಗಬಹುದು?

ತಪಸ್ವಿನಿ: (ಇಬ್ಬರನ್ನೂ ನೋಡಿ) ಆಶ್ಚರ್ಯ! ಆಶ್ಚರ್ಯ!

ದುಷ್ಯಂತ: ಏಕೆ? ಏನಾಯಿತು?

ತಪಸ್ವಿನಿ: ಬಾಲಕನ ಮತ್ತು ನಿಮ್ಮ ಮುಖದಲ್ಲಿ ಎಷ್ಟು ಹೋಲಿಕೆಗಳಿವೆ? ಇವನು ನಿಮ್ಮ ಹತ್ತಿರ ಎಷ್ಟು ಚೆನ್ನಾಗಿ ಹೊಂದಿಕೊಂಡಿದ್ದಾನೆ!

ದುಷ್ಯಂತ: (ಬಾಲಕನನ್ನು ಆಟವಾಡಿಸುತ್ತಾ) ಇವನು ಮುನಿಕುಮಾರನಲ್ಲದಿದ್ದರೆ, ಯಾವ ದೇಶದವನು?

ತಪಸ್ವಿನಿ: ಪುರುವಂಶದವನು.

ದುಷ್ಯಂತ: (ಸ್ವಗತ) ಇವನು ನಮ್ಮ ವಂಶದವನೇ! ಆದ್ದರಿಂದಲೇ ಇವರಿಗೆ ನಮ್ಮಿಬ್ಬರಲ್ಲಿ ಹೋಲಿಕೆ ಕಂಡುಬಂದದ್ದು. ಆದರೆ ಇದು ಹೇಗೆ? ನಮ್ಮ ವಂಶದವರು ಅಂತ್ಯದಲ್ಲಿ ವನವಾಸ ಮಾಡುತ್ತಾರೆ. ದೊಡ್ಡ ಭವನಗಳಲ್ಲಿ ಭೂಮಿಯ ರಕ್ಷಣಾರ್ಥವಾಗಿ ವಾಸಮಾಡಿ ಕೊನೆಯಲ್ಲಿ ಏಕಪತ್ನೀವ್ರತರಾಗಿ ತರುಮೂಲದಲ್ಲಿ ವಾನಪ್ರಸ್ಥರಾಗುತ್ತಾರೆ. 
(ಪ್ರಕಾಶ)
ಈ ಸ್ಥಳ ಮನುಷ್ಯರಿಗೆ ಸಿಕ್ಕತಕ್ಕದ್ದಲ್ಲವಲ್ಲ.

ತಪಸ್ವಿನಿ: ನೀವು ಹೇಳಿದ ಹಾಗೆ, ಇವನ ತಾಯಿ ಅಪ್ಸರೆಯ ಸಂಬಂಧಿ. ಅವಳು ಈ ಆಶ್ರಮದಲ್ಲಿಯೇ ಇವನಿಗೆ ಜನ್ಮ ಕೊಟ್ಟಳು.

ದುಷ್ಯಂತ: (ಸ್ವಗತ) ಒಹ್! ಇದು ನನಗೇ ಎರಡನೇ ಭರವಸೆ!
(ಪ್ರಕಾಶ)
ಇವನ ತಾಯಿ ಯಾವ ರಾಜರ್ಷಿಯ ಪತ್ನಿ?

ತಪಸ್ವಿನಿ: ಧಾರ್ಮಿಕಳಾದ ಪತ್ನಿಯನ್ನು ತ್ಯಜಿಸಿದವನನ್ನು ಯಾರು ನೆನಸಿಕೊಳ್ಳುತ್ತಾರೆ?

ದುಷ್ಯಂತ: (ಸ್ವಗತ) ಇದು ನನ್ನ ಕಥೆಯನ್ನೇ ಹೋಲುತ್ತಿದೆ. ಇವನ ತಾಯಿಯ ಹೆಸರನ್ನು ಕೇಳುತ್ತೇನೆ. ಆದರೆ ಬೇರೆಯವರ ಮನೆಯವರ ಬಗ್ಗೆ ಕೇಳುವುದು ಅನಾರ್ಯವಾಗುತ್ತದೆ.

(ನವಿಲಿನ ಆಟಿಕೆಯನ್ನು ಹಿಡಿದ ತಪಸ್ವಿನಿಯ ಪ್ರವೇಶ)

ತಪಸ್ವಿನಿ: ಸರ್ವದಮನ ಶಕುಂತಲಾವಣ್ಣವನ್ನ ನೋಡು. 
(ಶಕುಂತಲಾವಣ್ಣ [ಪ್ರಾಕೃತ] - ಇದಕ್ಕೆ ಎರಡು ಅರ್ಥ, ೧. ಶಕುಂತಲೆಯ ವರ್ಣ, ೨. ಪಕ್ಷಿಯ ಸುಕುಮಾರತೆ) 

ಬಾಲಕ: (ನೋಡುತ್ತಾ)
ನನ್ನ ತಾಯಿಯೆಲ್ಲಿ?

ಇಬ್ಬರೂ ತಪಸ್ವಿನಿಯರು: ನಾಮಸಾದೃಶ್ಯದಿಂದ ಮೋಸ ಹೋಗಿದ್ದಾನೆ ಇವನು!

ಎರಡನೇ ತಪಸ್ವಿನಿ: ಮಗನೇ, ಈ ಮಣ್ಣಿನ ನವಿಲನ್ನು ನೋಡು ಎಂದು ನಾನು ಹೇಳಿದ್ದು.

ದುಷ್ಯಂತ: (ಸ್ವಗತ) ಇವನ ತಾಯಿಯ ಹೆಸರು ಶಕುಂತಲೆಯೇ!? ಒಂದೇ ಹೆಸರಿನವರು ಅನೇಕರಿರಬಹುದು. ಇದೂ ಮರೀಚಿಕೆಯಂತೆಯೇ? ಹೆಸರಿನ ಪ್ರಸ್ತಾವದಿಂದಲೇ ನನಗೇ ದುಃಖವಾಗುತ್ತಿದೆ.

ಬಾಲಕ: ನನಗೇ ಈ ನವಿಲು ಬೇಕು.
(ನವಿಲನ್ನು ತೆಗೆದುಕೊಳ್ಳುತ್ತಾನೆ)

ಮೊದಲ ತಪಸ್ವಿ: (ಅವನನ್ನು ನೋಡಿ, ಉದ್ವೇಗದಿಂದ) ಹೋ! ನಿನ್ನ ಮಣಿಬದ್ದವಾದ ರಕ್ಷಾದಾರ ಕಾಣಿಸುತ್ತಿಲ್ಲವಲ್ಲ!

ದುಷ್ಯಂತ: ಗಾಬರಿ ಬೇಡ. ಸಿಂಹದ ಜೊತೆ ಆಟವಾಡುತ್ತಿದ್ದಾಗ ಕೈಯಿಂದ ಬಿದ್ದುಹೋಗಿರಬಹುದು. ತೆಗೆದುಕೊಳ್ಳಿ.
(ತೆಗೆದುಕೊಳ್ಳಲು ಹೋಗುತ್ತಾನೆ)

ಇಬ್ಬರೂ ತಪಸ್ವಿನಿಯರು: ಅದನ್ನು ಮುಟ್ಟಬೇಡಿ. ಒಹ್! ಮುಟ್ಟಿಯೇಬಿಟ್ಟರಲ್ಲ!
(ಇಬ್ಬರೂ ವಿಸ್ಮಯದಿಂದ ತಮ್ಮ ಎದೆಯ ಮೇಲೆ ಕೈಯಿಟ್ಟುಕೊಂಡು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾರೆ)

ದುಷ್ಯಂತ: ನನ್ನನ್ನೇಕೆ ತಡೆದಿರಿ?

ಮೊದಲ ತಪಸ್ವಿ: ಮಹಾರಾಜ ಕೇಳಿ, ಇದು ಇವನ ಜಾತಕರ್ಮದ ಸಮಯದಲ್ಲಿ ಕಶ್ಯಪರು ಕೊಟ್ಟ ಅಪರಾಜಿತಾ ಎಂಬ ಔಷಧಿ. ಇದು ಕೆಳಗೆ ಬಿದ್ದಾಗ, ಅವನು ಅಥವಾ ಅವನ ತಂದೆತಾಯಿಯರು ಮಾತ್ರ ತೆಗೆದುಕೊಳ್ಳಬೇಕು. ಬೇರೆಯವರು ಮುಟ್ಟಬಾರದು.

ದುಷ್ಯಂತ: ತೆಗೆದುಕೊಂಡರೆ?

ಮೊದಲ ತಪಸ್ವಿ: ಅದು ಸರ್ಪವಾಗಿ ಕಚ್ಚಿಬಿಡುತ್ತದೆ.

ದುಷ್ಯಂತ: ಇದನ್ನು ತಾವು ಯಾವಾಗಲಾದರೂ ನೋಡಿದ್ದೀರಾ?

ಇಬ್ಬರೂ: ಅನೇಕಬಾರಿ. 

ದುಷ್ಯಂತ: (ಸಂತೋಷವಾಗಿ, ಸ್ವಗತ) ನನ್ನ ಮನೋರಥ ಈಡೇರಿದ್ದಕ್ಕಾಗಿ ಸಂತೋಷಪಡದೆ ಹೇಗಿರಲು ಸಾಧ್ಯ!?
(ಬಾಲಕನನ್ನು ಅಪ್ಪಿಕೊಳ್ಳುತ್ತಾನೆ)

ಎರಡನೆಯ ತಪಸ್ವಿನಿ: ಸುವ್ರತೆ ಬಾ, ಈ ವೃತ್ತಾಂತವನ್ನು ವ್ರತದಲ್ಲಿರುವ ಶಕುಂತಲೆಗೆ ಹೇಳೋಣ.
(ನಿಷ್ಕ್ರಮಿಸುತ್ತಾರೆ)

ಬಾಲಕ: ನನ್ನನ್ನು ಬಿಡು. ನಾನೂ ಅಮ್ಮನ ಹತ್ತಿರ ಹೋಗುತ್ತೇನೆ.

ದುಷ್ಯಂತ: ಮಗನೇ, ನನ್ನ ಜೊತೆಯೇ ನಿನ್ನ ಅಮ್ಮನನ್ನು ನೋಡು.

ಬಾಲಕ: ನನ್ನ ಅಪ್ಪ ದುಷ್ಯಂತ. ನೀನಲ್ಲ.

ದುಷ್ಯಂತ: (ನಗುತ್ತಾ) ಈ ವಿವಾದವೇ ನಮಗೆ ಪ್ರಮಾಣವಾಗುತ್ತಿದೆ.

(ಶಕುಂತಲೆಯ ಪ್ರವೇಶ)

ಶಕುಂತಲೆ: ಸರ್ವದಮನನ ಔಷಧಿ ಕೆಳಗೆ ಬಿದ್ದಮೇಲೂ, ಅದು ಸರಿಯಾಗಿದೆಯೆಂದು ಕೇಳಿದಮೇಲೂ ನನಗೆ ಭಾಗ್ಯದ ಮೇಲೆ ಭರವಸೆ ಇಲ್ಲ. ಆದರೆ ಸಾನುಮತಿಯೂ ಹೇಳಿದ್ದಾಳೆ. ನಿಜವಿದ್ದರೂ ಇರಬಹುದು.

ದುಷ್ಯಂತ: (ಶಕುಂತಲೆಯನ್ನು ನೋಡಿ) ಒಹ್! ಅವಳು ಶಕುಂತಲೆಯೇ! ಧೂಳಿಡಿದ ವಸ್ತ್ರ, ವ್ರತಗಳಿಂದ ಕುಗ್ಗಿದ ಮುಖ, ಏಕವೇಣಿ, ನಿಷ್ಕರುಣನಾದ ನನ್ನ ಕಾರಣದಿಂದ ಶುದ್ಧಶೀಲೆಯಾದ ಇವಳು ವಿರಹವ್ರತವನ್ನು ಅನುಭವಿಸುತ್ತಿದ್ದಾಳೆ.

ಶಕುಂತಲೆ: (ಪಶ್ಚಾತ್ತಾಪದಿಂದ ವಿವರ್ಣನಾದ ರಾಜನನ್ನು ನೋಡಿ) ಇವರು ಆರ್ಯಪುತ್ರರಲ್ಲ ಅನಿಸುತ್ತಿದೆ. ಮತ್ತೆ ಇವನು ಯಾರು, ನನ್ನ ಮಗನ ರಕ್ಷಾಕವಚವನ್ನು ಮುಟ್ಟಿ ಅವನನ್ನು ಅಶುದ್ಧನನ್ನಾಗಿ ಮಾಡುತ್ತಿದ್ದಾನೆ?

ಬಾಲಕ: (ತನ್ನ ತಾಯಿಯ ಬಳಿ ಓಡಿಬಂದು) ಅಮ್ಮ, ಇವನ್ಯಾರೋ ಬಂದು ನೀನು ನನ್ನ ಮಗ ಎಂದು ಅಪ್ಪಿಕೊಳ್ಳುತ್ತಿದ್ದಾನೆ.

ದುಷ್ಯಂತ: ಪ್ರಿಯೇ, ನಾನು ನಿನ್ನ ಮೇಲೆ ತೋರಿಸಿದ ಕ್ರೌರ್ಯ ಇಂದು ನಾನು ನಿನ್ನ ಮುಂದೆ ಬಂದರೂ ನೀನು ನನ್ನನ್ನು ಗುರುತುಹಿಡಿಯದಂತೆ ಮಾಡುತ್ತಿದೆ.

ಶಕುಂತಲೆ: (ಸ್ವಗತ) ಹೃದಯವೇ, ಸಮಾಧಾನದಿಂದಿರು. ದೈವ ನನ್ನ ಕಡೆ ಅನುಕಂಪ ತೋರಿಸಿದೆ. ಇವರು ಆರ್ಯಪುತ್ರರೇ!

ದುಷ್ಯಂತ: ಪ್ರಿಯೇ, ನನಗೆ ಜ್ಞಾಪಕ ಬಂದಮೇಲೆ, ಗ್ರಹಣದ ನಂತರ ಚಂದ್ರನ ಬಳಿ ರೋಹಿಣಿ ಬಂದಂತೆ, ನೀನು ಬಂದು ನಿಂತಿದ್ದೀಯ. 

ಶಕುಂತಲೆ: ಆರ್ಯಪುತ್ರನಿಗೆ ಜಯವಾಗಲಿ.
(ಅರ್ಧ ಹೇಳಿ, ಗದ್ಗದಿತಳಾಗಿ ಸುಮ್ಮನಾಗುತ್ತಾಳೆ)

ದುಷ್ಯಂತ: ಸುಂದರಿ, ನಿನ್ನ ಮಾತು ಕಣ್ಣೀರಿನಿಂದ ತೊದಲಿದರೂ, ನಿನ್ನ ಜಯ ಶಬ್ದದಿಂದ, ನಿನ್ನ ಕೆಂಪಾದ ಸುಂದರ ಮುಖದಿಂದ ನಾನು ಗೆದ್ದಿದ್ದೇನೆ. 

ಬಾಲಕ: ಅಮ್ಮ, ಇವರು ಯಾರು?

ಶಕುಂತಲೆ: ವತ್ಸ, ನಿನ್ನ ಭಾಗ್ಯವನ್ನು ಕೇಳು.

ದುಷ್ಯಂತ: (ಶಕುಂತಲೆಯ ಕಾಲಿಗೆ ನಮಸ್ಕಾರ ಮಾಡುತ್ತಾ) ಶಕುಂತಲೆ, ನಿನ್ನ ಹೃದಯದಿಂದ ನಾನು ನಿನ್ನನ್ನು ಹೊರಹಾಕಿದ ಘಟನೆಯನ್ನು ಹೊರಹಾಕು. ಆಗ ನನ್ನ ಮನಸ್ಸು ಯಾವುದೊ ಮೋಹಕ್ಕೆ ಸಿಕ್ಕಿಕೊಂಡಿತ್ತು. ಕುರುಡನು ತನ್ನ ಕೊರಳಿಗೆ ಹಾಕಿದ ಹೂಮಾಲೆಯನ್ನು ಹಾವೆಂದು ಭ್ರಮಿಸಿ ಬಿಸಾಕುವಂತೆ ನಾನು ಪ್ರಬಲವಾದ ಅಂಧಕಾರದಿಂದ ನಿನ್ನನ್ನು ತಿರಸ್ಕರಿಸಿಬಿಟ್ಟೆ.

ಶಕುಂತಲೆ: ಆರ್ಯಪುತ್ರ, ಎದ್ದೇಳು. ಆ ದಿನಗಳಲ್ಲಿ ನಾನು ಮಾಡಿದ ಯಾವುದೋ ಅಪರಾಧದ ಪರಿಣಾಮವಾಗಿ ಹೀಗೆ ಆಯಿತು. ಇಂದು ಅದು ನಿವಾರಣೆಯಾಗಿ ಕರುಣೆಯಿಟ್ಟು ನೀವು ಇಲ್ಲಿಗೆ ಬಂದಿದ್ದೀರ.
(ದುಷ್ಯಂತ ಮೇಲೆ ಏಳುತ್ತಾನೆ)
ಈ ದುಃಖಿತೆಯು ನಿಮಗೆ ಹೇಗೆ ನೆನಪಾದಳು?

ದುಷ್ಯಂತ: ಮೊದಲು ನನ್ನ ದುಃಖವನ್ನು ಪರಿಹರಿಸಿಕೊಂಡು ನಂತರ ಹೇಳುತ್ತೇನೆ. ಮೋಹದಿಂದ ಅಂದು ಉಪೇಕ್ಷಿಸಿದಾಗ ಕಣ್ಣೀರು ನಿನ್ನ ತುಟಿಯವರೆಗೂ ಬಂದಿತ್ತು. ಇಂದು ಆ ಕಣ್ಣೀರನ್ನು ಒರೆಸಿ ಶೋಕಮುಕ್ತನಾಗುತ್ತೇನೆ. 
(ಕಣ್ಣೀರು ಒರೆಸುತ್ತಾನೆ)

ಶಕುಂತಲೆ: (ಬೆರಳಿನ ಉಂಗುರವನ್ನು ನೋಡುತ್ತಾ) ಇದು ಆ ಉಂಗುರವೇ!

ದುಷ್ಯಂತ: ಈ ಉಂಗುರವನ್ನು ಕಳೆದುಕೊಂಡದ್ದರಿಂದಲೇ ನನಗೆ ಮರೆತುಹೋದದ್ದು.

ಶಕುಂತಲೆ: ನೀವು ಗುರುತು ಹಿಡಿಯುವ ಕಾಲದಲ್ಲಿ ಇದು ತಪ್ಪಿಸಿಕೊಂಡು ಹೋಗಿ ನನಗೆ ಅನ್ಯಾಯ ಮಾಡಿಬಿಟ್ಟಿತು.

ದುಷ್ಯಂತ: ವಸಂತ ಬಂದ ಗುರುತಾಗಿ ಬಳ್ಳಿಯ ಮೇಲೆ ಹೂ ಕುಳಿತುಕೊಳ್ಳಲಿ.

ಶಕುಂತಲೆ: ಅದರಲ್ಲಿ ನನಗೆ ನಂಬಿಕೆಯಿಲ್ಲ. ಅದನ್ನು ನೀವೇ ಧರಿಸಿ.

(ಮಾತಲಿಯ ಪ್ರವೇಶ)

ಮಾತಲಿ: ಮಹಾರಾಜ ಧರ್ಮಪತ್ನೀ ಸಮಾಗಮನದಿಂದ, ಮಗನ ದರ್ಶನದಿಂದ ವರ್ಧಿಸುತ್ತಿದ್ದಾನೆ.

ದುಷ್ಯಂತ: ನನ್ನ ಮನೋರಥ ಸಿದ್ಧಿಯಾಗಿದೆ. ಈ ವಿಷಯ ಇಂದ್ರನಿಗೆ ತಿಳಿದಿಲ್ಲವೆನಿಸುತ್ತದೆ.

ಮಾತಲಿ: (ನಗುತ್ತಾ) ದೇವತೆಗಳಿಗೆ ತಿಳಿಯದುದು ಯಾವುದು? ನಡಿ, ಕಶ್ಯಪರು ನಿನಗೆ ದರ್ಶನವನ್ನು ಕೊಟ್ಟಿದ್ದಾರೆ.

ದುಷ್ಯಂತ: ಶಕುಂತಲೆ, ಮಗನನ್ನು ಹಿಡಿದುಕೊ. ನಿನ್ನನ್ನು ಮುಂದು ಮಾಡಿಕೊಂಡು ಕಶ್ಯಪರ ದರ್ಶನಕ್ಕೆ ಹೋಗುತ್ತೇನೆ.

ಶಕುಂತಲೆ: ನಿಮ್ಮ ಜೊತೆ ಗುರುಸಮೀಪಕ್ಕೆ ಹೋಗಲು ನನಗೆ ಲಜ್ಜೆಯಾಗುತ್ತದೆ.

ದುಷ್ಯಂತ: ಸಂತೋಷ ಕಾಲದಲ್ಲಿ ಇದು ಸರಿಯೇ! ನಡಿ, ನಡಿ.
(ಎಲ್ಲರೂ ಮುಂದೆ ಹೋಗುತ್ತಾರೆ)

(ಅದಿತಿಯ ಜೊತೆ ಆಸನಸ್ಥರಾದ ಕಶ್ಯಪರ ಪ್ರವೇಶ)

ಕಶ್ಯಪರು: (ದುಷ್ಯಂತನನ್ನು ತೋರಿಸಿ) ಅದಿತಿ, ನಿನ್ನ ಮಗನ ಯುದ್ಧಗಳಲ್ಲಿ ಮುಂದೆ ಹೋಗುವವನು ಇವನೇ! ಇವನ ಹೆಸರು ದುಷ್ಯಂತ, ಭೂಮಿಯ ರಾಜ. ಇವನ ಬಿಲ್ಲಿನ ಕಾರಣದಿಂದ ಇಂದ್ರನ ವಜ್ರಾಯುಧವು ಅವನಿಗೆ ಆಯುಧವಲ್ಲದೆ ಆಭರಣವಾಯಿತು.

ಅದಿತಿ: ಆಕೃತಿ ಗೌರವನೀಯವಾಗಿದೆ.

ಮಾತಲಿ: ಆಯುಷ್ಮನ್, ಇವರು ದೇವತೆಗಳ ತಂದೆ ತಾಯಿಯರು. ನಿನ್ನನ್ನು ಪುತ್ರಪ್ರೇಮದಿಂದ ನೋಡುತ್ತಿದ್ದಾರೆ. ಹತ್ತಿರ ಹೋಗು.

ದುಷ್ಯಂತ: ಮಾತಲಿ, ಇವರು ದ್ವಾದಶಾದಿತ್ಯರಿಗೆ ಮಾತಾಪಿತೃಗಳೂ, ಬ್ರಹ್ಮನಿಗಿಂತಲೂ ದೊಡ್ಡವನಾದ, ತ್ರಿಲೋಕಗಳಿಗೂ ಒಡೆಯನಾದ ವಿಷ್ಣುವಿಗೆ ವಾಮನಾವತಾರದಲ್ಲಿ ಜನ್ಮ ಕೊಟ್ಟವರೂ, ಎಲ್ಲ ಯಜ್ಞಗಳ ಭಾಗದೇಶ್ವರರೂ, ಮರೀಚಿ ಮತ್ತು ದಕ್ಷನ ಮಕ್ಕಳೂ ಆದ ಕಶ್ಯಪ ಮತ್ತು ಅದಿತಿಯರೇ?

ಮಾತಲಿ: ಹೌದು.

ದುಷ್ಯಂತ: (ಹತ್ತಿರ ಬಂದು) ನಿಮ್ಮಿಬ್ಬರಿಗೂ ಇಂದ್ರನ ಸೇವಕನಾದ ದುಷ್ಯಂತನ ನಮಸ್ಕಾರಗಳು.

ಕಶ್ಯಪರು: ವತ್ಸ, ಚಿರಂಜೀವಿಯಾಗಿ ಭೂಮಿಯನ್ನು ಪಾಲಿಸು.

ಅದಿತಿ: ಮಗನೇ, ಶತ್ರುವಿಲ್ಲದವನಾಗು.

ಶಕುಂತಲೆ: ನನ್ನ ಮಗನ ಸಮೇತ ನಮಸ್ಕಾರಮಾಡುತ್ತೇನೆ.

ಕಶ್ಯಪರು: ಮಗಳೇ, ನಿನ್ನ ಪತಿ ಇಂದ್ರನ ಸಮನಾದವನು. ಜಯಂತನ ಸಮನಾದ ಮಗನನ್ನು ಪಡೆದಿದ್ದೀಯ. ನಿನಗೆ ಬೇರೆ ಯಾವ ಆಶೀರ್ವಾದ ತಾನೇ ಯೋಗ್ಯ? ಶಚಿಸದೃಶಳಾಗಿರು.

ಅದಿತಿ: ಮಗಳೇ, ಪತಿಗೆ ಅನುರಕ್ತಳಾಗಿರು. ನಿನ್ನ ಮಗ ದೀರ್ಘಾಯುಷ್ಯವಂತನಾಗಿ ಉಭಯಕುಲಗಳಿಗೂ ಹೆಸರು ತರಲಿ. ಎಲ್ಲರೂ ಕುಳಿತುಕೊಳ್ಳಿ.
(ಎಲ್ಲರೂ ಕಶ್ಯಪರ ಸುತ್ತ ಕುಳಿತುಕೊಳ್ಳುತ್ತಾರೆ)

ಕಶ್ಯಪರು: (ಒಬ್ಬೊಬ್ಬರನ್ನೇ ನಿರ್ದೇಶಿಸುತ್ತಾ) ಶ್ರದ್ದೆ, ವಿತ್ತ ಮತ್ತು ವಿಧಿಗಳು ಒಟ್ಟಿಗೆ ಸೇರಿದಂತೆ ಅದೃಷ್ಟದಿಂದ ಶಕುಂತಲೆ, ನಿನ್ನ ಮಗ ಮತ್ತು ನೀನು ಒಟ್ಟಿಗೆ ಸೇರಿದ್ದೀರ.

ದುಷ್ಯಂತ: ಭಗವಾನ್, ಮೊದಲು ಅಭೀಷ್ಟ ಸಿದ್ದಿ. ನಂತರ ನಿಮ್ಮ ದರ್ಶನ. ಇದಕ್ಕಿಂತಲೂ ಹೆಚ್ಚಾದ ಅನುಗ್ರಹವೆಲ್ಲಿ? ಮೊದಲು ಹೂ ಬಂದು ಆಮೇಲೆ ಹಣ್ಣುಬರುತ್ತದೆ. ಮೋಡ ಬಂದಮೇಲೆ ಮಳೆ ಬರುತ್ತದೆ. ಮೊದಲು ಕಾರಣ, ಆಮೇಲೆ ಕಾರ್ಯ. ಆದರೆ ನಿಮ್ಮ ಅನುಗ್ರಹದಿಂದ ಕಾರ್ಯವಾದಮೇಲೆ ಕಾರಣಬಂದಂತಾಯಿತು.

ಮಾತಲಿ: ವಿಧಾತರ ಆಶೀರ್ವಾದ ಹೀಗೆಯೇ!

ದುಷ್ಯಂತ: ಭಗವನ್, ನಿಮ್ಮ ಗೋತ್ರದವರೇ ಆದ ಕಣ್ವರ ಮಗಳಾದ ಶಕುಂತಲೆಯನ್ನು ನಾನು ಗಾಂಧರ್ವ ವಿಧಿಯಿಂದ ಮದುವೆಯಾದೆ. ಸ್ವಲ್ಪ ದಿನವಾದ ಮೇಲೆ ಇವಳ ಬಂಧುಗಳು ನನ್ನ ಹತ್ತಿರ ಕರೆದುಕೊಂಡು ಬಂದಾಗ ಸ್ಮೃತಿಶೈಥಿಲ್ಯದಿಂದ ಇವಳನ್ನು ತಿರಸ್ಕರಿಸಿ ಅಪರಾಧ ಮಾಡಿದೆ. ಈ ಉಂಗುರವನ್ನು ನೋಡಿದ ತಕ್ಷಣ ಎಲ್ಲವೂ ಜ್ಞಾಪಕಕ್ಕೆ ಬಂದಿತು. ಇದೆಲ್ಲವೂ ವಿಚಿತ್ರವಾಗಿ ಕಾಣಿಸುತ್ತಿದೆ. ಎದುರಿಗೆ ಆನೆ ಬಂದಾಗ ಸಂಶಯಬಂದು, ಅದು ಹೋದಮೇಲೆ ಅದರ ಹೆಜ್ಜೆ ಗುರುತುಗಳನ್ನು ನೋಡಿ ಜ್ಞಾಪಕಬಂದಂತೆ ನನ್ನ ಮನಸ್ಸೂ ವಿಕಾರವಾಯಿತು.

ಕಶ್ಯಪರು: ವತ್ಸ, ಅಪರಾಧ ಶಂಕೆ ಬೇಡ. ಇದು ನಿನ್ನ ಮೋಹದಿಂದ ಆಗಿದ್ದಲ್ಲ. ಹೇಳುತ್ತೇನೆ ಕೇಳು.

ದುಷ್ಯಂತ: ಹೇಳಿ.

ಕಶ್ಯಪರು: ಶಕುಂತಲೆಯನ್ನು ಅಪ್ಸರತೀರ್ಥದಿಂದ ಮೇನಕೆ ಕರೆದುಕೊಂಡು ಅದಿತಿಯ ಬಳಿಗೆ ಬಂದಾಗಲೇ ನನಗೆ ಧ್ಯಾನದಿಂದ ಗೊತ್ತಾಯಿತು. ದೂರ್ವಾಸರ ಶಾಪದಿಂದ ಈ ಧರ್ಮಚಾರಿಣಿಗೆ ಹೀಗಾಯಿತು, ಬೇರೆ ಏನೂ ಅಲ್ಲ. ಈ ಉಂಗುರ ದರ್ಶನದಿಂದ ಎಲ್ಲವೂ ಸರಿಹೋಯಿತು.

ದುಷ್ಯಂತ: (ನಿಟ್ಟುಸಿರು ಬಿಡುತ್ತಾ) ಈ ಮಾತುಗಳಿಂದ ನನಗೆ ಬಿಡುಗಡೆಯಾಯಿತು.

ಶಕುಂತಲೆ: (ಸ್ವಗತ) ಕಾರಣವಿಲ್ಲದೆ ಇವರು ನನ್ನನ್ನು ತಿರಸ್ಕರಿಸಿಲ್ಲ. ಆದರೆ ನನಗೆ ಶಾಪದ ಬಗ್ಗೆ ನೆನಪಿಲ್ಲ. ಅಥವಾ ಶಾಪ ಬಂದಿದ್ದರೂ ವಿರಹದಿಂದಿದ್ದ ನನಗೆ ತಿಳಿಯಲಿಲ್ಲವೇನೋ. ಸಖಿಯರು ನನಗೆ ಉಂಗುರವನ್ನು ತೋರಿಸಲು ಹೇಳಿದ್ದರು. 

ಕಶ್ಯಪರು: ಮಗಳೇ, ನಿನಗೆ ಗೊತ್ತಾಯಿತು. ನಿನ್ನ ಪತಿಯ ಬಗ್ಗೆ ಕೋಪ ಬೇಡ. ವಸ್ತು ಸರಿಯಾಗಿದ್ದರೂ ಕಲುಷಿತಗೊಂಡ ಕನ್ನಡಿಯಲ್ಲಿ ಅದು ಸರಿಯಾಗಿ ಕಾಣದಿರುವಂತೆ, ಶಾಪದ ಕಾರಣದಿಂದ ಮರೆತುಹೋಗಿದ್ದ ಇವನಿಗೆ ನಿನ್ನ ಧಾರ್ಮಿಕತೆ ಕಾಣಲಿಲ್ಲ.

ದುಷ್ಯಂತ: ಋಷಿಗಳು ಹೇಳಿದಂತೆ.

ಕಶ್ಯಪರು: ವತ್ಸ, ನಮ್ಮಿಂದ ವಿಧಿವತ್ತಾಗಿ ಜಾತಕರ್ಮಗಳನ್ನು ಮಾಡಿಸಿಕೊಂಡ ನಿನ್ನ ಈ ಮಗ ನಿನಗೆ ಅಭಿನಂದನೀಯವಾದನೇ?

ದುಷ್ಯಂತ: ಇವನೇ ಅಲ್ಲವೇ ನಮ್ಮ ವಂಶದ ಪ್ರತಿಷ್ಠೆ!
(ಮಗನನ್ನು ಕೈಯಿಂದ ಹಿಡಿದುಕೊಳ್ಳುತ್ತಾನೆ)

ಕಶ್ಯಪರು: ಇವನನ್ನು ಮುಂದಿನ ಚಕ್ರವರ್ತಿಯೆಂದು ಸ್ವೀಕರಿಸು. ಸ್ಥಿಮಿತಗತಿಯಿಂದ ಓದುವ ಅಶ್ವಗಳ ರಥದ ಮೇಲೆ ಹೋಗುತ್ತಾ ಇವನು ಏಳು ದ್ವೀಪಗಳನ್ನೂ ಗೆಲ್ಲುತ್ತಾನೆ. ಇಲ್ಲಿ ಎಲ್ಲ ಪ್ರಾಣಿಗಳನ್ನೂ ಕಟ್ಟಿಹಾಕುತ್ತಿದ್ದರಿಂದ ಇವನು ಸರ್ವದಮನನಾದ. ಇನ್ನು ಮುಂದೆ ಲೋಕದ ಭಾರವನ್ನು ಹೊರುವುದರಿಂದ ಭರತ ಎಂದು ಪ್ರಸಿದ್ಧನಾಗುತ್ತಾನೆ.

ದುಷ್ಯಂತ: ನಿಮ್ಮಿಂದ ಸಂಸ್ಕಾರಿತನಾದ ಇವನ ಮೇಲೆ ನಮಗೆ ಎಲ್ಲ ವಿಶ್ವಾಸವಿದೆ.

ಅದಿತಿ: ಭಗವನ್, ಮಗಳ ಮನೋರಥ ಸಿದ್ಧಿಸಿದ ವಿಷಯವನ್ನು ಶಕುಂತಲೆಯ ತಂದೆ ಕಣ್ವರಿಗೂ ತಿಳಿಯುವಂತಾಗಲಿ. ಮೇನಕೆಯೇನೋ ಸೇವೆಮಾಡುತ್ತಾ ಇಲ್ಲೇ ಇದ್ದಾಳೆ.

ಶಕುಂತಲೆ: (ಸ್ವಗತ) ನನ್ನ ಆಸೆಯನ್ನೇ ಭಗವತಿಯವರು ಹೇಳಿದರು.

ಕಶ್ಯಪರು: ತಪಸ್ಸಿನ ಮೂಲಕ ಎಲ್ಲವೂ ಅವರಿಗೆ ಪ್ರತ್ಯಕ್ಷವಾಗಿದೆ.

ದುಷ್ಯಂತ: (ಸ್ವಗತ) ಆದ್ದರಿಂದಲೇ ಕಣ್ವರಿಗೆ ನನ್ನ ಮೇಲೆ ಕೋಪ ಬಂದಿಲ್ಲ.

ಕಶ್ಯಪರು: ಆದರೂ ಈ ಪ್ರಿಯವಿಷಯವನ್ನು ಅವರಿಗೆ ಹೇಳಲೇಬೇಕು. ಯಾರಲ್ಲಿ?
(ಶಿಷ್ಯನ ಪ್ರವೇಶ)

ಶಿಷ್ಯ: ಭಗವನ್, ಇಲ್ಲಿದ್ದೇನೆ.

ಕಶ್ಯಪರು: ಗಾಲವ, ಈಗಲೇ ಹೊರಟು ಮಹರ್ಷಿ ಕಣ್ವರಿಗೆ ನನ್ನ ಸಂದೇಶವೆಂದು, ದುಷ್ಯಂತ ಮರೆತದ್ದನ್ನು ಜ್ಞಾಪಿಸಿಕೊಂಡು ಶಕುಂತಲೆಯನ್ನು ಪರಿಗ್ರಹಸಿದ ಎಂದು ಹೇಳು.

ಶಿಷ್ಯ: ಅಪ್ಪಣೆ.
(ನಿಷ್ಕ್ರಮಿಸುತ್ತಾನೆ)

ಕಶ್ಯಪರು: ವತ್ಸ, ನೀನೂ ಪತ್ನೀ ಪುತ್ರ ಸಮೇತನಾಗಿ ರಥವನ್ನು ಹತ್ತಿ ನಿನ್ನ ರಾಜಧಾನಿಗೆ ಹಿಂತಿರುಗು.

ದುಷ್ಯಂತ: ಅಪ್ಪಣೆ.

ಕಶ್ಯಪರು: ಇಂದ್ರ ನಿನ್ನ ಪ್ರಜೆಗಳ ಮೇಲೆ ಒಳ್ಳೆಯ ಮಳೆ ಸುರಿಸಲಿ. ನೀನೂ ಯಜ್ಞಮುಖದಿಂದ ಅವನನ್ನು ತೃಪ್ತಿಪಡಿಸು. ಹೀಗೆ ನೀವಿಬ್ಬರೂ ಎರೆಡೂ ಲೋಕಗಳಿಗೂ ಅನುಕೂಲವಾಗುವಂತೆ ಅನ್ಯೋನ್ಯವಾಗಿ ಅನೇಕ ಯುಗಗಳ ಕಾಲ ಸೌಖ್ಯದಿಂದಿರಿ.

ದುಷ್ಯಂತ: ಭಗವನ್, ನಾನು ಯಥಾಶಕ್ತಿ ಪ್ರಯತ್ನಿಸುತ್ತೇನೆ.

ಕಶ್ಯಪರು: ವತ್ಸ, ನಿನಗಿನ್ನೇನು ಅನುಗ್ರಹಮಾಡಲಿ?

ದುಷ್ಯಂತ: ಇದಕ್ಕಿಂತಲೂ ಅನುಗ್ರಹ ಇನ್ನೇನಿದೆ? ನಿಮಗೆ ಅನುಗ್ರಹ ಮಾಡಬೇಕೆನಿಸಿದರೆ ಇದಿರಲಿ:

(ಭರತವಾಕ್ಯ)
ಪ್ರವರ್ತತಾಂ ಪ್ರಕೃತಿಹಿತಾಯ ಪಾರ್ಥಿವಃ
ಸರಸ್ವತೀ ಶ್ರುತಮಹತಾಂ ಮಹೀಯತಾಮ್ ।
ಮಮಾಪಿ ಚ ಕ್ಷಪಯತು ನೀಲಲೋಹಿತಃ
ಪುನರ್ಭವಂ ಪರಿಗತಶಕ್ತಿರಾತ್ಮಭೂಃ॥35॥

(ನೃಪರೆಲ್ಲರೂ ಪ್ರಜಾಹಿತಕ್ಕಾಗಿಯೇ ಬಾಳಲಿ. ವಿದ್ವಾಂಸರ ಮಾತಿಗೆ ಎಲ್ಲ ಕಡೆ ಬೆಲೆ ಬರಲಿ. ನೀಲಲೋಹಿತನಾದ ಶಿವನು ನನಗೂ ಪುನರ್ಜನ್ಮವಿರದಂತೆ ಮಾಡಲಿ)

(ಎಲ್ಲರೂ ನಿಷ್ಕ್ರಮಿಸುತ್ತಾರೆ)

(ಸಪ್ತಮಾಂಕವು ಸಮಾಪ್ತವಾದುದು)

ಅಭಿಜ್ಞಾನ ಶಾಕುಂತಲ ನಾಟಕವು ಸಮಾಪ್ತವಾದುದು.

Thursday, February 13, 2020

ಅಭಿಜ್ಞಾನ ಶಾಕುಂತಲ 6

                                                                               ದೃಶ್ಯ ೬

(ಒಬ್ಬ ಅಧಿಕಾರಿ ಮತ್ತು ಇಬ್ಬರು ನಗರ ರಕ್ಷಕರ ಪ್ರವೇಶ. ರಕ್ಷಕರು ಒಬ್ಬನನ್ನು ಹಿಡಿದಿದ್ದಾರೆ)

ರಕ್ಷಕರು: (ಮನುಷ್ಯನನ್ನು ಹೊಡೆಯುತ್ತಾ) ಏ! ಕಳ್ಳ! ರಾಜಮುದ್ರೆಯುರುವ ಈ ಮಣಿಯುಂಗುರ ನಿನ್ನಲ್ಲಿ ಹೇಗೆ ಬಂತು?

ಮನುಷ್ಯ: (ಭಯವನ್ನು ನಟಿಸುತ್ತಾ) ಸ್ವಾಮಿ, ಸಮಾಧಾನ ಮಾಡಿಕೊಳ್ಳಿ. ನಾನು ಕಳ್ಳನಲ್ಲ.

ಮೊದಲ ರಕ್ಷಕ: ಮತ್ತೆ ಏನು? ರಾಜ ನಿನ್ನನ್ನು ಶ್ರೋತ್ರೀಯ ಬ್ರಾಹ್ಮಣ ಎಂದು ಗಣಿಸಿ ಇದನ್ನು ಕೊಟ್ಟನೇ?

ಮನುಷ್ಯ: ಕೇಳಿ, ನಾನು ಶಕ್ರಾವತಾರದ ನಿವಾಸಿ. ನಾನೊಬ್ಬ ಬೆಸ್ತ.

ಎರಡನೆಯ ರಕ್ಷಕ: ಏ! ನಾವೇನು ನಿನ್ನ ಜಾತಿ ಕೇಳಿದೆವಾ?

ಅಧಿಕಾರಿ: ಅವನೇನು ಹೇಳುತ್ತಾನೋ ಕೇಳೋಣ ಬಿಡಿ. ಮಧ್ಯ ಮಾತಾಡಬೇಡಿ.

ರಕ್ಷಕರು: ಅಪ್ಪಣೆ. (ಮನುಷ್ಯನಿಗೆ) ನೀನು ಹೇಳು.

ಮನುಷ್ಯ: ನಾನು ಬಲೇ ಬೀಸಿ ಮೀನು ಹಿಡಿದು ಸಂಸಾರವನ್ನು ಮಾಡುತ್ತಿದ್ದೇನೆ.

ಅಧಿಕಾರಿ: (ವ್ಯಂಗವಾಗಿ ನಗುತ್ತಾ) ಏನು ಶುದ್ಧವಾದ ಜೀವನ!

ಮನುಷ್ಯ: ಸ್ವಾಮಿ ಹಾಗೆನ್ನಬೇಡಿ. ಸ್ವಧರ್ಮವು ನಿಂದಿತವಾದರೂ ಬಿಡಬಾರದು. ಯಜ್ಞಕ್ಕಾಗಿ ಪಶುವಧೆ ಮಾಡುವ ಶ್ರೋತ್ರಿಯನನ್ನೂ ಮೃದು, ಅನುಕಂಪಿ ಎನ್ನುವುದಿಲ್ಲವೇ?

ಅಧಿಕಾರಿ: ಸರಿ ಸರಿ. ಮುಂದೆ ಹೇಳು.

ಮನುಷ್ಯ: ಒಂದು ದಿನ ಕೆಂಪು ಮೀನನ್ನು ಕೊಯ್ಯುತ್ತಿದ್ದೆ. ಅದರ ಹೊಟ್ಟೆಯೊಳಗೆ ಈ ರತ್ನಮಯವಾದ ಉಂಗುರವು ಸಿಕ್ಕಿತು. ಅದನ್ನು ವಿಕ್ರಯ ಮಾಡಲು ತಂದಾಗ ಈ ನಿಮ್ಮ ಸೈನಿಕರು ನೋಡಿದರು. ನೀವು ಹೊಡೆಯಿರಿ, ಬಿಡಿರಿ. ನಡೆದಿದ್ದು ಇಷ್ಟೇ. 

ಅಧಿಕಾರಿ: ಈ ಉಂಗುರದ ವಾಸನೆ ನೋಡಿದರೆ ಇದು ಮೀನಿನ ಹೊಟ್ಟೆಯದೇ ಎಂಬುದು ನಿಸ್ಸಂಶಯ. ಇದನ್ನು ವಿಚಾರ ಮಾಡಬೇಕು. ರಾಜನ ಮನೆಗೇ ಹೋಗೋಣ.

ರಕ್ಷಕರು: ಸರಿ. ಮುಂದೆ ನಡೆಯೋ ಮನೆಹಾಳ.
(ಎಲ್ಲರೂ ಮುಂದೆ ಹೋಗುತ್ತಾರೆ)

ಅಧಿಕಾರಿ: ಸೂಚಕ, ಇವನ್ನು ಹಿಡಿದು ಈ ಗೋಪುರದ್ವಾರದಲ್ಲೇ ನಿಂತಿರು. ಈ ಉಂಗುರದ ಕಥೆಯನ್ನು ರಾಜರಿಗೆ ಹೇಳಿ ಅವರ ಆಜ್ಞೆಪಡೆದು ಬರುತ್ತೇನೆ.

ರಕ್ಷಕರು: ಸ್ವಾಮಿಗಳಿಗೆ ರಾಜಪ್ರಸಾದ ಸಿಗಲಿ.
(ಅಧಿಕಾರಿಯ ನಿಷ್ಕ್ರಮನ)

(ಸ್ವಲ್ಪಹೊತ್ತಾದ ಮೇಲೆ)
ಮೊದಲ ರಕ್ಷಕ: ಜಾನುಕ, ಸ್ವಾಮಿ ಎಷ್ಟು ಹೊತ್ತಾದರೂ ಬರಲಿಲ್ಲವಲ್ಲ.

ಎರಡನೆಯವ: ರಾಜರಿಗೆ ಸಮಯವಿದ್ದಾಗ ಮಾತ್ರ ಅವರನ್ನು ನೋಡಬೇಕು. 

ಮೊದಲನೆಯವ: ಜಾನುಕ, ಈ ಮನೆಹಾಳನನ್ನು ಕೊಲ್ಲಲು ನನ್ನ ಕೈಗಳು ಕಾಯುತ್ತಿವೆ.
(ಮನುಷ್ಯನನ್ನು ತೋರಿಸುತ್ತಾನೆ)

ಮನುಷ್ಯ: ಅಯ್ಯೋ, ಸ್ವಾಮಿ ಅಕಾರಣವಾಗಿ ನನ್ನನ್ನು ಕೊಲ್ಲಬೇಡಿ.

ಎರಡನೆಯವ: ಏ, ನಮ್ಮ ಅಧಿಕಾರಿಗಳು ರಾಜರ ಆಜ್ಞೆಯನ್ನು ಪಡೆದು ಬರಲಿ. ನೀನು ಹದ್ದುಗಳಿಗೆ ಬಲಿಯಾಗುತ್ತೀಯ, ಇಲ್ಲ ನಿನ್ನನ್ನು ನಾಯಿಗಳಿಗೆ ಹಾಕುತ್ತೀವಿ.

(ಅಧಿಕಾರಿಯ ಪ್ರವೇಶ)
ಅಧಿಕಾರಿ: ಸೂಚಕ, ಈ ಬಡಪಾಯಿಯನ್ನು ಬಿಟ್ಟುಬಿಡಿ. ಈ ಉಂಗುರದ ಕಥೆ ಗೊತ್ತಾಯಿತು.

ಸೂಚಕ: ನಿಮ್ಮ ಅಪ್ಪಣೆ. ಇವನು ಯಮನ ಬಾಗಿಲಿಗೆ ಹೋಗಿ ಹೊರಕ್ಕೆ ಬಂದ. 
(ಅವನನ್ನು ಬಿಡುತ್ತಾರೆ)

ಮನುಷ್ಯ: (ಅಧಿಕಾರಿಗೆ ನಮಸ್ಕಾರ ಮಾಡಿ) ಸ್ವಾಮಿ, ನನ್ನ ಜೀವ ನಿಮಗೆ ಋಣಿ.

ಅಧಿಕಾರಿ: ಸ್ವಾಮಿಗಳು ಈ ಉಂಗುರವನ್ನು ಪಡೆದು, ಅದಕ್ಕೆ ಸಮನಾದ ಹಣವನ್ನೂ ಕೊಟ್ಟಿದ್ದಾರೆ. ತೆಗೆದುಕೋ.
(ಅವನಿಗೆ ಕೊಡುತ್ತಾನೆ)

ಮನುಷ್ಯ: (ನಮಸ್ಕಾರ ಮಾಡಿ ಸ್ವೀಕರಿಸಿ) ಅನುಗ್ರಹೀತನಾದೆ. 

ಸೂಚಕ: ಇವನನ್ನು ಶೂಲದಿಂದ ತೆಗೆದು ಆನೆಯ ಮೇಲೆ ಕೂರಿಸಿದಂತಾಯಿತು.

ಜಾನುಕ: ಸ್ವಾಮಿ ಈ ಪಾರಿತೋಷಕವನ್ನು ನೋಡಿದರೆ ರಾಜರಿಗೆ ತುಂಬಾ ಸಂತೋಷವಾದಂತಿದೆ.

ಅಧಿಕಾರಿ: ರಾಜರು ಈ ಉಂಗುರದ ಬೆಲೆಯನ್ನು ಗಮನಿಸಿದ್ದಾರೆಂದು ನನಗೆ ಅನಿಸುವುದಿಲ್ಲ. ಇದನನ್ನು ನೋಡಿ ರಾಜರು ಯಾರೋ ಇಷ್ಟವಾದವರನ್ನು ನೆನಪಿಸಿಕೊಂಡರು. ಸ್ವಲ್ಪ ಹೊತ್ತು ಗಂಭೀರವಾಗಿ ಕುಳಿತಿದ್ದರು. ಕಣ್ಣಿನಲ್ಲಿ ನೀರಿತ್ತು.

ಸೂಚಕ: ಸ್ವಾಮಿಗಳು ಶ್ರಮಪಟ್ಟಂತಾಯಿತು.

ಜಾನುಕ: ಹೌದು, ಅದೂ ಇವನ ಕಾರಣದಿಂದ.
(ಬೆಸ್ತನ ಕಡೆ ಅಸೂಯೆಯಿಂದ ನೋಡುತ್ತಾನೆ)

ಮನುಷ್ಯ: ಸ್ವಾಮಿ, ಇದರಲ್ಲಿ ಅರ್ಧಭಾಗ ನಿಮ್ಮ ಹೂವಿನ ಖರ್ಚಿಗೆ ಇರಲಿ.

ಜಾನುಕ: ಇದು ಸರಿಯಾಯಿತು.

ಅಧಿಕಾರಿ: ಬೆಸ್ತ, ಈಗ ನೀನು ನನಗೆ ಎಂಥ ಒಳ್ಳೆ ಸ್ನೇಹಿತನಾಗಿಬಿಟ್ಟೆ. ಹೆಂಡದ ಸಾಕ್ಷಿಯಾಗಿ ನಮ್ಮ ಸ್ನೇಹದ ಮೊದಲ ಸೌಹಾರ್ದವನ್ನು ಮಾಡೋಣ. ನಡಿ, ಅಂಗಡಿಗೆ ಹೋಗೋಣ.
(ಎಲ್ಲರೂ ನಿಷ್ಕ್ರಮಿಸುತ್ತಾರೆ)

(ಆಕಾಶದಲ್ಲಿ ಸಾನುಮತಿ ಎಂಬ ಅಪ್ಸರೆಯ ಪ್ರವೇಶ)
ಸಾನುಮತಿ: ಈಗ ಸಾಧುಗಳು ಅಪ್ಸರತೀರ್ಥದಲ್ಲಿ ಪುಣ್ಯಸ್ನಾನ ಮಾಡುವ ಕಾಲ. ಹೇಗೂ ಬಂದಿದ್ದೇನೆ, ಈ ರಾಜರ್ಷಿಯನ್ನು ಒಂದು ಬಾರಿ ನೋಡಿಕೊಂಡು ಹೋಗೋಣ. ಮೇನಕೆಯ ಸಂಬಂಧದಿಂದ ಶಕುಂತಲೆ ನನಗೂ ಆತ್ಮೀಯಳೇ. ಅವಳ ತಾಯಿ ಇವನನ್ನು ನೋಡಲು ಹೇಳಿಯೂ ಇದ್ದಾಳೆ.
(ಸುತ್ತ ನೋಡುತ್ತಾ)
ಇದೇನು ಪರ್ವ ಸಮಯದಲ್ಲಿ ರಾಜಕುಲ ಇನ್ನೂ ಉತ್ಸವವನ್ನು ಆರಂಭಿಸಿದಂತೆ ಕಾಣುವುದಿಲ್ಲವಲ್ಲ. ನನ್ನ ದಿವ್ಯಶಕ್ತಿಯಿಂದ ಎಲ್ಲವನ್ನೂ ತಿಳಿಯಬಹುದು, ಆದರೂ ನನ್ನ ಸಖಿಯ ಮಾತನ್ನು ಗೌರವಿಸಬೇಕು. ನೋಡಿಕೊಂಡೇ ಹೋಗೋಣ. ಮಾಯವಾಗಿ, ಈ ಉದ್ಯಾನಪಾಲಿಕೆಯರ ಪಕ್ಕದಲ್ಲಿ ಕೂತು ಕೇಳಿಸಿಕೊಳ್ಳುತ್ತೇನೆ.
(ಹಾಗೆಯೇ ನಿಂತುಕೊಳ್ಳುತ್ತಾಳೆ)

(ಮಾವಿನ ಚಿಗುರನ್ನು ನೋಡುತ್ತಾ ಚೇಟಿಯ ಪ್ರವೇಶ, ಅವಳ ಹಿಂದೆ ಮತ್ತೊಬ್ಬಳು)

ಮೊದಲನೆಯವಳು: (ಸ್ವಗತ)  ಕೋಗಿಲೆಗಳನ್ನು ಸಂತೋಷಗೊಳಿಸುವ ಈ ಮಾವಿನ ಮರದ ಚಿಗುರು ವಸಂತಮಾಸದ ಮೊದಲ ಮಂಗಳಕರವಾದ ಸೂಚನೆ.

ಎರಡನೆಯವಳು: ಪರಭೃತಿಕೆ, ಒಬ್ಬಳೇ ಏನನ್ನು ಯೋಚಿಸುತ್ತಿದ್ದೀಯ?

ಪರಭೃತಿಕೆ: ಮಧುಕರಿಕೆ, ಈ ಮಾವಿನ ಚಿಗುರನ್ನು ನೋಡಿ ಕೋಗಿಲೆ ಎಷ್ಟು ಸಂತೋಷವಾಗಿದೆ.

ಮಧುಕರಿಕೆ: (ಹತ್ತಿರ ಬಂದು) ಒಹೋ! ವಸಂತ ಮಾಸ ಬಂದುಬಿಟ್ಟಿತೇ?

ಪರಭೃತಿಕೆ: ಮಧುಕರಿಕೆ, ಹೌದು, ನಮ್ಮ ಮದವಿಭ್ರಮ ಗೀತೆಗಳಿಗೆ ಇದೇ ಕಾಲ.

ಮಧುಕರಿಕೆ: ನನ್ನನ್ನು ಹಿಡಿದುಕೊ, ಮರಹತ್ತಿ, ಚಿಗುರನ್ನು ಬಿಡಿಸಿ, ಕಾಮದೇವನನ್ನು ಅರ್ಚನೆ ಮಾಡುತ್ತೇನೆ.

ಪರಭೃತಿಕೆ: ನಿನ್ನ ಅರ್ಚನೆಯ ಫಲದಲ್ಲಿ ನನಗೂ ಅರ್ಧ ಕೊಡಬೇಕು.

ಮಧುಕರಿಕೆ: ಅಯ್ಯೋ, ನೀನು ಕೇಳದಿದ್ದರೂ ನಾನು ಕೊಡುತ್ತೇನೆ. ನಮ್ಮಿಬ್ಬರದೂ ಎರಡು ದೇಹವಾದರೂ ಒಂದೇ ಜೀವ.
(ಗೆಳತಿಯನ್ನು ಹಿಡಿದು ಚಿಗುರನ್ನು ಬಿಡಿಸುತ್ತಾಳೆ)
ಒಹ್! ಪೂರ್ಣವಾಗಿ ಅರಳದಿದ್ದರೂ ಈ ಹೂ ಸುವಾಸನೆಯನ್ನು ಬೀಸುತ್ತಿದೆ.
(ಚಿಗುರನ್ನು ಎರೆಡೂ ಕೈಗಳಲ್ಲಿ ಹಿಡಿದು)
ಧನಸ್ಸನ್ನು ಹಿಡಿದ ಮನ್ಮಥನೇ, ನನ್ನಿಂದ ಬಿಡಿಸಿದ ಈ ಮಾವಿನ ಚಿಗುರನ್ನು ಕೊಡುತ್ತಿದ್ದೇನೆ.  ಯುವತಿಯರಿಗಾಗಿ ಇರುವ ನಿನ್ನ ಐದು ಬಾಣಗಳ ಜೊತೆ ಇದು ನಿನಗೆ ಆರನೇ ಬಾಣವಾಗಲಿ.
(ಹೀಗೆ ಹೇಳಿ ಚಿಗುರನ್ನು ಅರ್ಘ್ಯ ಕೊಡುವಂತೆ ಕೆಳಗೆ ಹಾಕುತ್ತಾಳೆ)

(ತಕ್ಷಣ ತೆರೆಯನ್ನು ಸರಿಸಿ ಕುಪಿತನಾದ ಕಂಚುಕಿಯ ಪ್ರವೇಶ)
ಕಂಚುಕಿ: ಬುದ್ಧಿಯಿಲ್ಲದವಳೇ, ನಿಲ್ಲಿಸು! ರಾಜರಿಂದ ವಸಂತೋತ್ಸವ ನಿಷಿದ್ಧವಾಗಿರುವಾಗ ಮಾವಿನ ಚಿಗುರನ್ನೇಕೆ ಕೀಳುತ್ತಿದ್ದೀಯ?

ಇಬ್ಬರೂ: (ಭೀತರಾಗಿ) ಆರ್ಯ ಸಮಾಧಾನ ಮಾಡಿಕೊಳ್ಳಿ, ನಮಗೆ ತಿಳಿದಿರಲಿಲ್ಲ.

ಕಂಚುಕಿ: ರಾಜನ ಆಜ್ಞೆಯನ್ನು, ಪಕ್ಷಿಗಳೂ, ತರುಗಳೂ ಅನುಸರಿಸುತ್ತಿರುವಾಗ, ಅದು ನಿಮಗೆ ತಿಳಿದಿಲ್ಲವೇ? ಮಾವಿನ ಮರಗಳು ಇನ್ನೂ ಚಿಗುರಿಲ್ಲ. ಕುರಬಕ ಬಳ್ಳಿಗಳು ಮೊಗ್ಗು ಬಿಟ್ಟಿದ್ದರೂ, ಇನ್ನೂ ಅರಳಿಲ್ಲ. ಕೋಗಿಲೆಗಳು ತಮ್ಮ ಹಾಡನ್ನು ಕಂಠದಲ್ಲೇ ಹುದುಗಿಸಿವೆ. ಮನ್ಮಥನೂ ಶಂಕೆಯಿಂದ ಎತ್ತಿದ ಬಿಲ್ಲನ್ನು ತನ್ನ ಬತ್ತಳಿಕೆಯಲ್ಲಿ ಸೇರಿಸುತ್ತಿದ್ದಾನೆ. 

ಸಾನುಮತಿ: ಸಂದೇಹವಿಲ್ಲ. ರಾಜರ್ಷಿ ಮಹಾಪ್ರಭಾವಿಯೇ!

ಪರಭೃತಿಕೆ: ಆರ್ಯ, ನಾವು ಸ್ವಲ್ಪ ದಿನದ ಹಿಂದೆಯಷ್ಟೇ ರಾಜರ ಭಾವಮೈದುನರಾದ ಮಿತ್ರಾವಸುಗಳಿಂದ ಇಲ್ಲಿಗೆ ಕಳುಹಿಸಲ್ಪಟ್ಟೆವು. ಅಂದಿನಿಂದ ನಾವು ಈ ವನವನ್ನು ಪಾಲನೆ ಮಾಡುತ್ತಿದ್ದೇವೆ. ಆದ್ದರಿಂದ ನಮಗೆ ಈ ವೃತ್ತಾಂತ ತಿಳಿದಿಲ್ಲ.

ಕಂಚುಕಿ: ಇರಲಿ. ಇನ್ನು ಮುಂದೆ ಹೀಗೆ ಮಾಡಬೇಡಿ.

ಇಬ್ಬರೂ: ಆರ್ಯ, ನಮಗೆ ಕುತೂಹಲವಾಗಿದೆ. ನಾವು ಕೇಳಬಹುದಾದರೆ ಹೇಳಿ. ರಾಜರಿಂದ ವಸಂತೋತ್ಸವ ಏಕೆ ನಿಷಿದ್ಧವಾಗಿದೆ?

ಸಾನುಮತಿ: ಮನುಷ್ಯರು ಉತ್ಸವಪ್ರಿಯರು. ಏನೋ ಬಲವಾದ ಕಾರಣವಿರಬೇಕು.

ಕಂಚುಕಿ: ಏಕಾಗಬಾರದು? ಇದು ಆಗಲೇ ಎಲ್ಲರಿಗೂ ತಿಳಿದಿದೆ. ಶಕುಂತಲೆಯ ಕಥೆ ನಿಮ್ಮ ಕಿವಿಗೆ ಬಿದ್ದಿಲ್ಲವೇ?

ಇಬ್ಬರೂ: ಮುಖ್ಯರಿಂದ, ಉಂಗುರದ ದರ್ಶನದ ಬಗ್ಗೆ ಕೇಳಿದ್ದೇವೆ.

ಕಂಚುಕಿ: ಹಾಗಾದರೆ ನೀವು ಕೇಳುವುದು ಇನ್ನೂ ಸ್ವಲ್ಪ ಇದೆ. ಆ ಉಂಗುರವನ್ನು ನೋಡಿದ ಕೂಡಲೇ ನಮ್ಮ ರಾಜರಿಗೆ ಸತ್ಯವತಿಯಾದ ಶಕುಂತಲೆಯನ್ನು ಪೂರ್ವದಲ್ಲಿ ರಹಸ್ಯವಾಗಿ ಮದುವೆಯಾದದ್ದು ಜ್ಞಾಪಕಕ್ಕೆ ಬಂದಿತು. ಆಗಿನಿಂದ ರಾಜರು ಪಶ್ಚಾತ್ತಾಪ ಪಡುತ್ತಿದ್ದಾರೆ. ಅಂದಿನಿಂದ ಅವರಿಗೆ ಪ್ರಕೃತಿಯ ಮೇಲೆ ಆಸೆಯಿಲ್ಲ. ಪ್ರಜೆಗಳ ಮೇಲೆ ಮನಸ್ಸಿಲ್ಲ. ಹಾಸಿಗೆಯ ಮೇಲೆ ಹೊರಳಾಡುತ್ತಲೇ ತನ್ನ ರಾತ್ರಿಯನ್ನು ಕಳೆಯುತ್ತಿದ್ದಾರೆ. ಅಂತಃಪುರದ ಸ್ತ್ರೀಯರು ಮಾತನಾಡಿಸಿದರೆ ದಾಕ್ಷಿಣ್ಯದಿಂದಲೇ ಮಾತಾಡಿಸುತ್ತಿದ್ದಾರೆ. ಅವರ ಹೆಸರುಗಳನ್ನೂ ತಪ್ಪಾಗಿ ಹೇಳಿ ಮತ್ತೆ ಅದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ.

ಸಾನುಮತಿ: ನನಗೆ ಪ್ರಿಯವಾಗಿದೆ.

ಕಂಚುಕಿ: ಆದ್ದರಿಂದಲೇ ಪ್ರಭುಗಳ ವೈಮನಸ್ಸಿನಿಂದ ಉತ್ಸವಗಳನ್ನು ನಿಲ್ಲಿಸಲಾಗಿದೆ. 

ಇಬ್ಬರೂ: ಸರಿಯಾಗಿದೆ.

(ನೇಪಥ್ಯದಲ್ಲಿ)
ಇಲ್ಲಿ, ಇಲ್ಲಿ, ಭಗವನ್!

ಕಂಚುಕಿ: (ಆ ಕಡೆ ಕಿವಿಕೊಡುತ್ತಾ) ಒಹ್! ರಾಜರು ಬರುತ್ತಿದ್ದರೆ. ನಿಮ್ಮ ನಿಮ್ಮ ಕೆಲಸದಲ್ಲಿ ತೊಡಗಿ.

ಇಬ್ಬರೂ: ಹಾಗೆಯೇ ಆಗಲಿ.
(ನಿಷ್ಕ್ರಮಿಸುತ್ತಾರೆ)

(ಪ್ರತೀಹಾರಿ, ವಿದೂಷಕರ ಜೊತೆ ಪಶ್ಚಾತ್ತಾಪದಿಂದಿರುವ ರಾಜನ ಪ್ರವೇಶ)

ಕಂಚುಕಿ: (ರಾಜನನ್ನು ನೋಡಿ) ಒಹ್! ಸರ್ವಾವಸ್ಥೆಯಲ್ಲಿಯೂ ಕೆಲವರು ರಮಣೀಯವಾಗಿರುತ್ತಾರೆ. ಉತ್ಸುಕನಾಗಿದ್ದರೂ ನಮ್ಮ ಮಹಾರಾಜ ಪ್ರಿಯದರ್ಶನನಾಗಿದ್ದಾನೆ. ತನ್ನ ಸಹಜವಾದ ರಾಜ ಪೋಷಾಕನ್ನು ಬಿಟ್ಟು, ತನ್ನ ಎಡಗೈಗೆ ಕೇವಲ ಒಂದು ಬಂಗಾರದ ಆಭರಣವನ್ನು ಹಾಕಿಕೊಂಡಿದ್ದಾನೆ. ನಿಟ್ಟುಸಿರು ಬಿಡುತ್ತಾ ಕಣ್ಣುಗಳು ನಿದ್ದೆಯಿಲ್ಲದೆ ಸ್ವಲ್ಪ ಕಾಂತಿಯನ್ನು ಕಳೆದುಕೊಂಡಿವೆ. ಆದರೂ ಸಂಸ್ಕಾರ ಮಾಡಿದ ವಜ್ರದಂತೆ ಅದು ಎದ್ದು ಕಾಣುತ್ತಿಲ್ಲ.

ಸಾನುಮತಿ: (ರಾಜನನ್ನು ನೋಡಿ) ತಿರಸ್ಕರಿಸಲ್ಪಟ್ಟರೂ, ಇಂಥವನಿಗಾಗಿ ಶಕುಂತಲೆ ವ್ಯಥೆಪಡುತ್ತಿರುವುದು ಸರಿಯಾಗಿಯೇ ಇದೆ!

ದುಷ್ಯಂತ: (ನಿಧಾನವಾಗಿ ನಡೆಯುತ್ತಾ, ಧ್ಯಾನಾಸಕ್ತನಾಗಿ) ಮೊದಲು ಅವಳು ಎಚ್ಚರಿಸಿದರೂ ಸುಪ್ತವಾಗಿದ್ದ ನನ್ನ ಮನಸ್ಸು ಇಂದು ಅವಳ ವಿರಹದಿಂದ ಎಚ್ಚರವಾಗಿದೆ!

ಸಾನುಮತಿ: ನಮ್ಮ ಶಕುಂತಲೆಗೆ ಭಾಗ್ಯದ ದಿನಗಳು ಬಂದಂತಿದೆ. 

ವಿದೂಷಕ: (ಪಕ್ಕದಲ್ಲಿ) ನಮ್ಮ ರಾಜನಿಗೆ ಶಕುಂತಲೆಯ ಖಾಯಿಲೆ ಬಂದುಬಿಟ್ಟಿದೆ. ಇದು ಇನ್ನು ಯಾವಾಗ ವಾಸಿಯಾಗುತ್ತದೆಯೋ ನನಗೆ ಗೊತ್ತಿಲ್ಲ!

ಕಂಚುಕಿ: (ಹತ್ತಿರ ಬಂದು) ಮಹಾರಾಜರಿಗೆ ಜಯವಾಗಲಿ. ಮಹಾರಾಜ, ಈ ಪ್ರಮದಾವನವನ್ನು ಸಿಂಗರಿಸಲಾಗಿದೆ. ತಾವು ಇಷ್ಟ ಬಂದಷ್ಟು ಹೊತ್ತು ಇಲ್ಲಿ ಕಾಲ ಕಳೆಯಬಹುದು.

ದುಷ್ಯಂತ: ವೇತ್ರವತಿ, ನಾನು ಹೇಳಿದೆನೆಂದು ಅಮಾತ್ಯ ಆರ್ಯಾಪಿಶುಣರಿಗೆ ಹೇಳು: ಮನಸ್ಸು ಸರಿಯಾಗಿಲ್ಲದ ಕಾರಣ ನಾನು ಇಂದು ಧರ್ಮಾಸನವನ್ನು ಏರಲು ಸಾಧ್ಯವಿಲ್ಲ. ಯಾವುದಾದರೂ ಪೌರಕಾರ್ಯವಿದ್ದರೆ ಅದನ್ನು ಪತ್ರದ ಮೂಲಕ ನನಗೆ ತಿಳಿಸಲಿ.

ಪ್ರತೀಹಾರಿ: ಅಪ್ಪಣೆ.
(ನಿಷ್ಕ್ರಮಿಸುತ್ತಾಳೆ)

ದುಷ್ಯಂತ: (ಕಂಚುಕಿಗೆ) ನೀನೂ ನಿನ್ನ ಕೆಲಸವನ್ನು ನೋಡಿಕೋ.

ಕಂಚುಕಿ: ಅಪ್ಪಣೆ ಸ್ವಾಮಿ.
(ನಿಷ್ಕ್ರಮಿಸುತ್ತಾನೆ)

ವಿದೂಷಕ: ಎಲ್ಲ ಸೊಳ್ಳೆಗಳನ್ನೂ ಓಡಿಸಿದ್ದಾಯಿತು. ಬಿಸಿಲನ್ನು ಓಡಿಸಿ ತಂಪಾಗಿರುವ ಈ ಪ್ರಮದಾವನದಲ್ಲಿ ಮನಸ್ಸನ್ನು ಹದಮಾಡಿಕೊ.

ದುಷ್ಯಂತ: ಮಾಧವ್ಯ, ಅನರ್ಥಗಳು ದುರ್ಬಲ ಸ್ಥಳಗಳಲ್ಲೇ ನುಗ್ಗುತ್ತವೆ ಎಂದು ಹೇಳುತ್ತಾರೆ. ಶಕುಂತಲೆಯ ಮರೆವಿನಿಂದ ನನಗೆ ಬಿಡುಗಡೆ ಸಿಕ್ಕಿದೆ. ಆದರೆ, ಈಗ ಮನ್ಮಥ ತನ್ನ ಬಿಲ್ಲಿಗೆ ಈ ಮಾವಿನ ಮರದ ಚಿಗುರಿನ ಬಾಣವನ್ನು ಹೂಡಿದ್ದಾನೆ.

ವಿದೂಷಕ: ಸ್ವಲ್ಪ ಇರು. ಈ ಕೋಲಿನಿಂದ ಮನ್ಮಥನ ಬಾಣವನ್ನು ಮುರಿಯುತ್ತೇನೆ.
(ಎದ್ದು ಕೋಲು ಹಿಡಿದು ಮಾವಿನ ಚಿಗುರನ್ನು ಕೀಳಲು ಯತ್ನಿಸುತ್ತಾನೆ)

ದುಷ್ಯಂತ: (ನಗುತ್ತಾ) ಇರಲಿ ಬಿಡು. ನಿನ್ನ ಬ್ರಹ್ಮವರ್ಚಸ್ಸನ್ನು ನೋಡಿದ್ದೇನೆ. ಮಾಧವ್ಯ, ಎಲ್ಲಿ ಕೂರೋಣ? ಶಕುಂತಲೆಯನ್ನು ಜ್ಞಾಪಿಸಿ ಅಣಕಿಸುವಂತಿರುವ ಈ ಮರಗಳಿಂದ ನನ್ನ ದೃಷ್ಟಿಯನ್ನು ಬೇರೆ ಕಡೆ ತಿರುಗಿಸಬೇಕು.

ವಿದೂಷಕ: ನಾನು ಈ ಸಮಯದಲ್ಲಿ ಮಾಧವೀ ಮಂಟಪದ ಬಳಿ ಇರುತ್ತೇನೆ, ಅಲ್ಲಿಗೆ ನನ್ನ ಕೈಯಿಂದಲೇ ಬರೆದ ಶಕುಂತಲೆಯ ಚಿತ್ರವನ್ನು ತೆಗೆದುಕೊಂಡು ಬಾ ಎಂದು ನಿನ್ನ ಪರಿಚಾರಿಕೆ ಚತುರಿಕೆಗೆ ಹೇಳಿದ್ದೆಯಲ್ಲ. ಅಲ್ಲಿಗೆ ಹೋಗೋಣ. 

ದುಷ್ಯಂತ: ಅದೇ ನನ್ನ ಹೃದಯವಿನೋದ ಸ್ಥಾನ. ಅದರ ದಾರಿಯೆಲ್ಲಿ?

ವಿದೂಷಕ: (ದಾರಿ ತೋರಿಸುತ್ತಾ) ಇತ್ತ, ಇತ್ತ. 
(ಇಬ್ಬರೂ ಮುಂದೆ ಹೋಗುತ್ತಾರೆ. ಸಾನುಮತಿ ಅವರನ್ನು ಹಿಂಬಾಲಿಸುತ್ತಾಳೆ.)
ಈ ಮಾಧವೀ ಮಂಟಪ ಮಣಿಶಿಲೆಯ ಆಸನದಿಂದ ನಮ್ಮನ್ನೇ ಆದರದಿಂದ ಕಾಯುತ್ತಿರುವಂತಿದೆ. ಒಳಗೆ ಬಂದು ಇಲ್ಲಿ ಕುಳಿತುಕೋ.

(ಇಬ್ಬರೂ ಒಳಗೆ ಬಂದು ಕೂರುತ್ತಾರೆ)

ಸಾನುಮತಿ: ಈ ಬಳ್ಳಿಗಳ ನಡುವೆ ಅವಿತುಕೊಂಡು ಶಕುಂತಲೆಯ ಚಿತ್ರವನ್ನು ನೋಡಿ, ಅವಳಿಗೆ ತನ್ನ ಗಂಡನ ಬಹುಮುಖವಾದ ಅನುರಾಗವನ್ನು ತಿಳಿಸುತ್ತೇನೆ.
(ಅವಿತು ನಿಲ್ಲುತ್ತಾಳೆ)

ದುಷ್ಯಂತ: ಮಾಧವ್ಯ, ಶಕುಂತಲೆಯ ಪ್ರಥಮ ವೃತ್ತಾಂತ ನೆನಪಿಗೆ ಬರುತ್ತಿದೆ. ಅದನ್ನು ನಿನಗೂ ಹೇಳಿದ್ದೇನೆ. ನಾನು ಅವಳನ್ನು ವಾಪಸ್ಸು ಕಳಿಸಿದಾಗ ನೀನು ಇರಲಿಲ್ಲ. ಹಿಂದೆ ಯಾವಾಗಲೂ ನೀನೂ ಅವಳ ಹೆಸರನ್ನೂ ಎತ್ತಲಿಲ್ಲ. ನಿನಗೂ ಮರೆತುಹೋಯಿತೇ?

ವಿದೂಷಕ: ಮರೆತಿಲ್ಲ. ಆದರೆ ನೀನು ಅಂದು ಎಲ್ಲ ಹೇಳಿ, "ಇದು ತಮಾಷೆಗಾಗಿ ಹೇಳಿದ್ದು, ಇದರಲ್ಲಿ ನಿಜವಿಲ್ಲ" ಎಂದೆ. ನನ್ನ ಮಂಕುಬುದ್ಧಿಯಿಂದ ನಾನು ಅದನ್ನೇ ನಂಬಿದೆ. ಅಥವಾ ವಿಧಿ ಬಲವಾದುದೇ!

ಸಾನುಮತಿ: ವಿಧಿ ಬಲವಾದುದೇ!

ದುಷ್ಯಂತ: (ಸ್ವಲ್ಪ ಹೊತ್ತು ಧ್ಯಾನ ಮಾಡಿ, ಶೋಕಿತನಾಗುತ್ತಾನೆ) ಮಾಧವ್ಯಾ, ನನ್ನನ್ನು ಕಾಪಾಡು!

ವಿದೂಷಕ: ಇದೇನಾಯಿತು? ನಿನಗೆ ಈ ಶೋಕ ಸರಿಯಲ್ಲ. ಸತ್ಪುರುಷರು ಬಿರುಗಾಳಿಗೂ ಅಲ್ಲಾಡದ ಬೆಟ್ಟಗಳಂತೆ ಎಂದಿಗೂ ಶೋಕವ್ಯಸನರಾಗುವುದಿಲ್ಲ.

ದುಷ್ಯಂತ: ಮಾಧವ್ಯ, ನನ್ನಿಂದ ನಿರಾಕರಿಸಲ್ಪಟ್ಟ ಶಕುಂತಲೆಯ ಅವಸ್ಥೆಯನ್ನು ನೆನಪಿಸಿಕೊಂಡು ನನಗೆ ಶೋಕ ಉಮ್ಮಳಿಸುತ್ತಿದೆ. ಅಂದು ನಾನು ಅವಳನ್ನು ನಿರಾಕರಿಸಿದಾಗ, ಅವಳು ಗುರುಸಮರಾದ ಗುರುಶಿಷ್ಯರೊಡನೆ ವಾಪಸ್ಸು ಹೋಗಲು ಅವರನ್ನು ಜೋರಾಗಿ ಕೂಗಿ ನಿಲ್ಲಲು ಹೇಳಿ, ಮತ್ತೆ ನನ್ನನ್ನು ನೀರು ತುಂಬಿದ ಕಣ್ಣುಗಳಿಂದ ಹಿಂತಿರುಗಿ ನೋಡುತ್ತಿದ್ದಳು. ಅದೆಲ್ಲವನ್ನೂ ನೆನಪಿಸಿಕೊಂಡರೆ ಕ್ರೂರನಾದ ನನಗೆ ವಿಷ ಸೋಂಕಿದ ಶಲ್ಯದಿಂದ ಇರಿದಂತಾಗುತ್ತಿದೆ.

ಸಾನುಮತಿ: ಒಹ್! ಇದೆಲ್ಲಿಯ ಸ್ವಾರ್ಥ! ಇವನ ಸಂತಾಪವನ್ನು ನೋಡಿ ನನಗೆ ಸಂತೋಷವಾಗುತ್ತಿದೆ.

ವಿದೂಷಕ: ರಾಜ, ಯಾರೋ ಆಕಾಶದಲ್ಲಿ ಓಡಾಡುವವರು ಶಕುಂತಲೆಯನ್ನು ಕರೆದುಕೊಂಡು ಹೋಗಿದ್ದಾರೆಂದು ನನ್ನ ತರ್ಕ.

ದುಷ್ಯಂತ: ಗಂಡನು ತಿರಸ್ಕರಿಸಿದ ಅವಳನ್ನು ಇನ್ನು ಯಾರು ಕರೆದುಕೊಂಡು ಹೋಗಲು ಇಷ್ಟಪಡುತ್ತಾರೆ? ಅವಳ ಸಖಿಯರಿಂದ ಮೇನಕೆಯೇ ಅವಳ ತಾಯಿಯೆಂದು ಕೇಳಿದ್ದೆ. ಮೇನಕೆಯ ಸಖಿಯರೇ ಅವಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ನನ್ನ ಮನಸ್ಸು ಶಂಕಿಸುತ್ತಿದೆ.

ಸಾನುಮತಿ: ಇವನು ಜ್ಞಾಪಿಸಿಕೊಂಡದ್ದು ಆಶ್ಚರ್ಯವಲ್ಲ, ಮರೆತದ್ದೇ ಆಶ್ಚರ್ಯ!

ವಿದೂಷಕ: ಹಾಗಾದರೆ ಇನ್ನು ಸ್ವಲ್ಪಕಾಲದಲ್ಲಿ ನಿಮ್ಮ ಸಮಾಗಮವಾಗುತ್ತದೆ.

ದುಷ್ಯಂತ: ಹೇಗೆ?

ವಿದೂಷಕ: ಯಾವ ತಂದೆತಾಯಿಯರೂ ಗಂಡನಿಂದ ವಿಯೋಗವಾದ ಮಗಳನ್ನು ಕೊನೆಯವರೆಗೂ ಹಾಗೇ ನೋಡಲು ಇಷ್ಟಪಡುವುದಿಲ್ಲ. 

ದುಷ್ಯಂತ: ಸ್ವಪ್ನವೋ, ಮಾಯೆಯೋ, ಮತಿಭ್ರಮಣೆಯೋ ಹೀಗೆ ಮಾಡಿಬಿಟ್ಟಿತು. ಕಾಲ ಸರಿದಿದೆ ಎನ್ನಿಸುತ್ತಿದೆ. ನನ್ನ ಮನೋರಥಗಳೆಲ್ಲ ನೀರಮೇಲಿನ ಗುಳ್ಳೆಗಳೇ!

ವಿದೂಷಕ: ಹಾಗಲ್ಲ. ನಿನಗೆ ಈ ಉಂಗುರ ಸಿಕ್ಕಿರುವುದೇ ನೀವಿಬ್ಬರೂ ಮತ್ತೆ ಖಂಡಿತ ಸೇರುತ್ತೀರ ಎನ್ನುವುದಕ್ಕೆ ನಿದರ್ಶನ. 

ದುಷ್ಯಂತ: (ಉಂಗುರವನ್ನು ನೋಡುತ್ತಾ) ಪಡೆಯಲು ಕಷ್ಟವಾದ ಸ್ಥಾನದಿಂದಲೇ ಇದು ಕೆಳಗೆ ಬಿದ್ದಿದ್ದು ಶೋಚನೀಯ. ಉಂಗುರವೇ! ನಿನ್ನ ಫಲವನ್ನು ನೋಡಿದರೆ ನಿನ್ನ ಅದೃಷ್ಟವೂ ನನ್ನಂತೆಯೇ! ಅವಳ ಮನೋಹರವಾದ ಕೆಂಪು ಬೆರಳುಗಳಲ್ಲಿ ಸ್ಥಾನ ಪಡೆದೂ ಅದರಿಂದ ಕೆಳಗೆ ಬಿದ್ದುಬಿಟ್ಟೆಯಲ್ಲ!

ಸಾನುಮತಿ: ಅದು ಬೇರೆಯವರ ಕೈಗೆ ಹೋಗಿದ್ದರೆ ಇನ್ನೂ ಶೋಚನೀಯವಾಗುತ್ತಿತ್ತು.

ವಿದೂಷಕ: ಮಹಾರಾಜ, ಮೊದಲಿಗೆ ಈ ಉಂಗುರ ಯಾವ ಕಾರಣದಿಂದ ಶಕುಂತಲೆಯ ಕೈಗೆ ಬಂತು?

ಸಾನುಮತಿ: ಇದು ನನಗೂ ಕುತೂಹಲವಾದ ವಿಷಯ.

ದುಷ್ಯಂತ: ನಾನು ನಗರಕ್ಕೆ ಬರುವ ಮುಂಚೆ ಅವಳು ಕಣ್ಣಲ್ಲಿ ನೀರು ಸುರಿಸುತ್ತ, ಯಾವುದಾರೂ ಒಂದು ಅಭಿಜ್ಞಾನವನ್ನು ಕೊಡು ಎಂದು ಕೇಳಿದಳು.

ವಿದೂಷಕ: ಸರಿ.

ದುಷ್ಯಂತ: ಆಗ ನಾನು ಈ ಉಂಗುರವನ್ನು ಅವಳ ಬೆರಳಿಗೆ ತೊಡಿಸಿ, ಪ್ರಿಯೆ, ಈ ಉಂಗುರದ ಮೇಲಿರುವ ನನ್ನ ಹೆಸರಿನ ಅಕ್ಷರಗಳನ್ನು ದಿನ ದಿನವೂ ಒಂದೊಂದರಂತೆ ಎಣಿಸುತ್ತಿರು. ಅದು ಕೊನೆಯಾಗುವಷ್ಟರಲ್ಲಿ ನಿನ್ನನ್ನು ನನ್ನ ಅಂತಃಪುರಕ್ಕೆ ಕರೆದುಕೊಂಡು ಹೋಗುವ ಜನ ನಿನ್ನ ಹತ್ತಿರಕ್ಕೆ ಬಂದಿರುತ್ತಾರೆ, ಎಂದಿದ್ದೆ. ಆದರೆ ದಾರುಣನಾದ ನಾನು ಆ ಮಾತನ್ನು ನಡೆಸಿಕೊಡಲೇ ಇಲ್ಲ!

ಸಾನುಮತಿ: ರಮಣೀಯವಾದ ಅವಧಿಯನ್ನು ವಿಧಿ ಅಸಂಗತಮಾಡಿಬಿಟ್ಟಿತು.

ವಿದೂಷಕ: ಆದರೆ ಇದು ಆ ಬೆಸ್ತ ಕೊಯ್ಯುತ್ತಿದ್ದ ಮೀನಿನ ಹೊಟ್ಟೆಯೊಳಕ್ಕೆ ಹೇಗೆ ಹೋಯಿತು?

ದುಷ್ಯಂತ: ಶಚೀತೀರ್ಥದಲ್ಲಿ ಶಕುಂತಲೆ ಅರ್ಘ್ಯಕೊಡುತ್ತಿದ್ದಾಗ ಇದು ಜಾರಿ ಗಂಗಾ ಪ್ರವಾಹದಲ್ಲಿ ಬಿದ್ದುಹೋಯಿತು.

ವಿದೂಷಕ: ಒಹೋ!

ಸಾನುಮತಿ: ಆದ್ದರಿಂದಲೇ ಈ ರಾಜರ್ಷಿಗೆ ಧರ್ಮಿಷ್ಟೆಯಾದ ಶಕುಂತಲೆಯ ಮೇಲೆ ಸಂದೇಹವುಂಟಾಗಿದ್ದು.... ಆದರೆ ಇಂತಹ ಪ್ರೀತಿಗೂ ಅಭಿಜ್ಞಾನ ಬೇಕೇ? ಇದು ಏನೋ!

ದುಷ್ಯಂತ: ಈ ಉಂಗುರವನ್ನು ನಾನೇ ಇಟ್ಟುಕೊಳ್ಳುತ್ತೇನೆ.

ವಿದೂಷಕ: (ಸ್ವಗತ) ನಮ್ಮ ರಾಜ ಉನ್ಮತ್ತತೆಯ ದಾರಿ ಹಿಡಿದಿಡಿದ್ದಾನೆ!

ದುಷ್ಯಂತ: ಈ ಉಂಗುರ ಅವಳ ಕೋಮಲವಾದ ಬೆರಳನ್ನು ಬಿಟ್ಟು ನೀರಿಗೆ ಹೇಗೆ ಬಿತ್ತು? ಈ ಉಂಗುರವಾದರೋ ಜಡವಸ್ತು. ಆದರೆ ನಾನೇಕೆ ಅವಳನ್ನು ತಿರಸ್ಕರಿಸಿದೆ!

ವಿದೂಷಕ: (ಸ್ವಗತ) ನನಗೇಕೆ ಹಸಿವಿನಿಂದ ಊಟ ಮಾಡಬೇಕೆನಿಸುತ್ತಿದೆ!!

ದುಷ್ಯಂತ: ಪ್ರಿಯೇ! ಅಕಾರಣವಾಗಿ ನಿನ್ನನ್ನು ಬಿಟ್ಟು, ಹೃದಯವೇದನೆಯಿಂದ ಬಳಲಿತ್ತಿರುವ ನನಗೆ ನಿನ್ನ ದರ್ಶನದಿಂದ ಅನುಕಂಪವನ್ನು ತೋರಿಸು....

(ತೆರೆಯನ್ನು ಸರಿಸಿ, ಚಿತ್ರಪಟವನ್ನು ಕೈಯಲ್ಲಿ ಹಿಡಿದ ಚತುರಿಕೆಯ ಪ್ರವೇಶ)

ಚತುರಿಕೆ: ಮಹಾರಾಜ, ಇಲ್ಲಿ, ಶಕುಂತಲೆಯ ಚಿತ್ರ.
(ಚಿತ್ರವನ್ನು ತೋರಿಸುತ್ತಾಳೆ)

ವಿದೂಷಕ: ಗೆಳೆಯ ಮಹಾರಾಜ, ಚಿತ್ರ ತುಂಬಾ ಚೆನ್ನಾಗಿದೆ. ಚಿತ್ರದಲ್ಲಿ ಭಾವಪ್ರವೇಶವಾದಂತಿದೆ. ಚಿತ್ರದ ಏರಿಳಿತಗಳಲ್ಲಿ ನನ್ನ ದೃಷ್ಟಿ ಮುಗ್ಗರಿಸುತ್ತಿದೆ!

ಸಾನುಮತಿ: ಈ ರಾಜ ನಿಪುಣನೇ! ಶಕುಂತಲೆಯೇ ನನ್ನ ಕಣ್ಣ ಮುಂದೆ ಬಂದಂತಿದೆ!

ದುಷ್ಯಂತ: ಲೋಕದಲ್ಲಿ ಸರಿಯಾಗಿಲ್ಲದಿರುವುದನ್ನು ಸರಿಮಾಡಿ ಚಿತ್ರದಲ್ಲಿ ಬರೆಯುತ್ತೇವೆ, ಆದರೆ ಇಲ್ಲಿ ಇವಳ ಲಾವಣ್ಯವೇ ಪೂರ್ಣವಾಗಿ ಚಿತ್ರಿತವಾಗಿಲ್ಲವೆನಿಸುತ್ತಿದೆ.

ಸಾನುಮತಿ: ರಾಜನ ಸ್ನೇಹಪೂರ್ವಕವಾದ ನಿರ್ಮಲವಾದ ಪಶ್ಚಾತ್ತಾಪ ಕಾಣಿಸುತ್ತಿದೆ.

ವಿದೂಷಕ: ಮಹಾರಾಜ, ಈ ಚಿತ್ರದಲ್ಲಿ ಮೂವರು ಯುವತಿಯರಿದ್ದಾರೆ. ಎಲ್ಲರೂ ಸುಂದರಿಯರೇ. ಅವರಲ್ಲಿ ಶಕುಂತಲೆ ಯಾರು?

ಸಾನುಮತಿ: ಈ ಸೌಂದರ್ಯವನ್ನು ತಿಳಿಯದ ಇವನ ಕಣ್ಣುಗಳು ನಿರರ್ಥಕವೇ!

ದುಷ್ಯಂತ: ನೀನು ನೋಡಿ ಹೇಳು.

ವಿದೂಷಕ: ಇಲ್ಲಿ ಇವಳ ತಲೆಗೂದಲು ಸ್ವಲ್ಪ ಚದುರಿ, ಮುಡಿದ ಹೂಗೊಂಚಲು ಶಿಥಿಲವಾಗಿ, ಮುಖದಲ್ಲಿ ಬೆವರು ಮೂಡಿದೆ. ದಣಿವಾಗಿ, ಕೈ ಚಾಚಿ, ಈ ಚಿಕ್ಕ ಮಾವಿನ ಗಿಡಕ್ಕೆ ನೀರು ಹಾಕುತ್ತಿದ್ದಾಳೆ. ಇವಳೇ ಶಕುಂತಲೆ ಎಂದು ನನ್ನ ತರ್ಕ. ಮಿಕ್ಕವರು ಅವಳ ಸಖಿಯರು.

ದುಷ್ಯಂತ: ನೀನು ನಿಪುಣ. ಅಲ್ಲಿ ನನ್ನ ಭಾವಚಿಹ್ನೆಯೂ ಇದೆ. ನನ್ನ ಕೈ ಸ್ವಲ್ಪ ಬೆವರಾಗಿ ಅಲ್ಲಲ್ಲಿ ಮಲಿನವಾಗಿದೆ. ನನ್ನ ಕಣ್ಣೀರು ಅವಳ ಕೆನ್ನೆಯ ಮೇಲೆ ಬಿದ್ದಿದೆ. ಏನು ಮಾಡಿದರೂ ಅದು ಹೋಗುತ್ತಿಲ್ಲ. ಚತುರಿಕೆ, ನನ್ನ ಕುಂಚವನ್ನು ತೆಗೆದುಕೊಂಡು ಬಾ, ಇಲ್ಲಿ ಚಿತ್ರ ಅರ್ಧ ಹಾಗೇ ಉಳಿದುಬಿಟ್ಟಿದೆ.

ಚತುರಿಕೆ: ಆರ್ಯ, ಮಾಧವ್ಯ, ಈ ಚಿತ್ರವನ್ನು ಸ್ವಲ್ಪ ಹಿಡಿಯಿರಿ. ನಾನು ಹೋಗಿ ಕುಂಚವನ್ನು ತೆಗೆದುಕೊಂಡು ಬರುತ್ತೇನೆ.

ದುಷ್ಯಂತ: ನಾನೇ ಹಿಡಿಯುವೆನಲ್ಲ.
(ಹಿಡಿಯುತ್ತಾನೆ)
(ಚತುರಿಕೆಯ ನಿಷ್ಕ್ರಮನ)

ದುಷ್ಯಂತ: (ನಿಟ್ಟುಸಿರು ಬಿಡುತ್ತಾ) ಮಾಧವ್ಯ, ಹರಿಯುತ್ತಿರುವ ನದಿಯ ನೀರನ್ನು ಕುಡಿಯುವುದು ಬಿಟ್ಟು, ನಂತರ ಮರೀಚಿಕೆಯನ್ನು ನೋಡಿ ವ್ಯಥೆಪಡುವಂತೆ, ಕಣ್ಣ ಮುಂದೆ ಬಂದವಳನ್ನು ಬಿಟ್ಟು ಈ ಚಿತ್ರದಲ್ಲಿರುವವಳನ್ನು ನೋಡುವಂತಾಗಿದೆ.

ವಿದೂಷಕ: (ಸ್ವಗತ) ಇಲ್ಲಿ ನಮ್ಮ ರಾಜ ನದಿಯನ್ನು ಬಿಟ್ಟು ಮರೀಚಿಕೆಗೆ ಬಂದಿದ್ದಾನೆ.
(ಪ್ರಕಾಶ)
ಮಹಾರಾಜ ಇಲ್ಲಿ ಇನ್ನೂ ಏನನ್ನು ಬರೆಯಬೇಕು?

ಸಾನುಮತಿ: ಇವನಿಗೆ ಶಕುಂತಲೆಗೆ ಇಷ್ಟವಾದ ಸ್ಥಳಗಳನ್ನೆಲ್ಲಾ ಬರೆಯುವುದಕ್ಕೆ ಇಷ್ಟವಿರಬೇಕು.

ದುಷ್ಯಂತ: ಮಾಲಿನೀ ತೀರದಲ್ಲಿ ಮೈಮರೆತ ಹಂಸಗಳನ್ನು ಚಿತ್ರಿಸಬೇಕು.. ಹಿಮಾಲಯದ ತಪ್ಪಲುಗಳಲ್ಲಿ ಕುಳಿತ ಹರಿಣಗಳನ್ನು ಚಿತ್ರಿಸಬೇಕು.. ನಾರುಮಡಿಗಳನ್ನು ಒಣಹಾಕಿದ ಮರಗಳು,  ನವೆಯನ್ನು ಹೋಗಲಾಡಿಸಲು ಕೃಷ್ಣಮೃಗದ ಕೊಂಬಿಗೆ ತನ್ನ ಕಣ್ಣುಗಳನ್ನು ಉಜ್ಜುತ್ತಿರುವ ಜಿಂಕೆ.. ಇವೆಲ್ಲವನ್ನೂ ಚಿತ್ರಿಸಬೇಕು...

ವಿದೂಷಕ: (ಸ್ವಗತ) ಇವನು ಈ ಚಿತ್ರಪಟವನ್ನು ಉದ್ದಗಡ್ಡಗಳ ತಪಸ್ವಿಗಳಿಂದ ತುಂಬಿಸುತ್ತಾನೆನ್ನಿಸುತ್ತಿದೆ.

ದುಷ್ಯಂತ: ಮಾಧವ್ಯ, ಇಲ್ಲಿನ ನೋಡು, ಶಕುಂತಲೆಗೆ ಇಷ್ಟವಾದ ಆಭರಣವನ್ನೇ ನಾನು ಮರೆತಂತಿದೆ.

ವಿದೂಷಕ: ಏನು?

ಸಾನುಮತಿ: ವನವಾಸದ ವಿನಯದ ಸೌಕುಮಾರ್ಯವಾಗಿರಬೇಕು..

ದುಷ್ಯಂತ: ಶಿರೀಷ ಕುಸುಮದ ಒಂದು ತುದಿ ಅವಳ ಕಿವಿಗೆ ಬರುವಂತೆ ಬರೆದು, ಹೂವು ಅವಳ ಕೆನ್ನೆಯ ಮೇಲೆ ಇಳಿಬರುವಂತೆ ಮಾಡಬೇಕು. ಶರತ್ಕಾಲದ ತಂಪಿನಂತಿರುವ ಕಮಲದ ಹೂವು ಅವಳ ಎದೆಯ ಮೇಲೆ ಬರಬೇಕು.

ವಿದೂಷಕ: ಮಹಾರಾಜ, ಶಕುಂತಲೆ ತನ್ನ ಮುಖದ ಮೇಲೆ ಕೆಂಪಾದ ತನ್ನ ಕೈಯನ್ನು ಮುಚ್ಚಿಹಿಡಿದಂತಿದೆಯಲ್ಲ.. ಮುಖವೂ ಚಕಿತವಾದಂತಿದೆಯಲ್ಲ?
(ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ)
ಒಹೋ, ಈ ಹಾಳು ದುಂಬಿ ಅವರ ಮುಖಕಮಲದ ಮೇಲೆ ಹಾರುತ್ತಿದೆ.

ದುಷ್ಯಂತ: ಹೌದು, ಅದನ್ನು ಓಡಿಸಬೇಕು.

ವಿದೂಷಕ: ಅವಿನೀತರನ್ನು ಶಿಕ್ಷಿಸುವ ನಿಮಗೆ ಅದು ಸಾಧ್ಯ.

ದುಷ್ಯಂತ: ಇವರಿಗೆ ನನ್ನ ಆಜ್ಞೆ ಸೇರುವುದಿಲ್ಲ. ಆದರೂ ಇರಲಿ! ಹೇ ದುಂಬಿ, ನಿನಗೆ ಹೂಗಳು ಇಷ್ಟ. ಅದನ್ನು ಬಿಟ್ಟು ಇವಳ ಹತ್ತಿರವೇಕೆ ಬರುತ್ತೀಯ? ಒಹೋ! ಇರಬಹುದು... ನಿನಗೆ ಹೂಗಳ ಮಕರಂದ ಹೀರಲು ಉತ್ಸುಕವಾಗಿದ್ದರೂ, ನಿನ್ನ ಪ್ರಿಯೆಯನ್ನು ಬಿಟ್ಟು ಸವಿಯಲು ಇಷ್ಟವಿಲ್ಲ.

ಸಾನುಮತಿ: ಸರಿಯಾಗಿಯೇ ನಿಯಂತ್ರಿಸಿದ್ದಾನೆ!

ವಿದೂಷಕ: ಇದು ಪೋಲಿ ದುಂಬಿಯೇ!!

ದುಷ್ಯಂತ: ಮಾಧವ್ಯ, ನನ್ನ ಕೆಲಸದಲ್ಲಿ ಅಡ್ಡ ಬರಬೇಡ! ಈಗ ನಾನು ಹೇಳುವುದು ಕೇಳು... ಏ ದುಂಬಿಯೇ, ನಾನು ಮುತ್ತಿಟ್ಟ ಆ ತುಟಿಗಳನ್ನು ನೀನೇದಾರೂ ಮುಟ್ಟಿದರೆ, ನಿನ್ನನ್ನು ಕಮಲದ ದಳಗಳಲ್ಲಿ ಬಂಧಿಸಿಬಿಡುತ್ತೇನೆ..

ವಿದೂಷಕ: ಇಷ್ಟು ತೀಕ್ಷ್ಣವಾದ ದಂಡಹಾಕಿದರೆ ಯಾರು ಹೆದರುವುದಿಲ್ಲ?
(ನಗುತ್ತಾ, ಸ್ವಗತ) ಇವನು ಉನ್ಮತ್ತನಾಗಿದ್ದಾನೆ. ಇವನ ಸಹವಾಸದಿಂದ ನನಗೂ ಹಾಗೆ ಆಗಿದೆ.
(ಪ್ರಕಾಶ)
ಮಹಾರಾಜ, ಇದು ಚಿತ್ರವಷ್ಟೇ!

ದುಷ್ಯಂತ: ಇದು ಚಿತ್ರವೇ?

ಸಾನುಮತಿ: ನನಗೇ ಗೊತ್ತಾಗುತ್ತಿಲ್ಲ. ಪಾಪ, ಅದನ್ನು ಬರೆದವನು. ಅವನಿಗೆ ಹೇಗೆ ಗೊತ್ತಾಗಬೇಕು?

ದುಷ್ಯಂತ: ಮಾಧವ್ಯ, ಇದೇನು ಮಾಡಿದೆ ನೀನು? ಇದನ್ನು ನಿಜವೆಂದು ದರ್ಶನಸುಖವನ್ನು ಅನುಭವಿಸುತ್ತಿದ್ದ ನನಗೆ ಇದು ಕೇವಲ ಚಿತ್ರವೆಂದು ನೆನಪಿಸಿಬಿಟ್ಟೆಯಲ್ಲ?
(ಕಣ್ಣೀರು ಸುರಿಸಿತ್ತಾನೆ)

ಸಾನುಮತಿ: ಈ ವಿರಹಮಾರ್ಗ ಪೂರ್ವಾಪರವಿರೋಧಿ.

ದುಷ್ಯಂತ: ಮಾಧವ್ಯ, ನಿಲ್ಲದ ದುಃಖವನ್ನು ಅನುಭವಿಸುತ್ತಿದ್ದೇನಲ್ಲ! ಕನಸ್ಸಿನಲ್ಲಾದ ಸಮಾಗಮವನ್ನು ಎಚ್ಚರಿಕೆ ಹಾಳುಮಾಡಿದರೆ, ಈ ಚಿತ್ರದಲ್ಲಿ ನೋಡುವುದನ್ನು ಕಣ್ಣೀರು ಹಾಳುಮಾಡುತ್ತಿದೆಯಲ್ಲ!

ಸಾನುಮತಿ: ತಿರಸ್ಕರಿಸಲ್ಪಟ್ಟ ದುಃಖವು ಶಕುಂತಲೆಗೆ ಸಂಪೂರ್ಣವಾಗಿ ನಿವಾರಣೆಯಾಯಿತು.

(ಚತುರಿಕೆಯ ಪ್ರವೇಶ)
ಚತುರಿಕೆ: ಮಹಾರಾಜರಿಗೆ ಜಯವಾಗಲಿ. ಕುಂಚವನ್ನು ತೆಗೆದುಕೊಂಡು ಬರುತ್ತಿದ್ದೆ...

ದುಷ್ಯಂತ: ಮತ್ತೆ?

ಚತುರಿಕೆ: ತರಲಿಕೆಯ ಜೊತೆ ಇದ್ದ ರಾಣಿ ವಸುಮತಿಯವರು ಅದನ್ನು ನನ್ನಿಂದ ತೆಗೆದುಕೊಂಡು ನಾನೇ ರಾಜನಿಗೆ ಕೊಡುತ್ತೇನೆಂದು ಹೇಳಿದರು.

ವಿದೂಷಕ: ನಿನ್ನನ್ನು ಬಿಟ್ಟುಬಿಟ್ಟಿದ್ದಾರೆ?

ಚತುರಿಕೆ: ರಾಣಿಯವರ ಸೆರಗು ಮರಕ್ಕೆ ಸಿಕ್ಕಿಹಾಕಿಕೊಂಡಿತ್ತು. ಅದನ್ನು ತರಲಿಕೆ ಬಿಡಿಸುವಷ್ಟರಲ್ಲಿ ನಾನು ತಪ್ಪಿಸಿಕೊಂಡು ನಿಮಗೆ ಹೇಳುವುದಕ್ಕೆ ಬಂದೆ.

ದುಷ್ಯಂತ: ಮಾಧವ್ಯ, ದೇವಿಗೆ ಇದು ಇಷ್ಟವಾಗುವುದಿಲ್ಲ. ಈ ಚಿತ್ರವನ್ನು ತೆಗೆದುಕೊಂಡು ಹೋಗು.

ವಿದೂಷಕ: ಸರಿ.
(ಚಿತ್ರವನ್ನು ಎತ್ತಿಕೊಂಡು ನಿಲ್ಲುತ್ತಾನೆ)
ನಾನು ಮೇಘಪ್ರತಿಚ್ಛಂದದಲ್ಲಿ ಇರುತ್ತೇನೆ. ನೀವು ಅಂತಃಪುರದ ಕೆಲಸವಾದಮೇಲೆ ಕರೆಯಿರಿ, ಬರುತ್ತೇನೆ.
(ಆತುರವಾಗಿ ಹೊರಡುತ್ತಾನೆ)

ಸಾನುಮತಿ: ಬೇರೆಯವರ ಮೇಲೆ ಮನಸ್ಸಿದ್ದರೂ, ಮೊದಲ ಹೆಂಡತಿಯನ್ನು ಉಪೇಕ್ಷಿಸುತ್ತಿಲ್ಲ.. ಇವನ ಸೌಹಾರ್ದ ಚೆನ್ನಾಗಿದೆ.

(ವೇತ್ರವತಿಯ ಪ್ರವೇಶ)
ಪ್ರತೀಹಾರಿ: ಮಹಾರಾಜನಿಗೆ ಜಯವಾಗಲಿ.

ದುಷ್ಯಂತ: ವೇತ್ರವತಿ, ನೀನು ದೇವಿಯನ್ನು ನೋಡಲಿಲ್ಲವೇ?

ಪ್ರತೀಹಾರಿ: ನೋಡಿದೆ. ಅವರು ನನ್ನನ್ನು ನೋಡಿ ಒಂದು ಪತ್ರವನ್ನು ಕೊಟ್ಟು ಹಿಂತಿರುಗಿದರು.

ದುಷ್ಯಂತ: ಅವಳು ಕಾರ್ಯಜ್ಞೆ. ನನ್ನ ಕೆಲಸಗಳಿಗೆ ಅಡ್ಡ ಬರುವುದಿಲ್ಲ.

ಪ್ರತೀಹಾರಿ: ಮಹಾರಾಜ, ಅಮಾತ್ಯರು ವಿಜ್ಞಾಪಿಸುತ್ತಿದ್ದಾರೆ: ಮಹಾರಾಜ ಬೇರೆ ಕೆಲಸಗಳು ಹೆಚ್ಚಾದ್ದರಿಂದ, ಒಂದೇ ಒಂದು ಪೌರಕಾರ್ಯವನ್ನು ಮಾತ್ರ ನೋಡುವುದಾಯಿತು. ಅದರ ವಿವರಗಳು ಈ ಪತ್ರದಲ್ಲಿವೆ. ನೋಡಬೇಕು.

ದುಷ್ಯಂತ: ಪತ್ರವನ್ನು ತೋರಿಸು.
(ತೋರಿಸುತ್ತಾಳೆ)

ದುಷ್ಯಂತ: (ನೋಡುತ್ತಾ) ಏನಾಯಿತು? ಒಹ್! ಸಮುದ್ರವ್ಯಾಪಾರಿ, ಸಾರ್ಥವಾಹ ಧನಮಿತ್ರರು ನೌಕಾಪಘಾತದಲ್ಲಿ ಮೃತರಾಗಿದ್ದಾರೆ. ಒಳ್ಳೆಯವರು. ಪಾಪ, ಅವರಿಗೆ ಮಕ್ಕಳಿರಲಿಲ್ಲ. ಅವರ ಆಸ್ತಿಯೆಲ್ಲ ರಾಜ್ಯಕ್ಕೆ ಸೇರಬೇಕು ಎಂದು ಅಮಾತ್ಯರು ಬರೆದಿದ್ದಾರೆ. ವೇತ್ರವತಿ, ಅವರು ಶ್ರೀಮಂತರು. ಅವರಿಗೆ ಬಹುಪತ್ನಿಯರಿರಬೇಕು. ಅವರಲ್ಲಿ ಯಾರಾದರೂ ಗರ್ಭಣಿಯರಿದ್ದಾರೋ ವಿಚಾರಿಸುವಂತಾಗಲಿ.

ಪ್ರತೀಹಾರಿ: ಮಹಾರಾಜ, ಈಗಷ್ಟೇ ಈ ವ್ಯಾಪಾರಿಯ ಹೆಂಡತಿಗೆ - ಸಾಕೇತದ ವ್ಯಾಪಾರಿಯ ಮಗಳಿಗೆ - ಪುಂಸವನವಾಗಿದೆಯೆಂದು ವರ್ತಮಾನ.

ದುಷ್ಯಂತ: ಹಾಗಾದರೆ ಆ ಗರ್ಭಕ್ಕೆ ಆಸ್ತಿ ಸೇರಬೇಕಲ್ಲವೇ? ಹೋಗು, ಅಮಾತ್ಯರಿಗೆ ಹೇಳು.

ಪ್ರತೀಹಾರಿ: ಆಜ್ಞೆ.
(ಹೋಗಲು ಅಣಿಯಾಗುತ್ತಾಳೆ, ತಕ್ಷಣ)

ದುಷ್ಯಂತ: ಸ್ವಲ್ಪ ನಿಲ್ಲು.

ಪ್ರತೀಹಾರಿ: ಇಲ್ಲಿಯೇ ಇದ್ದೇನೆ.

ದುಷ್ಯಂತ: ಇದನ್ನೂ ಸೇರಿಸು. ಮಗು ಇದೆಯೋ ಇಲ್ಲವೋ ಪ್ರಶ್ನೆಯೇಕೆ? ಯಾರು, ಯಾವ ಯಾವ ಕಾರಣಕ್ಕೆ ಬಂಧುಗಳನ್ನು ಕಳೆದುಕೊಂಡರೂ ಅವರಿಗೆ ಧರ್ಮಕ್ಕೆ ವಿರೋಧವಲ್ಲದ ರೀತಿಯಲ್ಲಿ ದುಷ್ಯಂತ ಇದ್ದಾನೆ ಎಂದು ಡಂಗೂರ ಸಾರಿಸಿ.

ಪ್ರತೀಹಾರಿ: ಇದನ್ನು ಘೋಷಣೆ ಮಾಡಲೇಬೇಕು.

(ನಿಷ್ಕ್ರಮಿಸಿ ಪುನಾ ವಾಪಸ್ಸು ಬರುತ್ತಾಳೆ)

ಪ್ರತೀಹಾರಿ: ನಿಮ್ಮ ಆಜ್ಞೆಯನ್ನು ಕೇಳಿ ಸಕಾಲದಲ್ಲಿ ಮಳೆಬಂದಂತೆ ಜನರೆಲ್ಲಾ ಸಂತೋಷಪಟ್ಟರು.

ದುಷ್ಯಂತ: (ದೀರ್ಘವಾಗಿ ಉಸಿರೆಳೆದುಕೊಳ್ಳುತ್ತಾ) ಸಂತತಿಯಿಲ್ಲದೆ ವಂಶದ ಮೂಲಪುರುಷ ಮರಣ ಹೊಂದಿದರೆ ಅವನ ಆಸ್ತಿಯೆಲ್ಲವೂ ಬೇರೆ ಯಾರಿಗೋ ಸೇರುತ್ತದೆ. ಅಂತೆಯೇ ನಾನು ಸತ್ತ ಮೇಲೆ ಈ ಪುರುವಂಶದ ಆಸ್ತಿಯು ಕೂಡ.

ಪ್ರತೀಹಾರಿ: ಅಮಂಗಳವನ್ನು ನುಡಿಯಬೇಡಿ.

ದುಷ್ಯಂತ: ತಾನಾಗಿಯೇ ಬಂದ ವರವನ್ನು ಬೇಡವೆಂದು ವಾಪಸ್ಸು ಕಳಿಸಿದ ನನಗೆ ಧಿಕ್ಕಾರವಿರಲಿ.

ಸಾನುಮತಿ: ಶಕುಂತಲೆಯನ್ನೇ ನೆನಸಿಕೊಂಡು ದುಃಖಿಸುತ್ತಿದ್ದಾನೆ.

ದುಷ್ಯಂತ: ಫಲವನ್ನು ಕಲ್ಪಿಸಿಕೊಂಡು ಭೂಮಿಯಲ್ಲಿ ಬೀಜವನ್ನು ಬಿತ್ತುವಂತೆ(?) ನನ್ನ ವಂಶದ ಬೀಜವೇ ಅವಳ ಗರ್ಭದಲ್ಲಿದ್ದರೂ ಅವಳನ್ನು ತೊರೆದುಬಿಟ್ಟೆ.

ಸಾನುಮತಿ: ನಿನ್ನ ಸಂತತಿ ಅಪರಿಚ್ಛಿನ್ನವಾಗಿ ಮುಂದುವರೆಯುತ್ತದೆ.

ಚತುರಿಕೆ: (ಪ್ರತೀಹಾರಿಗೆ ಗುಪ್ತವಾಗಿ) ಈ ಸಾರ್ಥವಾಹನ ಘಟನೆಯಿಂದ ಮಹಾರಾಜರ ಮನಸ್ಸು ಇನ್ನೂ ವ್ಯಾಕುಲವಾಗಿದೆ. ಇವರನ್ನು ಸಮಾಧಾನ ಮಾಡಲು ಮೇಘಪ್ರತಿಚ್ಛಂದಕ್ಕೆ ಹೋಗಿ ಮಾಧವ್ಯರನ್ನು ಕರೆದುಕೊಂಡು ಬಾ.

ಪ್ರತೀಹಾರಿ: ಅದು ಸರಿಯೇ.
(ನಿಷ್ಕ್ರಮಿಸುತ್ತಾಳೆ)

ದುಷ್ಯಂತ: ಅಯ್ಯೋ! ದುಷ್ಯಂತನ ಸಂತಾನವೇ ಸಂಶಯಕ್ಕೀಡಾಯಿತಲ್ಲ! ಇನ್ನು ಮುಂದೆ ಶ್ರುತಿವಿಧಾನವಾಗಿ ಇನ್ನು ಯಾರು ನಮ್ಮ ಕುಲದವರಿಗೆ ಸಂಸ್ಕಾರ ಮಾಡುತ್ತಾರೆ. ಮಕ್ಕಳಿಲ್ಲದ ನನ್ನ ಕಾರಣದಿಂದ ನಮ್ಮ ಪೂರ್ವಿಕರು ಕಣ್ಣೀರಿನ ಉದಕವನ್ನೇ ಕುಡಿಯಬೇಕಾಗುತ್ತದಲ್ಲ!
(ಅತೀವ ದುಃಖಿತನಾಗುತ್ತಾನೆ)

ಚತುರಿಕೆ: (ಆತಂಕದಿಂದ) ಆರ್ಯ, ಸಮಾಧಾನ ಮಾಡಿಕೊಳ್ಳಿ.

ಸಾನುಮತಿ: ಹಾ ಧಿಕ್! ಹಾ ಧಿಕ್! ಬೆಳಕಿದ್ದರೂ ವ್ಯವಧಾನವಿಲ್ಲದೆ ಇವನು ಕತ್ತಲಿನ ದುಃಖವನ್ನು ಅನುಭವಿಸುತ್ತಿದ್ದಾನೆ. ನಾನು ಈಗಲೇ ಹೊರಡುತ್ತೇನೆ... ಇಲ್ಲ... ಅದಿತಿಯು ಶಕುಂತಲೆಯನ್ನು ಸಮಾಧಾನ ಮಾಡುವಾಗ ಕೇಳಿದ್ದೆ. ದುಷ್ಯಂತನೇ ಶಕುಂತಲೆಯನ್ನು ಧರ್ಮಪತ್ನಿಯನ್ನಾಗಿ ಮಾಡಿಕೊಳ್ಳುವಂತೆ ದೇವತೆಗಳೇ ಏರ್ಪಡಿಸುತ್ತಾರಂತೆ. ಅಲ್ಲಿಯವರೆಗೂ ಕಾಯಲೇಬೇಕು. ಆದರೆ ಈ ವೃತ್ತಾಂತವನ್ನು ಶಕುಂತಲೆಗೆ ಹೇಳುತ್ತೇನೆ.
(ಹೇಗೆ ಹೇಳಿ ಆಕಾಶಮಾರ್ಗದಲ್ಲಿ ನಿಷ್ಕ್ರಮಿಸುತ್ತಾಳೆ)

(ನೇಪಥ್ಯದಲ್ಲಿ)
ಹೋ! ಬ್ರಾಹ್ಮಣನ ಆಕ್ರಮಣವಾಯಿತು!!

ದುಷ್ಯಂತ: (ಸಮಾಧಾನ ಮಾಡಿಕೊಂಡು, ಆ ಕಡೆ ಕಿವಿ ಕೊಡುತ್ತಾ) ಒಹ್! ಇದು ಮಾಧವ್ಯನ ಆರ್ತಸ್ವರ! ಯಾರಲ್ಲಿ?

(ವೇತ್ರವತಿಯ ಪ್ರವೇಶ)

ಪ್ರತೀಹಾರಿ: (ಗಾಬರಿಯಿಂದ) ಮಹಾರಾಜ, ನಿಮ್ಮ ಸ್ನೇಹಿತ ಆಪತ್ತಿನಲ್ಲಿದ್ದಾರೆ. ನೀವೇ ಕಾಪಾಡಬೇಕು.

ದುಷ್ಯಂತ: ಯಾರಿಂದ ಆಪತ್ತು?

ಪ್ರತೀಹಾರಿ: ಮಹಾರಾಜ, ಯಾವುದೋ ಕಣ್ಣಿಗೆ ಕಾಣದ ಶಕ್ತಿ ಅವರನ್ನು ಮೇಘಪ್ರತಿಚ್ಛನ್ದದ ಪ್ರಾಸಾದದ ಮೇಲೆ ಎತ್ತಿಕೊಂಡು ಹೋಗಿದೆ.

ದುಷ್ಯಂತ: (ಎದ್ದು ನಿಂತು) ಹಾಗಿರಲಾರದು. ಕಾಣದ ಶಕ್ತಿ ನನ್ನ ಅರಮನೆಯನ್ನೂ ಆಕ್ರಮಿಸಿತೇ? ಅಥವಾ ದಿನದಿನವೂ ಆಗುವ ಪ್ರಮಾದಗಳನ್ನು ತಿಳಿಯುವುದು ಸಾಧ್ಯವಿಲ್ಲ. ಪ್ರಜೆಗಳಲ್ಲಿ ಯಾರು ಯಾವ ದಾರಿಯನ್ನು ಹಿಡಿದಿದ್ದಾರೋ ತಿಳಿಯುವ ಶಕ್ತಿ ನನಗೆಲ್ಲಿದೆ?

(ನೇಪಥ್ಯದಲ್ಲಿ)

ಅಯ್ಯೋ ಸ್ನೇಹಿತಾ! ಅಯ್ಯೋ ಅಯ್ಯೋ!

ದುಷ್ಯಂತ: (ಜೋರಾಗಿ ನಡೆಯುತ್ತಾ) ಮಾಧವ್ಯ ಭಯ ಬೇಡ, ಭಯ ಬೇಡ!

(ನೇಪಥ್ಯದಲ್ಲಿ)
(ಮತ್ತೆ ಅದೇ ಶಬ್ದ)
ಹೇಗೆ ಭಯಪಡದೆ ಇರಲಿ? ಇಲ್ಲಿ ಯಾವನೋ ನನ್ನ ಕುತ್ತಿಗೆಯನ್ನು ಕಬ್ಬನ್ನು ಕಿವುಚಿದಂತೆ ಕಿವುಚುತ್ತಿದ್ದಾನೆ!

ದುಷ್ಯಂತ: (ಆ ಕಡೆ ನೋಡುತ್ತಾ) ನನ್ನ ಧನಸ್ಸೆಲ್ಲಿ?

(ಕೈಯಲ್ಲಿ ಬಿಲ್ಲು ಹಿಡಿದು ಯವನಿಯ ಪ್ರವೇಶ)
ಯವನಿ: ಮಹಾರಾಜ, ಇಲ್ಲಿ ನಿಮ್ಮ ಧನಸ್ಸು ಮತ್ತು ಕೈವಸ್ತ್ರ.

(ನೇಪಥ್ಯದಲ್ಲಿ)
ಸಿಂಹ ಹಸುವಿನ ಕತ್ತನ್ನು ಹಿಡಿದು ರಕ್ತ ಕುಡಿಯುವಂತೆ ನಾನು ನಿನ್ನ ಕತ್ತನ್ನು ಸೀಳಿ ರಕ್ತ ಕುಡಿಯುತ್ತೇನೆ. ಆರ್ತ ರಕ್ಷಣೆ ಮಾಡುವ ನಿನ್ನ ರಾಜ ದುಷ್ಯಂತನನ್ನು ಬಿಲ್ಲು ಹಿಡಿದು ಬಂದು ನಿನ್ನನ್ನು ಕಾಪಾಡಲು ಕರೆ.

ದುಷ್ಯಂತ: (ಕೋಪದಿಂದ) ಇವನು ನನ್ನನೇ ಕರೆಯುತ್ತಿದ್ದಾನಲ್ಲ! ನಿಲ್ಲು ರಾಕ್ಷಸ. ನಿನ್ನನ್ನು ಇಲ್ಲದಂತೆ ಮಾಡುತ್ತೇನೆ.
(ಬಿಲ್ಲಿಗೆ ಹೆದೆಯೇರಿಸಿ)
ವೇತ್ರವತಿ ಮೆಟ್ಟಿಲುಗಳ ದಾರಿ ತೋರಿಸು.

ಪ್ರತೀಹಾರಿ: ಇತ್ತ, ಇತ್ತ ಮಹಾರಾಜ.
(ಎಲ್ಲರೂ ಬೇಗ ಮೆಟ್ಟಿಲು ಹತ್ತಿ ಹೋಗುತ್ತಾರೆ)

ದುಷ್ಯಂತ: (ಸುತ್ತ ನೋಡಿ) ಇದೇನು ಇಲ್ಲೆಲ್ಲಾ ಖಾಲಿಯಿದೆಯಲ್ಲ?
(ನೇಪಥ್ಯದಲ್ಲಿ)
ಅಯ್ಯೋ ಅಯ್ಯೋ! ನಾನು ನಿನ್ನನ್ನು ನೋಡುತ್ತಿದ್ದೇನೆ, ಆದರೆ ನಿನಗೆ ನಾನು ಕಾಣಿಸುತ್ತಿಲ್ಲ! ಬೆಕ್ಕು ಹಿಡಿದ ಇಲಿಯಂತೆ ನಾನು ಪ್ರಾಣಕ್ಕಾಗಿ ಒದ್ದಾಡುತ್ತಿದ್ದೇನೆ.

ದುಷ್ಯಂತ: ಯಾರದು, ಮರೆಯಲ್ಲಿದ್ದು ಗರ್ವಪಡುವವನೇ! ಈಗ ನೀನು ನನ್ನ ಬಾಣವನ್ನು ನೋಡುತ್ತೀಯ. ಇಗೋ ಬಾಣವನ್ನು ಬಿಟ್ಟೆ. ಬಾಣವೇ, ಹಂಸ ಹಾಲನ್ನು ಕುಡಿದು ನೀರನ್ನು ಬಿಡುವಂತೆ  ಕೊಲ್ಲುವುದನ್ನು ಮಾತ್ರ ಕೊಂದು ರಕ್ಷಿತನಾದ ಬ್ರಾಹ್ಮಣನನ್ನು ಬಿಟ್ಟುಬಿಡು!
(ಹೆದೆಯೇರಿಸುತ್ತಾನೆ)
(ಅಷ್ಟರಲ್ಲಿ ವಿದೂಷಕನನ್ನು ಬಿಟ್ಟು ಮಾತಲಿಯ ಪ್ರವೇಶ)

ಮಾತಲಿ: ದುಷ್ಯಂತ, ಇಂದ್ರ ನಿನ್ನ ಶರಗಳಿಗಾಗಿ ರಾಕ್ಷಸರನ್ನು ಮೀಸಲಿಟ್ಟಿದ್ದಾನೆ. ನಿನ್ನ ಬಾಣಗಳು ಅವರ ಮೇಲೆ ಬೀಳಲಿ. ಸ್ನೇಹಿತರ ಮೇಲೆ ಸೌಮ್ಯವಾದ ಕಣ್ಣುಗಳು ಬೀಳಬೇಕು ಬಾಣಗಳಲ್ಲ.

ದುಷ್ಯಂತ: (ಆಶ್ಚರ್ಯದಿಂದ ಬಿಲ್ಲನ್ನು ಕೆಳಗಿಳಿಸಿ) ಹೋ! ಮಾತಲಿ! ಇಂದ್ರನ ಸಾರಥಿಗೆ ನಮಸ್ಕಾರಪೂರ್ವಕ ಸ್ವಾಗತ!

ವಿದೂಷಕ: ಇವನು ನನ್ನನ್ನು ಯಜ್ಞ ಪಶುವಿನಂತೆ ಕೊಲ್ಲಲು ಬಂದಿದ್ದ. ಇವನಿಗೆ ಸ್ವಾಗತವೇ?

ಮಾತಲಿ: (ನಗುತ್ತಾ) ಆಯುಷ್ಮಾನ್, ಇಂದ್ರ ನನ್ನನ್ನು ಏಕೆ ಕಳಿಸಿದನೆಂದು ಕೇಳು.

ದುಷ್ಯಂತ: ಕೇಳುತ್ತಿದ್ದೇನೆ.

ಮಾತಲಿ: ಕಾಲನೇಮಿವಂಶದವರಾದ ದುರ್ಜಯರೆಂಬ ರಾಕ್ಷಸರಿದ್ದಾರೆ.

ದುಷ್ಯಂತ: ಇದ್ದಾರೆ. ಅವರ ಬಗ್ಗೆ ನಾರದರಿಂದ ಕೇಳಿದ್ದೇನೆ.

ಮಾತಲಿ: ಅವರು ಇಂದ್ರನಿಗೆ ತೊಂದರೆಕೊಡುವುದು ನಿನಗೆ ತಿಳಿದೇ ಇದೆ. ಅವರನ್ನು ರಣದಲ್ಲಿ ನೀನೇ ಸೋಲಿಸಬೇಕು. ಸೂರ್ಯ ಹಗಲಿನ ಕತ್ತಲನ್ನು ನಿವಾರಿಸುತ್ತಾನೆ, ರಾತ್ರಿಯ ಕತ್ತಲನ್ನು ಚಂದ್ರನೇ ಹೋಗಲಾಡಿಸಬೇಕು.
ನೀನು ನಿನ್ನ ಶಸ್ತ್ರಗಳನ್ನು ತೆಗೆದುಕೊಂಡು ಈ ಇಂದ್ರರಥವನ್ನು ಹತ್ತು. ವಿಜಯಕ್ಕಾಗಿ ಹೊರಡೋಣ.

ದುಷ್ಯಂತ: ಇಂದ್ರನ ಕರೆಯಿಂದ ಅನುಗ್ರಹೀತನಾದೆ. ಆದರೆ ಈ ಮಾಧವ್ಯನಿಗೆ ಹೀಗೇಕೆ ಮಾಡಿದೆ?

ಮಾತಲಿ: ಅದನ್ನೂ ಹೇಳುತ್ತೀನಿ. ಯಾವುದೋ ಕಾರಣದಿಂದ ನೀನು ಅನ್ಯಮನಸ್ಕನಾಗಿದ್ದೆ. ಆದ್ದರಿಂದ ನಿನಗೆ ಕೋಪಬರುವಂತೆ ಮಾಡಲು ಇವನನ್ನು ಹಿಡಿದೆ. ಇಂಧನವನ್ನು ಹಾಕಿದರೇ ಅಗ್ನಿ ಪ್ರಜ್ವಲಿಸುವುದು. ಪ್ರಚೋದಿಸಿದರೇ ಹಾವು ಹೆಡೆ ಬಿಚ್ಚುತ್ತದೆ. ಕೋಪಗೊಳಿಸಿದರೆ ಮಾತ್ರ ಮನುಷ್ಯರು ತಮ್ಮ ಶಕ್ತಿ ತಿಳಿಯುತ್ತಾರೆ.

ದುಷ್ಯಂತ: (ತಮ್ಮಲ್ಲೇ, ವಿದೂಷಕನಿಗೆ) ಮಾಧವ್ಯ, ದೇವಪತಿಯ ಆಜ್ಞೆ ಅನುಲ್ಲಂಘನೀಯ. ಇದನ್ನು ಅಮಾತ್ಯರಿಗೆ ಹೇಳಿ ನನ್ನ ಈ ಮಾತುಗಳನ್ನು ತಿಳಿಸು: ಕೇವಲ ನಿಮ್ಮ ಮತಿಯಿಂದ ಪ್ರಜೆಗಳನ್ನು ಪಾಲಿಸಿರಿ. ನನ್ನ ಧನಸ್ಸು ಈಗ ಬೇರೆ ಕಾರ್ಯದಲ್ಲಿದೆ.

ವಿದೂಷಕ: ಮಹಾರಾಜರ ಆಜ್ಞೆ.
(ನಿಷ್ಕ್ರಮಿಸುತ್ತಾನೆ)

ಮಾತಲಿ: ಆಯುಷ್ಮಾನ್, ರಥವನ್ನು ಹತ್ತು.
(ರಥವನ್ನು ಹತ್ತುವಂತೆ ನಟಿಸುತ್ತಾನೆ)
(ಎಲ್ಲರ ನಿಷ್ಕ್ರಮನ)

(ಆರನೆಯ ದೃಶ್ಯವು ಸಮಾಪ್ತವಾದುದು)

Wednesday, February 12, 2020

ಅಭಿಜ್ಞಾನ ಶಾಕುಂತಲ 5

                                                                            ದೃಶ್ಯ ೫

(ವಿದೂಷಕ ಮತ್ತು ಆಸನಸ್ಥನಾದ ರಾಜ ದುಷ್ಯಂತನ ಪ್ರವೇಶ)

ವಿದೂಷಕ: (ನೇಪಥ್ಯದ ಕಡೆ ಕಿವಿ ಕೊಡುತ್ತಾ) ರಾಜ, ಸ್ನೇಹಿತ, ಸಂಗೀತಶಾಲೆಯ ಕಡೆ ಕಿವಿ ಕೊಡು. ಲಯಶುದ್ಧವಾದ ಹಾಡಿಗೆ ಸ್ವರಸಂಯೋಜನೆ ಮಾಡುತ್ತಿದ್ದಾರೆ. ಅಲ್ಲಿ ಹಂಸಪದಿಕೆ ವರ್ಣಪರಿಚಯ ಮಾಡುತ್ತಿರಬಹುದು.

ದುಷ್ಯಂತ: ನೀನು ಸ್ವಲ್ಪ ಸುಮ್ಮನಿರು. ಕೇಳಿಸಿಕೊಳ್ಳುತ್ತೇನೆ.

(ಹಾಡು ಕೇಳಿಸುತ್ತದೆ)
ಪೊಸ ಮಧುವಂ ಬಯಸುವ ದುಂಬಿಯೇ, ಪೀರ್ದು
ರಸಮಂ ಮಾವಿನ ಮರದೊಳು
ವಸತಿಯಂ ಮಾಡಿ ತಾವರೆಯೆಸಳುಗಳೊಳು
ಪಿಸುಗುಡುತೆನ್ನಂ ತೊರೆದೆಯೇಂ?

ದುಷ್ಯಂತ: ಆಹಾ! ರಾಗ ಎಷ್ಟು ಮನೋಹರವಾಗಿದೆ!

ವಿದೂಷಕ: ಆ ಹಾಡಿನ ಅರ್ಥವಾಯಿತಾ?

ದುಷ್ಯಂತ: (ನಗುತ್ತಾ) ನಾನು ಪ್ರಣಯಿಸಿದ್ದವಳು. ಈಗ ಅವಳಿಗಿಂತ ಹೆಚ್ಚು ರಾಣಿ ವಸುಮತಿಯೊಡನೆಯೇ ಇರುತ್ತೇನೆ. ಆದ್ದರಿಂದ ಹೀಗೆ ಹಾಡುತ್ತಿದ್ದಾಳೆ. ಮಾಧವ್ಯ, ಹಂಸಪದಿಕೆಗೆ ಹೋಗಿ ನೀನು ಜಾಣತನದಿಂದಲೇ ಬೈದೆ  ಎಂದು ಹೇಳು.

ವಿದೂಷಕ: ಆಜ್ಞೆ ಮೀರುವುದಕ್ಕಾಗುತ್ತದೆಯೇ!
(ಎದ್ದು ನಿಂತು)
ಅಯ್ಯಾ ಸ್ನೇಹಿತ, ಅವಳೋ ಅಪ್ಸರೆ. ಈಗ ನಾನು ಹೋಗಿ ಅವಳಿಗೆ ಹೇಳಿದರೆ, ಅವಳು ನನ್ನ ಜುಟ್ಟು ಹಿಡಿದು ಹೊಡೆಯುತ್ತಾಳೆ. ನನಗಿನ್ನೇನು ಮೋಕ್ಷವೋ!

ದುಷ್ಯಂತ: ಇರಲಿ ಹೋಗು. ಪಟ್ಟಣದ ಶಿಷ್ಟಾಚಾರದಿಂದ ಹೇಳು.

ವಿದೂಷಕ: ನನಗಿನ್ನೇನು ಗತಿಯೋ?
(ನಿಷ್ಕ್ರಮಿಸುತ್ತಾನೆ)

ದುಷ್ಯಂತ: (ಸ್ವಗತ) ಇದೇನು, ಈ ಹಾಡನ್ನು ಕೇಳಿದ ಮೇಲೆ ನನಗೆ ಇಷ್ಟಜನರ ವಿರಹವಿಲ್ಲದಿದ್ದರೂ ಮನಸ್ಸಿಗೆ ಒಂದು ರೀತಿಯ ವ್ಯಾಕುಲವುಂಟಾಗುತ್ತಿದೆಯಲ್ಲ! ಇದೇನೋ! ರಮ್ಯವಾದುದನ್ನು ನೋಡಿದಾಗ, ಮಧುರವಾದುದನ್ನು ಕೇಳಿದಾಗ, ಸುಖಿಯಾಗಿದ್ದರೂ ಮನಸ್ಸು ಒಂದು ರೀತಿಯ ವೇದನೆಗೊಳಗಾಗುತ್ತದೆ. ತನಗೆ ಗೊತ್ತಿರದೆಯೇ ಮನಸ್ಸು ಏನನ್ನೋ ಚಿಂತಿಸುತ್ತದೆ. ಇದು ಜನ್ಮಾಂತರದಿಂದ ಬಂದ ಭಾವವೋ ಏನೋ?
(ಒಂದು ರೀತಿಯ ಚಿಂತೆಗೊಳಗಾಗುತ್ತಾನೆ)

(ರಾಜನ ಕಂಚುಕಿಯ ಪ್ರವೇಶ)
ಕಂಚುಕಿ: ಅಯ್ಯೋ! ನಾನು ಈ ಸ್ಥಿತಿಗೆ ಬಂದುಬಿಟ್ಟೆನಲ್ಲ! ಮೊದಲು ಆಚಾರಕ್ಕಾಗಿ ರಾಜನ ಈ ಬೆಳ್ಳಿಯ ಕೋಲನ್ನು ಹಿಡಿಯುತ್ತಿದ್ದೆ, ಈಗ ನನಗೆ ವಯಸ್ಸಾಗಿ ಇದನ್ನೇ ಊರುಗೋಲನ್ನಾಗಿ ಮಾಡಿಕೊಳ್ಳುವಹಾಗಾಯಿತಲ್ಲ!

ಧರ್ಮಕಾರ್ಯ ಮಾಡುವುದು ರಾಜನ ಕೆಲಸವೇನೋ ಸರಿ. ಆದರೆ ಧರ್ಮಾಸನದಿಂದ ಈಗ ತಾನೇ ಎದ್ದು ಹೋಗಿರುವ ಅವನಿಗೆ ಈಗ ಮತ್ತೆ ಕಣ್ವಶಿಷ್ಯರ ಆಗಮನವನ್ನು ಹೇಳುವುದಕ್ಕೆ ನನಗೆ ಇಷ್ಟವಿಲ್ಲ. ಅಥವಾ, ಲೋಕತಂತ್ರದ ಕೆಲಸಗಳಿಗೆ ವಿಶ್ರಮವೇ ಇಲ್ಲವೇನೋ! ಸೂರ್ಯ ತನ್ನ ಕುದುರೆಗಳನ್ನು ಹೂಡಿ ರಾತ್ರಿ ಹಗಲು ತಿರುಗುತ್ತಿರುತ್ತಾನೆ, ಗಾಳಿ ಬೀಸುತ್ತಲೇ ಇರುತ್ತದೆ, ಶೇಷ ಯಾವಾಗಲೂ ಭೂಮಿಭಾರವನ್ನು ಹೊರುತ್ತಲೇ ಇರುತ್ತಾನೆ. ಅಂತೆಯೇ ಈ ರಾಜರ ಧರ್ಮವೂ!

ಇರಲಿ. ನನ್ನ ಕೆಲಸ ನಾನು ಮಾಡೋಣ. 
(ಮುಂದೆ ಹೋಗಿ ರಾಜನನ್ನು ನೋಡುತ್ತಾ)
ತನ್ನ ಪ್ರಜೆಗಳನ್ನು ತನ್ನ ಮಕ್ಕಳಂತೆ ಅವರವರ ಕೆಸಲಗಳಿಗೆ ನಿಯಮಿಸಿ, ನಮ್ಮ ರಾಜ, ತಾನು ಬಿಸಿಲಿನಲ್ಲಿ ನಿಂತು ಮರಗಳ ನೆರಳಿನಲ್ಲಿ ಹೋಗುತ್ತಿರುವ ಆನೆಗಳ ಗುಂಪನ್ನು ರಕ್ಷಿಸುವ ಗಜರಾಜನಂತೆ, ವಿಶ್ರಮಿಸುತ್ತಿದ್ದಾನೆ.

(ರಾಜನ ಬಳಿ ಹೋಗಿ)
ಮಹಾರಾಜನಿಗೆ ಜಯವಾಗಲಿ. ಕಣ್ವರ ಸಂದೇಶವನ್ನು ತಂದು ಹಿಮಗಿರಿಯಿಂದ ಸ್ತ್ರೀತಪಸ್ವಿಗಳ ಜೊತೆ ಋಷಿಗಳು ಬಂದಿದ್ದಾರೆ. ಅವರನ್ನು ಕರೆಸುವುದು ತಮ್ಮ ಚಿತ್ತ.

ದುಷ್ಯಂತ: (ಆದರದಿಂದ) ಏನು ಕಣ್ವರ ಸಂದೇಶವೇ?

ಕಂಚುಕಿ: ಹೌದು ಮಹಾರಾಜ.

ದುಷ್ಯಂತ: ಹಾಗಾದರೆ ನಾನು ಹೇಳಿದೆನೆಂದು ಪುರೋಹಿತ ಸೋಮರಾತರಿಗೆ ಅವರೇ ಮುಂದೆ ನಿಂತು ಈ ಆಶ್ರಮವಾಸಿಗಳಿಗೆ ಶ್ರೌತವಿಧಿಗಳಿಂದ ಸತ್ಕರಿಸಲು ಹೇಳು. ನಾನು ತಪಸ್ವಿದರ್ಶನಕ್ಕೆ ಉಚಿತವಾದ ಪ್ರದೇಶದಲ್ಲಿ ಕಾಯುತ್ತಿರುತ್ತೇನೆ. 

ಕಂಚುಕಿ: ರಾಜರ ಆಜ್ಞೆ.
(ನಿರ್ಗಮಿಸುತ್ತಾನೆ)

ದುಷ್ಯಂತ: (ನಿಂತು) ವೇತ್ರವತಿ, ಅಗ್ನಿಗೃಹದ ಮಾರ್ಗವನ್ನು ತೋರಿಸು.

ಪ್ರತೀಹಾರಿ: ಇತ್ತ, ಇತ್ತ ಮಹಾರಾಜ.

ದುಷ್ಯಂತ: (ಮುಂದೆ ನಡೆಯುತ್ತಾ, ಅಧಿಕಾರಖೇದವನ್ನು ತೋರಿಸಿ) ಎಲ್ಲರೂ ಬೇಕಾದದ್ದನ್ನು ಪಡೆದಮೇಲೆ ಸುಖಿಯಾಗಿರುತ್ತಾರೆ. ಆದರೆ ರಾಜನಿಗಾದರೋ ದುಃಖ ಇನ್ನೂ ಹೆಚ್ಚಾಗುತ್ತದೆ. ಈ ರಾಜನ ಕೆಲಸ ಉತ್ಸಾಹಿಯನ್ನೂ ಕುಗ್ಗಿಸಿಬಿಡುತ್ತದೆ. ತನ್ನ ಭಾರವಾದ ಕೊಡೆಯನ್ನು ತನ್ನ ಕೈಯಲ್ಲೇ ಹಿಡಿದುಕೊಂಡಂತೆ.  ನೆರಳೂ ಇದೆ, ಭಾರವೂ ಇದೆ.

(ನೇಪಥ್ಯದಲ್ಲಿ)
ಹೊಗಳುಭಟರಿಬ್ಬರು : ಮಹಾರಾಜನಿಗೆ ಜಯಯಾಗಲಿ.

ಮೊದಲೆನೆಯವ: ಮಹಾರಾಜ, ನೀನು ನಿನ್ನ ಸುಖವನ್ನು ಬಿಟ್ಟು ಪ್ರಜೆಗಳ ಸುಖಕ್ಕಾಗಿ ಕಷ್ಟಪಡುತ್ತೀಯ. ಬಿಲಿಸಿನ ತಾಪವನ್ನು ತಾನು ತೆಗೆದುಕೊಂಡು ಬಂದವರಿಗೆ ನೆರಳನ್ನು ಕೊಡುವ ಮರದಂತೆ.

ಎರಡನೆಯವ: ಮಹಾರಾಜ, ನಿನ್ನ ಅಧಿಕಾರವನ್ನು ಉಪಯೋಗಿಸಿ ತಪ್ಪಿತಸ್ಥರನ್ನು ಶಿಕ್ಷಿಸುತ್ತೀಯ, ವಿವಾದಗಳನ್ನು ಹೋಗಲಾಡಿಸಿ ಎಲ್ಲರನ್ನೂ ರಕ್ಷಿಸುತ್ತೀಯ. ಸುಖ ಸಮಯದಲ್ಲಿ ಎಷ್ಟೋ ಬಂಧುಗಳಿರಬಹುದು ಆದರೆ ನೀನು ಎಲ್ಲ ಸಮಯದಲ್ಲಿಯೂ ಪ್ರಜೆಗಳಿಗೆ ಬಂಧು.

ದುಷ್ಯಂತ: ವ್ಯಾಕುಲದಿಂದಿದ್ದ ಮನಸ್ಸು ತಿಳಿಯಾಯಿತು.
(ಮುಂದೆ ಹೋಗುತ್ತಾನೆ)

ಪ್ರತೀಹಾರಿ: ಮಹಾರಾಜ, ಇದು ಹೋಮಧೇನುವಿರುವ ಅಗ್ನಿಗೃಹ. ಈ ಮೆಟ್ಟಿಲುಗಳನ್ನು ಹತ್ತಿ ಒಳಗೆ ಬನ್ನಿ.

ದುಷ್ಯಂತ: (ವೇತ್ರವತಿಯನ್ನು ಹಿಡಿದು ಮೆಟ್ಟಿಲು ಹತ್ತಿ) ವೇತ್ರವತಿ, ಕಣ್ವರು ನನಗಾಗಿ ಏಕೆ ಈ ಋಷಿಗಳನ್ನು ಕಳಿಸಿರಬಹುದು? ವ್ರತಿಗಳು ಇರುವ ಸ್ಥಳದಲ್ಲಿ ತಪಸ್ಸಿಗೆ ಯಾರಾದರೂ ವಿಘ್ನವನ್ನು ತಂದೊಡ್ಡಿದ್ದಾರೆಯೇ? ಧರ್ಮಾರಣ್ಯದಲ್ಲಿ ಪ್ರಾಣಿಗಳಿಗೇನಾದರೂ ತೊಂದರೆಯಾಯಿತೇ? ಅಥವಾ ನನ್ನ ತಪ್ಪಿನಿಂದ ಕಾಡಿನಲ್ಲಿ ಮರಗಳು ಹೂ ಹಣ್ಣುಗಳನ್ನು ಬಿಡುವುದನ್ನು ನಿಲ್ಲಿಸಿದವೇ? ಬಹುತರ್ಕಗಳಿಂದ ನನ್ನ ಮನಸ್ಸು ಓಲಾಡುತ್ತಿದೆ.

ಪ್ರತೀಹಾರಿ: ನಿಮ್ಮ ಒಳ್ಳೆಯ ಆಡಳಿತವನ್ನು ನೋಡಿ ಮಹಾರಾಜರನ್ನು ಅಭಿನಂದಿಸಲು ಬಂದ್ದಿದ್ದಾರೆ ಎಂದೆನಿಸುತ್ತಿದೆ.

(ಗೌತಮಿ ಮತ್ತು ಶಕುಂತಲೆಯನ್ನು ಮುಂದೆ ಮಾಡಿಕೊಂಡು ಶಾರ್ಙರವ, ಶಾರದ್ವತರ ಪ್ರವೇಶ. ಅವರ ಮುಂದೆ ಕಂಚುಕಿ ಮತ್ತು ಪುರೋಹಿತರು ಬರುತ್ತಾರೆ)

ಕಂಚುಕಿ: ಋಷಿಗಳೇ, ಇತ್ತ, ಇತ್ತ. 

ಶಾರ್ಙರವ: ಶಾರದ್ವತ, ಈ ಮಹಾರಾಜ ಮಹಾಭಾಗನೇ ಸರಿ. ಇವನದು ಅಭಿನ್ನ ಸ್ಥಿತಿ. ಜನರೆಲ್ಲರೂ ತಮ್ಮ ತಮ್ಮ ವರ್ಣಾಶ್ರಮ ಧರ್ಮಗಳನ್ನು ಪಾಲಿಸುತ್ತಿದ್ದಾರೆ. ಆದರೂ ಶಾಂತ ವಾತಾವರಣಕ್ಕೆ ಹೊಂದಿಕೊಂಡ ನನ್ನ ಮನಸ್ಸಿಗೆ ಈ ಜನಾಕೀರ್ಣವಾದ ನಗರ ಬೆಂಕಿಬಿದ್ದ ಮನೆಯಂತಿದೆ.

ಶಾರದ್ವತ: ಈ ನಗರಕ್ಕೆ ಬಂದ ಮೇಲಿಂದಲೂ ನಿನಗೆ ಹಾಗೇ ಅನಿಸುತ್ತಿದೆ. ನನಗೂ ಇಲ್ಲಿನ ಸುಖಪುರುಷರನ್ನು ನೋಡಿದರೆ ಸ್ನಾನ ಮಾಡದಿದ್ದವನನ್ನು ಸ್ನಾನ ಮಾಡಿದವನು, ಅಶುಚಿಯಾಗಿರುವವನನ್ನು ಶುಚಿಯಾಗಿರುವವನು, ನಿದ್ರೆ ಮಾಡಿದವನನ್ನು ಎಚ್ಚೆತ್ತವನು, ಕಟ್ಟಲ್ಪಟ್ಟಿರುವವನನ್ನು ಸ್ವತಂತ್ರನಾಗಿರುವವನೂ ನೋಡಿದಂತಾಗುತ್ತಿದೆ.

ಶಕುಂತಲೆ: (ಶಕುನವನ್ನು ನಟಿಸುತ್ತಾ) ನನ್ನ ಬಲಗಣ್ಣು ಅದರುತ್ತಿದೆಯಲ್ಲ!!

ಗೌತಮಿ: ಮಗಳೇ, ಅಮಂಗಳವನ್ನು ಬಿಡು. ನಿನ್ನ ಗಂಡನ ಕುಲದೈವಗಳು ನಿನಗೆ ಒಳ್ಳೆಯದನ್ನು ಮಾಡಲಿ.
(ಮುಂದೆ ಬರುತ್ತಾರೆ)

ಪುರೋಹಿತ: (ರಾಜನನ್ನು ನಿರ್ದೇಶಿಸಿ) ತಪಸ್ವಿಗಳೆ, ವರ್ಣಾಶ್ರಮಗಳನ್ನು ರಕ್ಷಿಸುವ ಮಹಾರಾಜ ತನ್ನ ಆಸನದಿಂದೆದ್ದು ತಮ್ಮಗಾಗಿ ಕಾಯುತ್ತಿದ್ದಾನೆ. ನೋಡಿ.

ಶಾರ್ಙರವ: ಪುರೋಹಿತ, ಇದು ಅಭಿನಂದನೀಯವೇ, ಆದರೂ ನಾವು ಇದಕ್ಕೆಲ್ಲ ತಟಸ್ಥರೇ! ಹಣ್ಣಿನಿಂದ ತುಂಬಿದ ಮರಗಳು ಬಾಗುತ್ತವೆ, ನೀರಿನಿಂದ ತುಂಬಿದ ಮೋಡ ಮಳೆ ಸುರಿಸುತ್ತದೆ, ಮಹಾತ್ಮರು ಸಮೃದ್ಧಿಯಲ್ಲಿ ಬಾಗುತ್ತಾರೆ, ಅದರಲ್ಲೇನೂ ವಿಶೇಷವಿಲ್ಲ, ಅದು ಅವರ ಸ್ವಭಾವ. 

ಪ್ರತೀಹಾರಿ: ಮಹಾರಾಜ, ಋಷಿಗಳು ಪ್ರಸನ್ನ ಮುಖರಾಗಿದ್ದಾರೆ. ಇವರದು ಏನೋ ಕಾರ್ಯವಿದೆಯೆಂದು ಅನಿಸುತ್ತಿದೆ.

ದುಷ್ಯಂತ: (ಶಕುಂತಲೆಯನ್ನು ನೋಡಿ) ಅಲ್ಲಿರುವವಳು ಯಾರು? ಮುಸುಕನ್ನು ಹೊದ್ದಿರುವುದರಿಂದ ಅವಳ ಲಾವಣ್ಯ ಅಸ್ಫುಟವಾಗಿದೆ. ಆದರೂ ಹಣ್ಣೆಲೆಗಳ ನಡುವೆ ಚಿಗುರೆಲೆಯಂತೆ ಶೋಭಾಯಮಾನವಾಗಿದ್ದಾಳೆ.

ಪ್ರತೀಹಾರಿ: ದೇವ, ಕುತೂಹಲದಿಂದ ನನಗೆ ತರ್ಕಿಸಲು ಆಗುತ್ತಿಲ್ಲ. ಆದರೆ ಅವಳನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.

ದುಷ್ಯಂತ: ಬಿಡು. ಪರಪತ್ನಿಯರನ್ನು ವರ್ಣಿಸಬಾರದು.

ಶಕುಂತಲೆ: (ಕೈಯನ್ನು ಹೊಟ್ಟೆಯ ಮೇಲಿಟ್ಟುಕೊಂಡು, ಸ್ವಗತ) ಹೃದಯವೇ ಏಕೆ ಭಯಪಡುತ್ತೀಯೆ? ಆರ್ಯಪುತ್ರನನ್ನು ನೋಡಿ ಧೈರ್ಯ ತಂದುಕೊ.

ಪುರೋಹಿತ: (ಮುಂದೆ ಬಂದು, ರಾಜನಿಗೆ) ಋಷಿಗಳನ್ನು ವಿಧಿವತ್ತಾಗಿ ಅರ್ಚಿಸಿದ್ದಾಗಿದೆ. ಕಣ್ವರಿಂದ ಏನೋ ಸಂದೇಶವಿದೆಯಂತೆ. ತಾವು ಆಲಿಸಬೇಕು.

ದುಷ್ಯಂತ: ಹಾಗೆಯೇ ಆಗಲಿ.

ಋಷಿಗಳು: (ಕೈಯೆತ್ತಿ) ರಾಜನಿಗೆ ಜಯವಾಗಲಿ.

ದುಷ್ಯಂತ: ಎಲ್ಲರಿಗೂ ನಮಸ್ಕಾರ.

ಋಷಿಗಳು: ಇಷ್ಟಾರ್ಥ ಸಿದ್ಧಿಯಾಗಲಿ.

ದುಷ್ಯಂತ: ತಪಸ್ವಿಗಳ ತಪಸ್ಸು ನಿರ್ವಿಘ್ನವಾಗಿದೆಯೇ?

ಋಷಿಗಳು: ನೀನು ಕಾಪಾಡುತ್ತಿರುವಾಗ ಧರ್ಮಾಚರಣೆಯಲ್ಲಿ ವಿಘ್ನವೆಲ್ಲಿ? ಸೂರ್ಯನಿರುವಾಗ ಕತ್ತಲೆಗೆ ಜಾಗವೆಲ್ಲಿ!

ದುಷ್ಯಂತ: ನಾನು ರಾಜ ಎನಿಸಿಕೊಂಡಿದ್ದು ಸಾರ್ಥಕವಾಯಿತು. ಲೋಕಾನುಗ್ರಹಕ್ಕಾಗಿ ಕಣ್ವರು ಕುಶಲರೇ?

ಶಾರ್ಙರವ: ಸಿದ್ಧಿಯಿರುವವರು ಸ್ವಾಧೀನ ಕುಶಲರು. ಅವರು ನಿಮ್ಮ ಕ್ಷೇಮವನ್ನು ಕೇಳುತ್ತಿದ್ದಾರೆ.

ದುಷ್ಯಂತ: ಕಣ್ವರ ಆಜ್ಞೆಯೇನು?

ಶಾರ್ಙರವ: ಅವರ ಸಂದೇಶ ಹೀಗಿದೆ: ನೀನು ಮತ್ತು ನನ್ನ ಮಗಳು ಪರಸ್ಪರ ಇಷ್ಟಪಟ್ಟು ಮದುವೆಯಾಗಿರುವುದು ನನಗೆ ನಿಮ್ಮಿಬ್ಬರ ಮೇಲಿರುವ ಪ್ರೀತಿಯಿಂದ ಒಪ್ಪಿಗೆಯಾಗಿದೆ. ನೀನು ಅರ್ಹರಲ್ಲಿ ಮೊದಲನೆಯವನು. ಶಕುಂತಲೆ ಸತ್ಕಾರ್ಯದ ಮೂರ್ತರೂಪಳು. ನಿಮ್ಮಿಬ್ಬರನ್ನೂ ಸೇರಿಸಿ ಪ್ರಜಾಪತಿ ಎಷ್ಟೋ ದಿನವಾದಮೇಲೆ ಅಪವಾದದಿಂದ ತಪ್ಪಿಸಿಕೊಂಡಿದ್ದಾನೆ.
ಆದ್ದರಿಂದ ನೀನು ಗರ್ಭಿಣಿಯಾದ ಇವಳನ್ನು ಸಹಧರ್ಮಿಣಿಯಾಗಿ ಸ್ವೀಕರಿಸಬೇಕೆಂದು ಕಣ್ವರ ಸಂದೇಶ.

ಗೌತಮಿ: ಆರ್ಯ, ನನಗೂ ಏನಾದರೂ ಹೇಳಬೇಕೆನಿಸುತ್ತದೆ. ಆದರೆ ನನ್ನ ಮಾತು ಬೇಕಿಲ್ಲವೆನಿಸುತ್ತದೆ. ನೀನೂ ಗುರುಜನರನ್ನು ಕೇಳಲಿಲ್ಲ, ಇವಳೂ ಬಂಧು ಜನರನ್ನು ಕೇಳಲಿಲ್ಲ,  ಇದು ನಿಮ್ಮಬ್ಬರ ನಡುವೆಯೇ ನಡೆದುದರಿಂದ ನಾನು ನಿಮಗೆ ಏನು ಹೇಳಲಿ?

 ಶಕುಂತಲೆ: (ಸ್ವಗತ) ಆರ್ಯಪುತ್ರ ಏನು ಹೇಳುತ್ತಾನೋ?

ದುಷ್ಯಂತ: ಏನು ಹೇಳುತ್ತಿದ್ದೀರಿ?

ಶಕುಂತಲೆ: (ಸ್ವಗತ) ಆರ್ಯಪುತ್ರನ ಮಾತಿನಲ್ಲಿ ಕಿಡಿಯಿದೆ!

ಶಾರ್ಙರವ: ಇದೇನು? ನಿನಗೆ ಲೋಕರೂಢಿ ಗೊತ್ತೇ ಇದೆಯಲ್ಲ? ಮದುವೆಯಾಗಿರುವ ಹೆಣ್ಣು ತವರು ಮನೆಯಲ್ಲಿದ್ದರೆ ಅವಳನ್ನು ಜನರು ಅನ್ಯಥಾ ಭಾವಿಸುತ್ತಾರೆ. ಆದ್ದರಿಂದ ಪ್ರಿಯವೋ, ಅಪ್ರಿಯವೋ, ಮನೆಯವರು ಅವಳನ್ನು ಗಂಡನ ಜೊತೆಯೇ ಇರಬೇಕೆಂದು ಬಯಸುತ್ತಾರೆ.

ದುಷ್ಯಂತ: ಈ ಮಹಿಳೆಯನ್ನು ನಾನು ಈ ಮುಂಚೆ ಮದುವೆಯಾಗಿದ್ದೇನೆಯೇ?

ಶಕುಂತಲೆ: (ಸ್ವಗತ) ಹೃದಯವೇ, ನಿನ್ನ ಶಂಕೆ ನಿಜವಾಯಿತು!

ಶಾರ್ಙರವ: ಇದೇನು, ಮಾಡಿದುದರ ಬಗ್ಗೆ ಲಜ್ಜೆಯೂ? ಧರ್ಮವಿಮುಖತೆಯೋ ಅಥವಾ ಅವಜ್ಞೆಯೊ?

ದುಷ್ಯಂತ: ಇದೇನು ಅಸಂಬದ್ಧವಾದ ಕಲ್ಪನೆಗಳು?

ಶಾರ್ಙರವ: ಪ್ರಾಯ ಮತ್ತು ಐಶ್ವರ್ಯಗಳಿದ್ದಲ್ಲಿ ಇಂತಹ ವಿಕಾರಗಳು ತಲೆಯೆತ್ತುತ್ತವೆ.

ದುಷ್ಯಂತ: ನನ್ನ ಮೇಲಿನ ಆರೋಪ ತೀವ್ರವಾಯಿತು.

ಗೌತಮಿ: ಮಗಳೇ, ಸ್ವಲ್ಪ ಹೊತ್ತು ಲಜ್ಜೆಯನ್ನು ಬಿಡು. ನಿನ್ನ ಮುಸುಕನ್ನು ತೆಗೆಯುತ್ತೇನೆ. ನಿನ್ನ ಗಂಡ ಗುರುತು ಹಿಡಿಯುತ್ತಾನೆ.
(ಹಾಗೇ ಮಾಡುತ್ತಾಳೆ)

ದುಷ್ಯಂತ: (ಶಕುಂತಲೆಯನ್ನು ನೋಡಿ, ಸ್ವಗತ) ಇದೇನು ಇವಳು ಇಷ್ಟು ಸುಂದರವಾಗಿರುವವಳು? ಇವಳನ್ನು ಮೊದಲು ಮದುವೆಯಾಗಿದ್ದೇನೋ ಇಲ್ಲವೋ ನೆನಪಿಗೆ ಬರುತ್ತಿಲ್ಲ. ಉಷಾಕಾಲದಲ್ಲಿ ಇಬ್ಬನಿ ಬಿದ್ದ ಹೂವಿನ ಮೇಲೆ ಕೂರಬೇಕೋ ಬಿಡಬೇಕೋ ಎಂದು ನಿರ್ಧರಿಸಲಾರದ ಭ್ರಮರದಂತೆ ನಾನೂ ಆಗಿದ್ದೇನೆ.
(ಹೀಗೆ ಯೋಚನೆ ಮಾಡುತ್ತಾ ಕೂರುತ್ತಾನೆ)

ಪ್ರತೀಹಾರಿ: (ಸ್ವಗತ) ನನ್ನ ರಾಜ ಎಷ್ಟು ಧಾರ್ಮಿಕ! ಇಷ್ಟು ಸುಂದರವಾಗಿರುವವಳನ್ನು ನೋಡಿದ ಮೇಲೂ ಯೋಚಿಸುತ್ತಿದ್ದಾನಲ್ಲ!

ಶಾರ್ಙರವ: ರಾಜನ್, ಏಕೆ ಸುಮ್ಮನಿದ್ದೀಯ?

ದುಷ್ಯಂತ: ಮುನಿಗಳೇ, ಎಷ್ಟು ಜ್ಞಾಪಿಸಿಕೊಂಡರೂ ಇವರನ್ನು ಮದುವೆಯಾದ ನೆನಪೇ ನನಗಿಲ್ಲ. ಹಾಗಿದ್ದಲ್ಲಿ, ಗರ್ಭಿಣಿಯಾದ ಇವರನ್ನು ನನ್ನ ಪತ್ನಿ ಎಂದು ಹೇಗೆ ಸ್ವೀಕರಿಸಲಿ?

ಶಕುಂತಲೆ: (ದುಃಖದಿಂದ, ಸ್ವಗತ) ಅಯ್ಯೋ! ಆರ್ಯನಿಗೆ ನನ್ನನ್ನು ಕೈಹಿಡಿರುವುದರಲ್ಲೇ ಸಂದೇಹವಿದೆ. ಇನ್ನು ರಾಣಿಯಾಗುವ ಆಸೆಯೆಲ್ಲಿ!!

ಶಾರ್ಙರವ: ನೀನು ಇನ್ನೇನೂ ಹೇಳಬೇಕಾಗಿಲ್ಲ. ನಿನ್ನಂತಹ ಅಮಾನ್ಯನಿಗೆ ಮುನಿ ತನ್ನ ಮಗಳನ್ನು ಕೊಟ್ಟಿದ್ದಾನಲ್ಲ! ಕಳ್ಳ ಕದ್ದುಕೊಂಡು ಹೋಗಿ ಸಿಕ್ಕಿಬಿದ್ದಮೇಲೆ, ಕಳೆದ ವಸ್ತುವನ್ನು ಅವನಿಗೆ ಕೊಟ್ಟರೂ ಅವನು ಬೇಡವೆಂದ ಪರಿಸ್ಥಿತಿಯಾಗಿದೆ!

ಶಾರದ್ವತ: ಶಾರ್ಙರವ, ಇನ್ನು ನಿಲ್ಲಿಸೋಣ. ಶಕುಂತಲೆ, ನಮ್ಮಿಂದ ಹೇಳಬೇಕಾದದ್ದೆಲ್ಲ ಹೇಳಿಯಾಗಿದೆ. ಮಹಾರಾಜ ಹೀಗೆ ಹೇಳುತ್ತಿದ್ದಾನೆ. ಇನ್ನು ನೀನೆ ಉತ್ತರ ಕೊಡು.

ಶಕುಂತಲೆ: (ಸ್ವಗತ) ಆ ಪ್ರೀತಿಯೇ ಈ ಅವಸ್ಥೆಗೆ ಬಂದಮೇಲೆ ಇನ್ನೇನನ್ನು ನೆನಪಿಸುವುದು! ಇನ್ನು ನನಗೆ ಶೋಕವೇ ಕಟ್ಟಿಟ್ಟ ಬುತ್ತಿ.
(ಪ್ರಕಾಶ)
ಆರ್ಯಪುತ್ರ...
(ಅರ್ಧ ಹೇಳಿ ನಿಲ್ಲಿಸಿ)
ಅನುಮಾನವಿದ್ದಾಗ ಆರ್ಯಪುತ್ರ ಎನ್ನುವುದು ಸರಿಯಲ್ಲ. ಪೌರವ, ಹಿಂದೆ ಆಶ್ರಮಪದದಲ್ಲಿ ನಿನ್ನ ಪ್ರೀತಿಯನ್ನು ಹೃದಯಪೂರ್ವಕವಾಗಿ ನನಗೆ ಕೊಟ್ಟು ಈಗ ನೀನು ಹೀಗೆ ಹೇಳುತ್ತಿರುವುದು ಸರಿಯೇ?

ದುಷ್ಯಂತ: (ಕಿವಿ ಮುಚ್ಚಿಕೊಂಡು) ಶಾಂತಂ ಪಾಪಂ! ನದಿಯ ಪ್ರವಾಹ ನೀರನ್ನು ಕಲುಷಿತ ಮಾಡುವುದಲ್ಲದೆ ದಡವನ್ನೂ, ದಡದ ಮರಗಳನ್ನೂ ಕೊಚ್ಚಿಕೊಂಡು ಹೋಗುವಂತೆ ನೀನು ನನಗಷ್ಟೇ ಅಲ್ಲದೆ ನಮ್ಮ ವಂಶಕ್ಕೂ ಮಸಿ ಬಳಿಯಬೇಕೆಂದಿರುವೆಯಾ?

ಶಕುಂತಲೆ: ಆಯಿತು, ನಿನಗೆ ನನ್ನನ್ನು ಸ್ವೀಕರಿಸಲು ನಿಜವಾಗಿಯೂ ಶಂಕೆಯಿದ್ದರೆ, ಅದನ್ನು ಒಂದು ಅಭಿಜ್ಞಾನವನ್ನು ತೋರಿಸಿ ಅದನ್ನು ಹೋಗಲಾಡಿಸುತ್ತೇನೆ.

ದುಷ್ಯಂತ: ಅದೇ ಸರಿ.

ಶಕುಂತಲೆ: (ಕೈ ಬೆರಳನ್ನು ನೋಡಿಕೊಂಡು) ಹಾ ಧಿಕ್, ಹಾ ಧಿಕ್!! ನನ್ನ ಬೆರಳಿನಲ್ಲಿ ಉಂಗುರವೇ ಇಲ್ಲ!!
(ವಿಷಾದದಿಂದ ಗೌತಮಿಯನ್ನು ನೋಡುತ್ತಾಳೆ)

ಗೌತಮಿ: ನೀನು ಶಕ್ರಾವತಾರದ ಶಚೀತೀರ್ಥದಲ್ಲಿ ಅರ್ಘ್ಯ ಕೊಡುವಾಗ ಜಾರಿ ಬಿದ್ದಿರಬೇಕು.

ದುಷ್ಯಂತ: (ನಗುತ್ತಾ) ಇಂತಹವುಗಳನ್ನು ನೋಡಿಯೇ ಸ್ತ್ರೀಯರನ್ನು ಬೇಕಾದ ಕ್ಷಣದಲ್ಲೇ ಕಥೆಕಟ್ಟುತ್ತಾರೆಂದು ಹೇಳುವುದು.

ಶಕುಂತಲೆ: ಅಯ್ಯೋ! ವಿಧಿ ತನ್ನ ಪ್ರಭುತ್ವವನ್ನು ತೋರಿಸಿಬಿಟ್ಟಿತಲ್ಲ! ಆದರೂ ಒಂದು ಮಾತು ಹೇಳುತ್ತೇನೆ.

ದುಷ್ಯಂತ: ಕೇಳುವುದಕ್ಕೆ ಸಿದ್ಧನಾಗಿದ್ದೇನೆ.

ಶಕುಂತಲೆ: ಒಂದು ದಿನ ನವಮಾಲಿಕಾ ಮಂಟಪದಲ್ಲಿ ಕೂತಿದ್ದಾಗ ತಾವರೆಯೆಲೆಯಲ್ಲಿ ನೀನು ನೀರನ್ನು ಹಿಡಿದಿದ್ದೆ....

ದುಷ್ಯಂತ: ಮುಂದೆ...

ಶಕುಂತಲೆ: ಅಲ್ಲಿಗೆ ನನ್ನ ಪುತ್ರಸಮಾನವಾದ ದೀರ್ಘಾಪಾಂಗವೆಂಬ ಜಿಂಕೆಯ ಮರಿ ಬಂತು. ಆಗ ನೀನು ಮೊದಲು ಅದಕ್ಕೆ ನೀರನ್ನು ಕುಡಿಸಲು ಹೋದೆ. ಆದರೆ ಅದು ನಿನ್ನ ಕೈಯಿಂದ ಕುಡಿಯಲಿಲ್ಲ. ಆದರೆ ನಾನು ಕುಡಿಸಿದಾಗ ಕುಡಿಯಿತು. ಆಗ ನೀನು ನನ್ನನ್ನು ಒಂದೇ ರೀತಿಯಿರುವವರಲ್ಲಿ ವಿಶ್ವಾಸ ಹೆಚ್ಚು ಎಂದು ಗೇಲಿ ಮಾಡಿದೆ. ನೆನಪಿದೆಯೇ?

ದುಷ್ಯಂತ: ಇದು ತಮ್ಮ ಕೆಲಸ ಮಾಡಿಸಿಕೊಳ್ಳಬೇಕೆಂದಿರುವ ಹೆಂಗಸರಲ್ಲಿ ಮಧುರವಾದ ಮಾತುಗಳಲ್ಲಿ ಸುಳ್ಳು ಹೇಳುವ ಪರಿಪಾಠ.

ಗೌತಮಿ: ಮಹಾಭಾಗ ಈ ಮಾತುಗಳು ನಿನಗೆ ಉಚಿತವಲ್ಲ. ತಪೋವನದಲ್ಲಿ ಬೆಳೆದ ಜನಕ್ಕೆ ಮೋಸದ ಬಗ್ಗೆಯೇ ಗೊತ್ತಿರುವುದಿಲ್ಲ.

ದುಷ್ಯಂತ: ತಾಪಸವೃದ್ದೆಯೇ, ಸ್ತ್ರೀಯರಿಗೆ ಹೇಳಿಕೊಡದೆಯೂ ಇಂತಹ ಪಟುತ್ವ ಇರುತ್ತದೆ. ಅಂತಹುದರಲ್ಲಿ ನಿಮ್ಮಂತಹ ತಿಳಿದಿರುವವರಿಗೆ ಇನ್ನೇನು? ಕೋಗಿಲೆಗಳು ಆಕಾಶಕ್ಕೆ ಹಾರಿ ಹೋಗುವಾಗ ತಮ್ಮ ಮರಿಗಳನ್ನು ಬೇರೆ ಪಕ್ಷಿಗಳ ಗೊಡಿನಲ್ಲಿಟ್ಟು ಹೋಗುತ್ತವೆಯಂತೆ.

ಶಕುಂತಲೆ: (ಕೋಪದಿಂದ) ಅನಾರ್ಯ! ನೀನು ಯೋಚನೆ ಮಾಡುತ್ತಿರುವುದು ನಿನ್ನ ವ್ಯಕ್ತಿತ್ವವನ್ನು ತೋರಿಸುತ್ತದೆ. ಧರ್ಮ ಕವಚದೊಳಗೆ ಸೇರಿಕೊಂಡು ಹುಲ್ಲು ಮುಚ್ಚಿದ ಹಾಳುಬಾವಿಯಂತೆ ಇದ್ದೀಯ! ನಿನ್ನಂತೆಯೇ ಎಲ್ಲರೂ ಎಂದುಕೊಂಡೆಯಾ!?

ದುಷ್ಯಂತ: (ಸ್ವಗತ) ನನ್ನನ್ನು ಸಂದಿಗ್ಧದಲ್ಲಿ ಸಿಕ್ಕಿಸಿದ್ದರೂ ಇವಳ ಕೋಪದಿಂದ ಇಲ್ಲಿ ಮೋಸವಿಲ್ಲವೆಂದು ತೋರುತ್ತದೆ. ಇವಳು ಹುಬ್ಬು ಗಂಟಿಕ್ಕಿರುವುದು ಮನ್ಮಥನ ಬಿಲ್ಲೇ ಮುರಿದಂತಿದೆ. 
(ಪ್ರಕಾಶ, ಸ್ವಲ್ಪ ಶಾಂತನಾಗಿ)
ದುಷ್ಯಂತನ ಚರಿತೆ ಎಲ್ಲರಿಗೂ ಗೊತ್ತಿರುವಂಥದು. ನನ್ನನ್ನು ಯಾರೂ ಹೀಗೆ ನೋಡಿಲ್ಲ.

ಶಕುಂತಲೆ: ಅಯ್ಯೋ! ಈಗ ಕೀಳಾದ ಹೆಂಗಸಾದಂತೆನಾದೆನಲ್ಲ. ಈ ಪುರುವಂಶದವನಿಗೆ, ಹೃದಯದಲ್ಲಿ ವಿಷವಿಟ್ಟುಕೊಂಡು ಮಧುರವಾಗಿ ಮಾತಾಡುವವನಿಗೆ ಮರುಳಾಗಿ ಮೋಸ ಹೋಗಿಬಿಟ್ಟೆನಲ್ಲ! 
(ಸೆರಗಿನಿಂದ ಮುಖ ಮುಚ್ಚಿಕೊಂಡು ಅಳುತ್ತಾಳೆ)

ಶಾರ್ಙರವ: ಆತ್ಮಕೃತವಾದ ಚಾಪಲ್ಯ ಸುಡುವುದು ಹೀಗೆಯೇ.... ಮೊದಲೇ ಪರೀಕ್ಷೆಮಾಡುವುದು ಉತ್ತಮ. ಅದರಲ್ಲೂ ಇಂತಹ ಗುಪ್ತ ಕೆಲಸಗಳಲ್ಲಿ. ಅಜ್ಞಾತರಲ್ಲಿ ಸೌಹಾರ್ದ ವೈರತನವಾಗಿ ಪರ್ಯವಸಾನವಾಗುತ್ತದೆ.

ದುಷ್ಯಂತ: ಋಷಿಗಳೇ, ಈ ಹೆಂಗಸಿನಲ್ಲಿ ನಂಬಿಕೆಯಿಟ್ಟು ನನ್ನ ಮೇಲೆ ಏಕೆ ಆರೋಪ ಹೊರಸುತ್ತೀರ?

ಶಾರ್ಙರವ: (ವ್ಯಂಗ್ಯವಾಗಿ) ಒಹೋ ನಿಮಗೆ ಅವಮಾನವಾಯಿತೋ! ಮೋಸದ ಕೊನೆಯನ್ನೂ ತಿಳಿಯದ ಇವಳ ಪ್ರಮಾಣ ಅಮಾನ್ಯ, ಯಾವಾಗಲೂ ಮೋಸವನ್ನೇ ಚಿಂತಿಸುವ ನಿಮ್ಮಂತಹ ರಾಜರ  ಮಾತು ಮಾನ್ಯವೇ?

ದುಷ್ಯಂತ: ಒಹೋ, ಸತ್ಯವಾದಿಗಳೇ, ನಿಮ್ಮ ಮಾತನ್ನೇ ಒಪ್ಪೋಣ. ಆದರೆ ಇವಳಿಗೆ ಮೋಸ ಮಾಡಿ ನಮಗೆ ಸಿಗುವುದಾದರೂ ಏನು?

ಶಾರ್ಙರವ: ಅಧಃಪತನ.

ದುಷ್ಯಂತ: ಅಧಃಪತನವಾಗುವುದು ಪೌರವರಿಗೆ ಸಾಧ್ಯವೇ ಇಲ್ಲ. ಅದರಲ್ಲಿ ನನಗೆ ನಂಬಿಕೆಯೂ ಇಲ್ಲ.

ಶಾರದ್ವತ: ಶಾರ್ಙರವ, ಇವನಿಗೇನು ಉತ್ತರ ಕೊಡುವುದು? ಗುರುಗಳ ಸಂದೇಶವನ್ನು ಕೊಟ್ಟಾಯಿತು. ಹೊರಡೋಣ ನಡಿ.
(ರಾಜನಿಗೆ)
ಅಯ್ಯಾ ರಾಜ, ನಿನ್ನ ಹೆಂಡತಿ ಇಲ್ಲಿದ್ದಾಳೆ. ಒಪ್ಪಿಕೊ, ಇಲ್ಲ ಬಿಡು. ಹೆಂಡತಿಯರಲ್ಲಿ ಗಂಡನಿಗೆ ಎಲ್ಲ ಅಧಿಕಾರವಿದೆ.
ಗೌತಮಿ ನಡಿ ಹೋಗೋಣ.

ಶಕುಂತಲೆ: ಈ ಮೋಸಗಾರನಿಂದ ಬಿಟ್ಟವಳಾದೆ. ಈಗ ನೀವೂ ನನ್ನನ್ನು ಬಿಟ್ಟರೆ ಹೇಗೆ?
(ಅವರ ಹಿಂದೆ ಹೋಗಲು ಪ್ರಯತ್ನಿಸುತ್ತಾಳೆ)

ಗೌತಮಿ: (ನಿಂತು) ಮಗನೆ ಶಾರ್ಙರವ, ಶಕುಂತಲೆಯೂ ಅಳುತ್ತಾ ನಮ್ಮ ಜೊತೆಯೇ ಬರುತ್ತಿದ್ದಾಳೆ. ಗಂಡ ಮೋಸಮಾಡಿದರೆ ಪಾಪ, ನನ್ನ ಮಗಳು, ಇವಳೇನು ಮಾಡುತ್ತಾಳೆ?

ಶಾರ್ಙರವ: (ಕೋಪದಿಂದ ಹಿಂದೆ ಬಂದು) ಭಯವಿಲ್ಲದವಳೇ? ಏನು ಸ್ವಾತಂತ್ರ್ಯ ಬೇಕೇನು?
(ಶಕುಂತಲೆ ಭಯದಿಂದ ನಡುಗುತ್ತಾಳೆ)
ಶಕುಂತಲೆ, ನೀನು ರಾಜ ಹೇಳಿದಂತೆಯೇ ಆದರೆ, ತಂದೆಯ ಮನೆಗೆ ನಿನ್ನಿಂದೇನಾಗಬೇಕು? ನೀನು ಶುಚಿವಂತಳೇ ಆಗಿದ್ದರೆ ದಾಸಿಯಾದರೂ ನಿನಗೆ ಗಂಡನ ಮನೆಯೇ ಮೇಲು.
ಇಲ್ಲೇ ನಿಲ್ಲು. ನಾವು ಹೊರಡುತ್ತೇವೆ.

ದುಷ್ಯಂತ: ತಪಸ್ವಿಗಳೇ, ಇವರನ್ನು ಇಲ್ಲೇ ಏಕೆ ಬಿಟ್ಟು ಹೋಗುತ್ತಿದ್ದೀರಿ? ಚಂದ್ರ ನೈದಿಲೆಯನ್ನೇ ಅರಳಿಸುತ್ತಾನೆ, ಸೂರ್ಯ ಕಮಲವನ್ನೇ ಅರಳಿಸುತ್ತಾನೆ. ಸಂಯಮಿಗಳು ಬೇರೆಯವರ ವಸ್ತುವನ್ನು ಎಂದೂ ಬಯಸುವುದಿಲ್ಲ.

ಶಾರ್ಙರವ: ಒಂದು ಪಕ್ಷದಲ್ಲಿ ಇವಳನ್ನು ನೀನು ಪರಿಗ್ರಹಿಸಿರುವುದು ಮರೆತಿದ್ದರೂ, ನೀನು ಹೆಂಡತಿಯನ್ನು ಬಿಡುವುದು ಅಧರ್ಮವಲ್ಲವೇ?

ದುಷ್ಯಂತ: (ತನ್ನ ಪುರೋಹಿತನಿಗೆ) ನಾನು ನಿಮ್ಮನ್ನೇ ನ್ಯಾಯ ಕೇಳುತ್ತೇನೆ. ಈಗ ನಾನು ಮೋಸಮಾಡಿರಬೇಕು ಅಥವಾ ಇವರು ಸುಳ್ಳು ಹೇಳುತ್ತಿರಬೇಕು. ನಾನು ಮರೆತು ಹೆಂಡತಿಯನ್ನು ಬಿಡುವುದು ಸರಿಯೋ ಅಥವಾ ಪರಪತ್ನಿಯನ್ನು ಪರಿಗ್ರಹಿಸುವುದು ಸರಿಯೋ?

ಪುರೋಹಿತ: (ಯೋಚನೆಮಾಡಿ) ಹೀಗೆ ಮಾಡೋಣ.

ದುಷ್ಯಂತ: ಹೇಳಿ ಭಗವನ್.

ಪುರೋಹಿತ: ಭಗವತಿಯವರು ನನ್ನ ಮನೆಯಲ್ಲಿರಲಿ. ನಾನೇಕೆ ಹೀಗೆ ಹೇಳುತ್ತಿದ್ದೇನೆಂದರೆ, ನಿನಗೆ ಚಕ್ರವರ್ತಿಯಾಗುವ ಮಗ ಹುಟ್ಟುತ್ತಾನೆಂದು ಸಾಧುಗಳ ಭವಿಷ್ಯವಿದೆ. ಇವರಿಗೆ ನಿನಗೆ ಅನುರೂಪನಾದ ಮಗ ಹುಟ್ಟಿದ ಪಕ್ಷದಲ್ಲಿ ನೀನು ಇವರನ್ನು ಗೌರವದಿಂದ ಸತ್ಕರಿಸಿ ಪರಿಗ್ರಹಿಸು. ಇಲ್ಲದೆ ಇದ್ದರೆ ಅವರನ್ನು ಅವರ ತಂದೆಯ ಮನೆಗೆ ಕಳುಹಿಸೋಣ. 

ದುಷ್ಯಂತ: ಗುರುಗಳು ಹೇಳಿದಂತೆ ಆಗಲಿ.

ಪುರೋಹಿತ: ಮಗಳೇ, ನನ್ನ ಜೊತೆ ಬಾ.

ಶಕುಂತಲೆ: ಅಮ್ಮ ಭೂಮಿ ನನಗೆ ಜಾಗ ಕೊಡು!
(ಜೋರಾಗಿ ಅಳುತ್ತಾ ಶಕುಂತಲೆ ಪುರೋಹಿತನ ಹಿಂದೆ ಹೋಗುತ್ತಾಳೆ)
(ಋಷಿಗಳು ಗೌತಮಿಯ ಜೊತೆ ನಿಷ್ಕ್ರಮಿಸುತ್ತಾರೆ)
(ದುಷ್ಯಂತ ಶಾಪಗ್ರಸ್ತನ ಸ್ಥಿತಿಯಲ್ಲಿ ಯೋಚನೆ ಮಾಡುತ್ತಾ ಕೂರುತ್ತಾನೆ)
(ನೇಪಥ್ಯದಲ್ಲಿ)

ಆಶ್ಚರ್ಯ!! ಆಶ್ಚರ್ಯ!!!

ದುಷ್ಯಂತ: (ಆ ಕಡೆ ಕಿವಿ ಕೊಡುತ್ತಾ) ಈಗೇನಾಯಿತು?

(ಮತ್ತೆ ಪುರೋಹಿತನ ಪ್ರವೇಶ)
ಪುರೋಹಿತ: (ಆಶ್ಚರ್ಯದಿಂದ) ಮಹಾರಾಜ ಅದ್ಭುತವೊಂದು ನಡೆಯಿತು.

ದುಷ್ಯಂತ: ಏನಾಯಿತು?

ಪುರೋಹಿತ: ಕಣ್ವಶಿಷ್ಯರು ಹೋದಮೇಲೆ ಆ ಬಾಲೆ ತನ್ನ ಭಾಗ್ಯವನ್ನು ನೆನಸಿಕೊಂಡು ಕೈಯೆತ್ತಿ ಜೋರಾಗಿ ಅಳಲು ಶುರು ಮಾಡಿದಳು.....

ದುಷ್ಯಂತ: ಆಮೇಲೆ?

ಪುರೋಹಿತ: ಆಗ ಅಪ್ಸರತೀರ್ಥದ ಹತ್ತಿರ ಒಂದು ಜ್ಯೋತಿ ಶಕುಂತಲೆಯನ್ನು ಎತ್ತಿಕೊಂಡು ಹೋಯಿತು.
(ಎಲ್ಲರೂ ವಿಸ್ಮಯರಾಗುತ್ತಾರೆ)

ದುಷ್ಯಂತ: ಭಗವನ್, ಇದರ ಬಗ್ಗೆ ಸಾಕಷ್ಟು ಚರ್ಚೆಮಾಡಿ ತೀರ್ಮಾನಿಸಿದ್ದೇವೆ. ಮತ್ತೆ ತರ್ಕವೇಕೆ? ವಿಶ್ರಮಿಸಿರಿ.

ಪುರೋಹಿತ: ಮಹಾರಾಜನಿಗೆ ಜಯವಾಗಲಿ.
(ನಿಷ್ಕ್ರಮಿಸುತ್ತಾನೆ)

ದುಷ್ಯಂತ: (ಪ್ರತೀಹಾರಿ ವೇತ್ರವತಿಗೆ) ವೇತ್ರವತಿ, ವಿಷಣ್ಣನಾಗಿದ್ದೇನೆ. ಶಯನದ ಮನೆಗೆ ಕರೆದೊಯ್ಯಿ.

ಪ್ರತೀಹಾರಿ: ಇತ್ತ, ಇತ್ತ ಮಹಾರಾಜ.

(ಮುಂದೆ ನಡೆಯುತ್ತಾ) 
ದುಷ್ಯಂತ: (ಸ್ವಗತ) ಈ ಮುನಿತನಯಳನ್ನು ನಾನು ಎಂದೂ ಪರಿಗ್ರಹಿಸಿದ ನೆನಪೇ ಆಗುತ್ತಿಲ್ಲ. ಆದರೂ ಇವಳ ದುಃಖವನ್ನು ನೋಡಿದರೆ ಏನೋ ನೆನಪಾಗುತ್ತಿರುವಂತಿದೆ.

(ಎಲ್ಲರ ನಿರ್ಗಮನ)
(ಐದನೆಯ ದೃಶ್ಯವು ಸಮಾಪ್ತವಾದುದು)




Tuesday, February 11, 2020

ಅಭಿಜ್ಞಾನ ಶಾಕುಂತಲ 4

                                                                              ದೃಶ್ಯ ೪

(ಹೂ ಬಿಡಿಸುವಂತೆ ನಟಿಸುತ್ತಾ ಅನಸೂಯೆ, ಪ್ರಿಯಂವದೆಯರ ಪ್ರವೇಶ)

ಅನಸೂಯೆ: ಶಕುಂತಲೆಗೆ ಗಾಂಧರ್ವ ವಿವಾಹವಾಗಿ ಅನುರೂಪನಾದ ಗಂಡನನ್ನು ಪಡೆದದ್ದು ಒಳ್ಳೆಯದಾಯಿತೆಂದು ನನಗೆ ಸಂತೋಷವೇ ಆಗಿದೆ. ಆದರೂ ನನಗೊಂದು ಚಿಂತೆಯಿದೆ.

ಪ್ರಿಯಂವದೆ: ಏಕೆ?

ಅನಸೂಯೆ: ಆ ರಾಜರ್ಷಿ ಯಾಗ ಮುಗಿದ ಮೇಲೆ ಋಷಿಗಳಿಂದ ಬೀಳ್ಕೊಂಡು ನಮ್ಮನ್ನು ಬಿಟ್ಟು ನಗರಕ್ಕೆ ಹೋಗಿದ್ದಾನೆ. ತನ್ನ ಅಂತಃಪುರವನ್ನು ಸೇರಿದ ಮೇಲೆ ಅವನಿಗೆ ಇವಳ ಜ್ಞಾಪಕವಿರುತ್ತದೆಯೋ ಇಲ್ಲವೋ!

ಪ್ರಿಯಂವದೆ: ಯೋಚನೆ ಬೇಡ. ಅವನನ್ನು ನೋಡಿದರೆ ಹಾಗೆನಿಸುವುದಿಲ್ಲ. ಆದರೆ ನನಗೆ ಕಣ್ವರು ವಾಪಸ್ಸು ಬಂದಮೇಲೆ ಇದನ್ನೆಲ್ಲಾ ಕೇಳಿ ಒಪ್ಪುತ್ತಾರೋ ಇಲ್ಲವೋ ಎಂಬುದೇ ಚಿಂತೆ.

ಅನಸೂಯೆ: ನನಗೆ ಗೊತ್ತಿರುವಂತೆ ಅವರು ಒಪ್ಪುತ್ತಾರೆ.

ಪ್ರಿಯಂವದೆ: ಹೇಗೆ?

ಅನಸೂಯೆ: ಗುಣವಂತನಾದ ವರನಿಗೆ ಕೊಡಬೇಕೆಂದು ಅವರ ಸಂಕಲ್ಪವಿತ್ತು. ಈಗ ದೈವ ಪ್ರಯತ್ನದಿಂದ ಅನಾಯಾಸವಾಗಿ ಅದೇ ಆಗಿರುವುದರಿಂದ ಅವರಿಗೆ ಒಪ್ಪಿಗೆ ಆಗುತ್ತದೆ.

ಪ್ರಿಯಂವದೆ: (ಹೂವನ್ನು ನೋಡುತ್ತಾ) ಅನಸೂಯೆ, ಪೂಜೆಗೆ ಇಷ್ಟು ಹೂ ಸಾಕೆನಿಸುತ್ತದೆ.

ಅನಸೂಯೆ: ನಮ್ಮ ಸಖಿ ಶಕುಂತಲೆಯ ಸೌಭಾಗ್ಯಕ್ಕಾಗಿ ಪೂಜೆ ಮಾಡಬೇಕಲ್ಲ?

ಪ್ರಿಯಂವದೆ: ಹೌದು, ಸರಿ.
(ಮತ್ತೆ ಹೊ ಬಿಡಿಸುವಂತೆ ನಟಿಸುತ್ತಾರೆ)

(ನೇಪಥ್ಯದಲ್ಲಿ)
ನಾನಿಲ್ಲಿದ್ದೇನೆ!

ಅನಸೂಯೆ: (ಆ ಕಡೆ ಕಿವಿ ಕೊಡುತ್ತಾ) ಸಖಿ, ಯಾರೋ ಅತಿಥಿ ಬಂದಂತಿದೆ.

ಪ್ರಿಯಂವದೆ: ಆಶ್ರಮದ ಬಳಿ ಶಕುಂತಲೆಯಿದ್ದಾಳೆ.

ಅನಸೂಯೆ: ಆದರೆ ಮನಸ್ಸಿನಿಂದ ಇಲ್ಲ. ಇಷ್ಟು ಹೊ ಸಾಕು, ಹೋಗೋಣ. 
(ಹೊರಡಲು ಅಣಿಯಾಗುತ್ತಾರೆ, ಅಷ್ಟರಲ್ಲಿ)

(ನೇಪಥ್ಯದಲ್ಲಿ)
ಒಹ್! ತಪಸ್ವಿ ನಿನ್ನ ಆಶಮದ ಹತ್ತಿರ ಬಂದರೂ ಅತಿಥಿಯನ್ನು ಗಮನಿಸದೆ ನೀನು ಯಾರನ್ನು ಕುರಿತು ಚಿಂತಿಸುತ್ತಿದ್ದೆಯೋ ಅವನಿಗೆ, ಕುಡಿದವನಿಗೆ ಅಮಲು ಇಳಿದ ಮೇಲೆ ಎಲ್ಲ ಮರೆತುಹೋದಂತೆ, ನೀನೂ ಮರೆತುಹೋಗಲಿ.

ಪ್ರಿಯಂವದೆ: ಅಯ್ಯೋ! ಏನೋ ತಪ್ಪಾಗಿದೆ. ಪೂಜಾರ್ಹರಾದವರಲ್ಲಿ ಅನ್ಯಮನಸ್ಕಳಾದ ಶಕುಂತಲೆ ಅಪರಾಧಮಾಡಿದಂತಿದೆ.
(ಮುಂದೆ ಹೋಗಿ ನೋಡುತ್ತಾ)
ಬಂದವರು ಅಂತಿಂಥವರಲ್ಲ! ಈ ದೂರ್ವಾಸರು ಬೇಗ ಕೋಪ ಮಾಡಿಕೊಳ್ಳುವ ಮಹರ್ಷಿ. ಶಾಪ ಕೊಟ್ಟು ಯಾರಿಗೂ ಸಿಗದಂತೆ ಬೇಗ ಬೇಗ ಹೊರಟುಹೋಗುತ್ತಿದ್ದಾರೆ.

ಅನಸೂಯೆ: ಬೆಂಕಿಗೇ ಸುಡುವ ಅಧಿಕಾರ. ನೀನು ಬೇಗ ಹೋಗಿ ಕಾಲಿಗಾದರೂ ಬಿದ್ದು ಅವರನ್ನು ಹಿಂದಕ್ಕೆ ಕರೆ ತಾ. ನಾನು ಅರ್ಘ್ಯಕ್ಕೆ ಸಿದ್ಧಮಾಡುತ್ತೇನೆ.

ಪ್ರಿಯಂವದೆ: ಹಾಗೆ ಆಗಲಿ.. (ಹೊರಡುತ್ತಾಳೆ)

ಅನಸೂಯೆ: (ಎಡವಿ ಬಿದ್ದು) ಹೋ! ಬೇಗ ಓಡಲು ಹೋಗಿ ಕೈಲ್ಲಿದ್ದ ಹೂವೆಲ್ಲಾ ಕೆಳಗೆ ಬಿದ್ದವಲ್ಲ! 
(ಹೂ ಆರಿಸುವಂತೆ ನಟಿಸುತ್ತಾಳೆ)

(ಸ್ವಲ್ಪ ಹೊತ್ತಿನಲ್ಲಿ ಪ್ರಿಯಂವದೆಯ ಪ್ರವೇಶ)
ಪ್ರಿಯಂವದೆ: ಅನಸೂಯೆ ಈ ದೂರ್ವಾಸರು ಮೊದಲೇ ಪ್ರಕೃತಿ ವಕ್ರ! ಅವರನ್ನು ಎಲ್ಲಿ ತಡೆಯಲಾಗುತ್ತದೆ. ನಾನು ಹೇಗೋ ಸಮಾಧಾನ ಮಾಡಿ ಬಂದೆ.

ಅನಸೂಯೆ: (ಸಮಾಧಾನದ ಮುಗುಳ್ನಗೆಯಿಂದ) ಅಷ್ಟಾಗಿದ್ದೇ ಹೆಚ್ಚಾಯಿತು. ಹೇಳು?

ಪ್ರಿಯಂವದೆ: ಅವರು ಹಿಂದೆ ಬರಲಿಕ್ಕೆ ಒಪ್ಪಲಿಲ್ಲ. ಅದಕ್ಕೇ ನಾನು ಅಲ್ಲೇ ವಿಜ್ಞಾಪಿಸಿದೆ: ಭಗವನ್, ನಿಮ್ಮ ಶಕ್ತಿ ಗೊತ್ತಿಲ್ಲದ, ನಿಮ್ಮ ಮಗಳಂಥವಳಾದ ಶಕುಂತಲೆಯ ಈ ಮೊದಲ ಅಪರಾಧವನ್ನು ಕ್ಷಮಿಸಬೇಕು ಎಂದೆ.

ಅನಸೂಯೆ: ಆಮೇಲೆ?

ಪ್ರಿಯಂವದೆ: ನನ್ನ ಮಾತು ಸುಳ್ಳಾಗುವುದಕ್ಕೆ ಸಾಧ್ಯವಿಲ್ಲ. ಆದರೂ ಅವಳು ಯಾವುದಾದರೂ ಒಂದು ಅಭಿಜ್ಞಾವನ್ನು ತೋರಿಸಿದಾಗ ನನ್ನ ಶಾಪ ವಿಮೋಚನೆಯಾಗುತ್ತದೆ ಎಂದು ಹೇಳಿ ಹೊರಟುಹೋಗಿಬಿಟ್ಟರು.

ಅನಸೂಯೆ: ಸ್ವಲ್ಪ ಸಮಾಧಾನ ಮಾಡಿಕೊಳ್ಳಬಹುದು. ಆ ರಾಜರ್ಷಿ ಹೋಗುವಾಗ ಅವರ ಹೆಸರಿರುವ ಒಂದು ಉಂಗುರವನ್ನು ನೆನಪಿಗೆ ಇರಲಿ ಎಂದು ಕೊಟ್ಟು ಹೋಗಿದ್ದಾನೆ. ಶಕುಂತಲೆಗೆ ಅದು ಸಾಕಾಗುತ್ತದೆ. 

ಪ್ರಿಯಂವದೆ: ಹೊಂ, ಸರಿ. ನಡಿ, ದೇವತಾಕಾರ್ಯಕ್ಕೆ ತಡವಾಗಿದೆ, ಹೊರಡೋಣ. 
(ಮುಂದೆ ಹೋಗುತ್ತಾರೆ)
ಪ್ರಿಯಂವದೆ: (ನೋಡುತ್ತಾ) ಅನಸೂಯೆ, ಅಲ್ಲಿ ನೋಡು. ನಮ್ಮ ಪ್ರಿಯಸಖಿ ಎಡಗೈಯನ್ನು ಕೆನ್ನೆಯ ಮೇಲೆ ಇಟ್ಟುಕೊಂಡು ಕೂತಿದ್ದರೆ ಅದು ಒಂದು ಚಿತ್ರದಂತೆ ಕಾಣಿಸುತ್ತಿದೆ. ಗಂಡನ ಮೇಲೆ ಚಿಂತಿಸುತ್ತಾ ಅವಳಿಗೆ ತನ್ನ ಮೇಲೆಯೇ ಪ್ರಜ್ಞೆಯಿಲ್ಲ. ಇನ್ನು ಆಗಂತುಕನನ್ನು ಎಲ್ಲಿ ಗಮನಿಸಿಯಾಳು?

ಅನಸೂಯೆ: ಪ್ರಿಯಂವದೆ, ಈ ದೂರ್ವಾಸರ ವೃತ್ತಾಂತ ನಮ್ಮಲ್ಲಿಯೇ ಇರಲಿ. ಸ್ವಭಾವದಿಂದಲೇ ಸೌಮ್ಯವಾಗಿರುವವಳಿಗೆ ಈ ವಿಷಯ ತಿಳಿಯುವುದು ಬೇಡ. ಇವಳನ್ನು ನಾವೇ ರಕ್ಷಿಸಿಕೊಳ್ಳೋಣ.

ಪ್ರಿಯಂವದೆ: ಸರಿಯೇ, ನವಮಾಲಿಕಾ ಲತೆಗೆ ಯಾರು ಬಿಸಿನೀರನ್ನು ಹಾಕುತ್ತಾರೆ?
(ನಿಷ್ಕ್ರಮಿಸುತ್ತಾರೆ)

(ಸ್ವಲ್ಪ ತಿಂಗಳುಗಳ ನಂತರ....)

(ಆಗಿಂದ ನಿದ್ದೆಯಿಂದೆದ್ದ ಶಿಷ್ಯನ ಪ್ರವೇಶ)
ಶಿಷ್ಯ: ಸೋಮತೀರ್ಥದಿಂದ ವಾಪಸ್ಸು ಬಂದ ಕಣ್ವರು ಹೊರಗೆ ವೇಳೆ ಎಷ್ಟು ಆಗಿದೆಯೆಂದು ಕೇಳುತ್ತಿದ್ದಾರೆ. ಹೊರಗೆ ಹೋಗಿ ಇನ್ನೂ ಕತ್ತಲು ಇದೆಯೋ ನೋಡೋಣ.
(ಹೊರಗೆ ಬಂದು ನೋಡುತ್ತಾ)
ಒಹ್, ಬೆಳಗಾಗಿಬಿಟ್ಟಿದೆ. 
ಒಂದು ಕಡೆ ಚಂದ್ರ ಬೆಟ್ಟಗಳಲ್ಲಿ ಮುಳುಗುತ್ತಿದ್ದಾನೆ, ಇನ್ನೊಂದು ಕಡೆ ಸೂರ್ಯ ಏಳುತ್ತಿದ್ದಾನೆ. ಇವರಿಬ್ಬರ ಏಳು ಬೀಳುಗಳಲ್ಲಿ ಈ ನಮ್ಮ ಲೋಕವೇ ನಿಯಮಿತವಾಗಿದೆ. ನಮ್ಮ ಜೀವನವೂ ಇದರಂತೆಯೇ!
ಚಂದ್ರ ಹೋದ, ಈಗ ನೈದಿಲೆ ದುಃಖದಿಂದ ಮುದುಡುತ್ತಿದೆ. ಆತ್ಮೀಯರು ಪ್ರವಾಸಕ್ಕೆ ಹೋದರೆ ಅವರ ಪತ್ನಿಯರಿಗೆ ದುಃಖವಲ್ಲದೆ ಇನ್ನೇನು?

(ಇನ್ನೊಂದು ಕಡೆಯಿಂದ ಪರದೆಯನ್ನು ತಳ್ಳಿಕೊಂಡು ಅನಸೂಯೆಯ ಪ್ರವೇಶ)
ಅನಸೂಯೆ: ವಿಷಯಪರಾಙ್ಮುಖರಿಗೂ ಇದು ತಿಳಿಯುತ್ತದೆ. ಆ ರಾಜ ಶಕುಂತಲೆಯ ಬಗ್ಗೆ ಅನಾರ್ಯನಾಗಿಯೇ ನಡೆದುಕೊಂಡ.

ಶಿಷ್ಯ: ಹೋಮವೇಳೆಯನ್ನು ಗುರುಗಳಿಗೆ ತಿಳಿಸುತ್ತೇನೆ.
(ನಿಷ್ಕ್ರಮಿಸುತ್ತಾನೆ)

ಅನಸೂಯೆ: ನನಗೆ ಮುಂಚೆ ಗೊತ್ತಿದ್ದರೂ ಏನು ಮಾಡಬಹುದಾಗಿತ್ತು? ದಿನಗೆಲಸ ಮಾಡಲೂ ನನ್ನ ಕೈಕಾಲು ಆಡುತ್ತಿಲ್ಲ. ಈಗ ಮನ್ಮಥನಿಗೆ ಸಂತೋಷವಾಗಿರಬಹುದು. ಶುದ್ಧ ಹೃದಯಾಳಾದ ನನ್ನ ಸಖಿ ಮೋಸಗಾರನ ಮೇಲೆ ಮನಸ್ಸಿಡುವಂತೆ ಮಾಡಿದನವನು. ಅಥವಾ ದೂರ್ವಾಸರ ಶಾಪ ಹೀಗೆ ಮಾಡಿಸುತ್ತಿದೆ. ಇಲ್ಲದಿದ್ದರೆ ಅಂದು ಅಷ್ಟು ಚೆನ್ನಾಗಿ ಮಾತಾಡಿವನು, ಅಂದಿನಿಂದ ಒಂದು ಕಾಗದವನ್ನೂ ಬರೆದಿಲ್ಲ. ಅವನಿಗೆ ಒಂದು ಅಭಿಜ್ಞಾನವನ್ನಾದರೂ ಕಳಿಸಲೇ? ದುಃಖಿತರಾದ ತಪಸ್ವಿ ಜನರಲ್ಲಿ ನಾನು ಯಾರು? ಇದು ಖಂಡಿತವಾಗಿ ಸಖಿಯರಾದ ನಮ್ಮ ದೋಷವೇ! ಈಗ ಸೋಮತೀರ್ಥದಿಂದ ವಾಪಸ್ಸು ಬಂದಿರುವ ಕಣ್ವರ ಬಳಿ ಇವಳು ದುಷ್ಯಂತನನ್ನು ಮದುವೆಯಾಗಿ, ಈಗ ಗರ್ಭಿಣಿಯೆಂದು ಹೇಗೆ ಹೇಳುವುದು? ಈ ಸಂದರ್ಭದಲ್ಲಿ ನಾವೇನು ಮಾಡುವುದು?

(ಪ್ರಿಯಂವದೆಯ ಪ್ರವೇಶ)
ಪ್ರಿಯಂವದೆ: (ಸಂತೋಷದಿಂದ) ಅನಸೂಯೆ, ಬೇಗ ತ್ವರೆಮಾಡು. ಶಕುಂತಲೆಯನ್ನು ಅವಳ ಗಂಡನ ಮನೆಗೆ ಕಳಿಸಬೇಕು.

ಅನಸೂಯೆ: ಏನಾಯಿತು?

ಪ್ರಿಯಂವದೆ: ಕೇಳು. ನಾನು ಈಗ ಮಾತ್ರ ಶಕುಂತಲೆಯನ್ನು ವಿಚಾರಿಸಲು ಹೋಗಿದ್ದೆ.

ಅನಸೂಯೆ: ಸರಿ?

ಪ್ರಿಯಂವದೆ: ಆಗಲೇ ಕಣ್ವರು ಬಂದು ಲಜ್ಜೆಯಿಂದ ನಮಸ್ಕರಿಸಿದ ಅವಳನ್ನು ತಬ್ಬಿಕೊಂಡು, "ಮಗಳೇ, ಯಜ್ಞದ ಹೊಗೆಯಿಂದ ಯಜಮಾನನ ಕಣ್ಣು ಮಬ್ಬಾಗಿದ್ದರೂ, ಆಹುತಿ ಅಗ್ನಿಯಲ್ಲಿಯೇ ಬಿತ್ತು. ವತ್ಸೇ, ಯೋಗ್ಯನಾದ ಶಿಷ್ಯನಿಗೆ ಕೊಟ್ಟ ವಿದ್ಯೆಯಂತೆ ನೀನು ನನ್ನನ್ನು ಶೋಕರಹಿತನಾಗಿ ಮಾಡಿಬಿಟ್ಟೆ. ಇಂದೇ ನಿನ್ನನ್ನು ಋಷಿರಕ್ಷಣೆಯಲ್ಲಿ ನಿನ್ನ ಗಂಡನ ಮನೆಗೆ ಕಳುಹಿಸುತ್ತೇನೆ" ಎಂದರು.

ಅನಸೂಯೆ: ಕಣ್ವರಿಗೆ ಈ ವಿಷಯವನ್ನು ಯಾರು ಹೇಳಿದರು?

ಪ್ರಿಯಂವದೆ: ಅವರು ಅಗ್ನಿಗೇಹವನ್ನು ಪ್ರವೇಶಿಸಿದಾಗ ಅವರಿಗೆ ಅಶರೀರವಾಣಿ ಆರ್ಷ ಛಂದಸ್ಸಿನಲ್ಲಿ ಹೇಳಿತು.

ಅನಸೂಯೆ: (ಆಶ್ಚರ್ಯದಿಂದ) ಏನು?

ಪ್ರಿಯಂವದೆ: ಅದು ಹೇಳಿತು:
ದುಷ್ಯನ್ತೇನಾಹಿತಂ ತೇಜೋ ದಧಾನಾಂ ಭೂತಯೇ ಭುವಃ
ಅವೇಹಿ ತನಯಾಂ ಬ್ರಹ್ಮನ್ನಗ್ನಿಗರ್ಭಾಂ ಶಮೀಮಿವ
(ಬ್ರಹ್ಮನ್, ಶಮೀ ವೃಕ್ಷದಲ್ಲಿರುವ ಅಗ್ನಿಯಂತೆ ನಿನ್ನ ಮಗಳು ಭೂಮಿಯ ಸಂತೋಷಕ್ಕಾಗಿ ದುಷ್ಯಂತನ ತೇಜಸ್ಸನ್ನು ಧರಿಸಿದ್ದಾಳೆ)

ಅನಸೂಯೆ: (ಪ್ರಿಯಂವದೆಯನ್ನು ತಬ್ಬಿಕೊಂಡು) ಪ್ರಿಯಂವದೇ, ನನಗೆ ತುಂಬಾ ಸಂತೋಷವಾಯಿತು. ಶಕುಂತಲೆ ಹೊರಟುಹೋಗುತ್ತಾಳೆ ಎಂಬ ದುಃಖವಾದರೂ ಅದನ್ನು ಮೀರಿ ಸಂತೋಷವಾಗುತ್ತಿದೆ. 

ಪ್ರಿಯಂವದೆ: ಅನಸೂಯೆ, ನಮ್ಮ ದುಃಖವನ್ನು ಬದಿಗಿಡೋಣ. ಅವಳಿಗೆ ಸಮಾಧಾನವಾಗಲಿ.

ಅನಸೂಯೆ: ಈ ಸಂದರ್ಭಕ್ಕೆಂದೇ ಈ ಮಾವಿನ ಕೊಂಬೆಗೆ ತೆಂಗಿನ ಗರಿಯಲ್ಲಿ ಮಾಡಿದ ಬುಟ್ಟಿಯಲ್ಲಿ ಬಾಡದ ಕೇಸರ ವೃಕ್ಷದ ಹೂಗಳನ್ನು ಇಟ್ಟಿದ್ದೆ. ಅದನ್ನು ಸಿದ್ದ ಮಾಡಿಕೊಂಡಿರು. ಅವಳು ಹೋಗುವ ಹೊತ್ತಿಗೆ ಅವಳಿಗಾಗಿ, ಮೃತ್ತಿಕಾತೀರ್ಥ, ಗರಿಕೆ ಮುಂತಾದವುಗಳನ್ನು ಸಿದ್ದ ಮಾಡುತ್ತೇನೆ. 

ಪ್ರಿಯಂವದೆ: ಹಾಗೇ ಮಾಡೋಣ. 
(ಅನಸೂಯೆಯ ನಿರ್ಗಮನ. ಪ್ರಿಯಂವದೆ ಹೂಗಳನ್ನು ತೆಗೆದುಕೊಳ್ಳುವಂತೆ ನಟಿಸುತ್ತಾಳೆ.)

(ನೇಪಥ್ಯದಲ್ಲಿ)
ಗೌತಮಿ, ಶಾರ್ಙರವ ಮತ್ತು ಅವನ ಜೊತೆಯವನನ್ನು ಶಕುಂತಲೆಯನ್ನು ಕರೆದುಕೊಂಡು ಹೋಗಲು ಕರೆದುಕೊಂಡು ಬಾ. 

ಪ್ರಿಯಂವದೆ: (ಆ ಕಡೆ ಕಿವಿ ಕೊಟ್ಟು) ಅನಸೂಯೆ ಬೇಗ, ಬೇಗ. ಹಸ್ತಿನಾಪುರಕ್ಕೆ ಹೋಗುವ ಋಷಿಗಳು ಬರುತ್ತಿದ್ದಾರೆ.
(ಪರಿಕರಗಳನ್ನು ತೆಗೆದುಕೊಂಡು ಅನಸೂಯೆಯ ಪ್ರವೇಶ)

ಅನಸೂಯೆ: ಸರಿ ಸರಿ. ನಡಿ ಹೋಗೋಣ. 
(ಹೊರಡಲು ಅಣಿಯಾಗುತ್ತಾರೆ)

ಪ್ರಿಯಂವದೆ: (ಆ ಕಡೆ ನೋಡುತ್ತಾ) ಇಲ್ಲಿ ನೋಡು ಶಕುಂತಲೆ, ಬೆಳಿಗ್ಗೆ ಬೆಳಿಗ್ಗೆಯೇ ತಲೆಸ್ನಾನ ಮಾಡಿಕೊಂಡು ಸಿದ್ಧವಾಗಿದ್ದಾಳೆ. ಸ್ವಸ್ತಿವಚನಕ್ಕಾಗಿ ನೀವಾರ ಧಾನ್ಯಗಳನ್ನು ಹಿಡಿದು ತಪಸ್ವಿಗಳು ಬಂದಿದ್ದಾರೆ. ಹೋಗೋಣ ನಡಿ.
(ಆ ಕಡೆ ಹೋಗುತ್ತಾರೆ)
(ತಪಸ್ವಿಗಳ ಜೊತೆ ಶಕುಂತಲೆಯ ಪ್ರವೇಶ)
(ಶಕುಂತಲೆ ಕುಳಿತಿದ್ದಾಳೆ)
(ತಪಸ್ವಿಗಳು ಆಶೀರ್ವಾದ ಮಾಡುತ್ತಿದ್ದಾರೆ)

ಮೊದಲ ತಪಸ್ವಿ: (ಶಕುಂತಲೆಗೆ) ಮಗಳೇ, ಗಂಡನ ಬಹುಮಾನಸೂಚಕವಾಗಿ ಮಹಾರಾಣಿಯಾಗು.

ಎರಡನೆಯವರು: ಮಗಳೇ, ವೀರನಿಗೆ ಜನ್ಮ ಕೊಡುವವಳಾಗು.

ಮೂರನೆಯವರು: ವತ್ಸೇ, ಗಂಡನಿಗೆ ಆರಾಧ್ಯಳಾಗು.

(ಆಶೀರ್ವಾದ ಮಾಡಿ, ಗೌತಮಿಯನ್ನು ಬಿಟ್ಟು ಮಿಕ್ಕೆಲ್ಲ ಋಷಿಗಳ ನಿರ್ಗಮನ)

ಸಖಿಯರು: (ಹತ್ತಿರ ಬಂದು) ಸುಖ ಮಜ್ಜನವಾಯಿತೇ?

ಶಕುಂತಲೆ: ಸ್ನೇಹಿತೆಯರಿಗೆ ಸ್ವಾಗತ, ಬನ್ನಿ ಕುಳಿತುಕೊಳ್ಳಿ.

ಇಬ್ಬರೂ: (ಮಂಗಳ ಪಾತ್ರೆಗಳನ್ನು ಹಿಡಿದು) ಸಿದ್ಧಳಾಗು, ನಾವು ನಿನಗೆ ಅಲಂಕಾರ ಮಾಡುತ್ತೇವೆ.

ಶಕುಂತಲೆ: ಈಗ ನನಗೆ ಸಂತೋಷವಾಯಿತು. ಇನ್ನು ಮುಂದೆ ನಿಮ್ಮ ಜೊತೆ ಅಲಂಕಾರ ಮಾಡಿಸಿಕೊಳ್ಳುವುದು ದುರ್ಲಭವಾಗುತ್ತದೆ.
(ಶಕುಂತಲೆಯ ಕಣ್ಣಲ್ಲಿ ನೀರು ಒಸರುತ್ತದೆ)

ಇಬ್ಬರೂ: ಸಖಿ, ಮಂಗಳ ಸಮಯಗಳಲ್ಲಿ ಕಣ್ಣೀರು ಸುರಿಸುವುದು ಉಚಿತವಲ್ಲ.
(ಇಬ್ಬರೂ ಕಣ್ಣೊರೆಸಿಕೊಳ್ಳುತ್ತಾರೆ)

ಪ್ರಿಯಂವದೆ: ಆಭರಣಗಳಿಗೆ ಉಚಿತವಾದ ನಿನ್ನ ದೇಹಕ್ಕೆ ಆಶ್ರಮದಲ್ಲಿ ಸಿಗುವ ಪದಾರ್ಥಗಳಿಂದ ಅಲಂಕಾರ ಮಾಡಬೇಕಿದೆ. 

(ಕೈಯಲ್ಲಿ ಉಪಾಯನಗಳನ್ನು ಹಿಡಿದ ಇಬ್ಬರೂ ಋಷಿಕುಮಾರರ ಪ್ರವೇಶ)

ಕುಮಾರರು: ಈ ಆಭರಣಗಳಿಂದ ಶಕುಂತಲೆಯನ್ನು ಅಲಂಕರಿಸಿ.

(ಎಲ್ಲರೂ ಅದನ್ನು ನೋಡಿ ವಿಸ್ಮಯದಿಂದ)

ಗೌತಮಿ: ಮಗನೇ, ನಾರದ, ಇವೆಲ್ಲಿಯವು?

ನಾರದ: ಕಣ್ವರ ಪ್ರಭಾವದಿಂದ.

ಗೌತಮಿ: ಏನು? ಮನಸ್ಸಿನಿಂದಲೇ ಸೃಷ್ಟಿಸಿದ್ದೇ?

ಎರಡನೆಯ ಕುಮಾರ: ಇಲ್ಲ ಕೇಳಿ. ಕಣ್ವರು ನಮಗೆ ಶಕುಂತಲೆಗಾಗಿ ಹೂಗಳನ್ನು ತರಲು ಹೇಳಿದರು. ಆಗ, ಹೂಗಳನ್ನು ಕೀಳುವಾಗ ಒಂದೊಂದು ಮರವೂ ಒಂದು ರೀತಿಯ ಆಭರಣಗಳನ್ನು ಕೊಟ್ಟವು.

ಪ್ರಿಯಂವದೆ: (ಶಕುಂತಲೆಯನ್ನು ನೋಡುತ್ತಾ) ಶಕುಂತಲೆ, ಇದು ನೀನು ನಿನ್ನ ಗಂಡನ ಮನೆಯಲ್ಲಿ ರಾಜಲಕ್ಷ್ಮಿಯಾಗಿರುತ್ತೀಯ ಎಂಬುದರ ಸಂಕೇತ.
(ಶಕುಂತಲೆ ಆಶ್ಚರ್ಯವನ್ನು ತೋರಿಸುತ್ತಾಳೆ)

ನಾರದ: ಗೌತಮ, ಬೇಗ ಬಾ. ಕಣ್ವರ ಸ್ನಾನ ಮುಗಿದಿರುತ್ತದೆ. ಈ ಮರಗಳ ದಾನಗಳನ್ನು ಅವರಿಗೆ ತಿಳಿಸೋಣ.

ಎರಡನೆಯ ಕುಮಾರ: ಸರಿ.
(ಇಬ್ಬರ ನಿರ್ಗಮನ)

ಸಖಿಯರು: ಅಯ್ಯೋ, ನಮಗೆ ಈ ಆಭರಣಗಳನ್ನು ಉಪಯೋಗಿಸಿಯೇ ಅಭ್ಯಾಸವಿಲ್ಲ. ಆದರೂ ಚಿತ್ರಗಳಲ್ಲಿ ನೋಡಿರುವಂತೆ ಅಲಂಕರಿಸೋಣ.

ಶಕುಂತಲೆ: ನಿಮ್ಮ ನೈಪುಣ್ಯ ನನಗೆ ಗೊತ್ತು.
(ಇಬ್ಬರೂ ಅಲಂಕಾರ ಮಾಡಲು ಶುರು ಮಾಡುತ್ತಾರೆ)

(ಸ್ನಾನ ಮುಗಿಸಿ ಬಂದ ಕಣ್ವರ ಪ್ರವೇಶ)
ಕಣ್ವರು: ಶಕುಂತಲೆ ಇಂದು ಹೊರಡುತ್ತಾಳೆ ಎಂದು ನನ್ನ ಮನಸ್ಸು ಉತ್ಕಂಠವಾಗಿದೆ. ಕಂಠ ಹಿಡಿದು ಮಾತೇ ಹೊರಬರುತ್ತಿಲ್ಲ. ಕಣ್ಣೀರಿನಿಂದ ಕಣ್ಣು ಮಬ್ಬಾಗಿದೆ. ಕಾಡಿನ ಮನುಷ್ಯನಾದ ನನಗೇ ಇಷ್ಟು ವೈಕ್ಲವ್ಯವಾದರೆ, ಇನ್ನು ಹೊಸದಾಗಿ ಮದುವೆಯಾದ ತಮ್ಮ ಮಗಳನ್ನು ಗಂಡನ ಮನೆಗೆ ಕಳಿಸುವಾಗ ಗೃಹಸ್ಥನಿಗೆ ಎಷ್ಟು ದುಃಖವಾಗುತ್ತದೋ!!
(ಮುಂದೆ ನಡೆಯುತ್ತಾರೆ)

ಸ್ನೇಹಿತೆಯರು: ಶಕುಂತಲೆ, ನಿನ್ನ ಅಲಂಕಾರ ಮುಗಿಯಿತು. ಈ ರೇಷ್ಮೆ ವಸ್ತ್ರವನ್ನು ಧರಿಸು.
(ಶಕುಂತಲೆ ಹಾಗೇ ಮಾಡುತ್ತಾಳೆ)

ಗೌತಮಿ: ಶಕುಂತಲೆ, ಆನಂದ ಬಾಷ್ಪಗಳಿಂದ ನಿನ್ನನ್ನು ಅಪ್ಪಿಕೊಳ್ಳಲು ಕಣ್ವರು ಬಂದಿದ್ದಾರೆ. ಅವರಿಗೆ ನಮಸ್ಕಾರ ಮಾಡು.

ಶಕುಂತಲೆ: (ನಾಚಿಕೆಯಿಂದ) ಅಪ್ಪನಿಗೆ ನಮಸ್ಕಾರಗಳು. 
(ನಮಸ್ಕರಿಸುತ್ತಾಳೆ)

ಕಣ್ವರು: ಮಗಳೇ, ಯಯಾತಿಗೆ ಶರ್ಮಿಷ್ಠೆ ಪ್ರಿಯಳಾದಂತೆ, ನೀನೂ ನಿನ್ನ ಗಂಡನಿಗೆ ಪ್ರಿಯಳಾಗು. ಅವಳ ಮಗ ಪುರು ಸಾಮ್ರಾಟನಾದಂತೆ ನಿನ್ನ ಮಗನೂ ಸಾಮ್ರಾಟನಾಗಲಿ.

ಗೌತಮಿ: ಭಗವಾನ್, ಇದು ವರ, ಆಶೀರ್ವಾದವಲ್ಲ.

ಕಣ್ವರು: ಮಗಳೇ, ಈಗಷ್ಟೇ ಆಹುತಿ ಕೊಟ್ಟಿರುವ ಈ ಅಗ್ನಿಯನ್ನು ಪ್ರದಕ್ಷಿಣೆ ಮಾಡು. 
(ಎಲ್ಲರೂ ಪ್ರದಕ್ಷಿಣೆ ಮಾಡುತ್ತಾರೆ)

ಕಣ್ವರು: (ಆಶೀರ್ವದಿಸುತ್ತಾರೆ)
(ಋಕ್ಛಂದಸ್ಸಿನಲ್ಲಿ)
ಅಮೀ ವೇದಿಂ ಪರಿತಃ ಕೢಪ್ತಧಿಷ್ಣ್ಯಾಃ ಸಮಿದ್ವನ್ತಃ ಪ್ರಾನ್ತಸಂಸ್ತೀರ್ಣದರ್ಭಾಃ ।
ಅಪಘ್ನತೋ ದುರಿತಂ ಹವ್ಯಗನ್ಧೈರ್ವೈತಾನಾಸ್ತ್ವಾಂ ವಹ್ನಯಃ ಪಾವಯಂತು ||

(ಇದು ಋಗ್ವೇದದ ಮುಖ್ಯ ಛಂದಸ್ಸಾದ ತ್ರಿಷ್ಟುಪ್ ಛಂದಸ್ಸಿನಲ್ಲಿದೆ, ವೇದಗಳ ಹೊರತಾಗಿ ಈ ಛಂದಸ್ಸಿನ ಪ್ರಯೋಗ ಭಾರತೀಯ ಕಾವ್ಯ ಪ್ರಪಂಚದಲ್ಲಿ ಇಲ್ಲಿ ಮಾತ್ರ ಬರುತ್ತದೆ.
ಅರ್ಥ - 
ಈ ವೇದಿಯನ್ನು ಆವರಿಸಿರುವ ತ್ರೇತಾಗ್ನಿಗಳು ಸಮಿತ್ತು ಕುಶಾದಿಗಳಿಂದ ಜಾಜ್ವಲ್ಯವಾಗಿವೆ. ಅವು ತಮ್ಮ ದಿವ್ಯ ಗಂಧದಿಂದ ನಿಮ್ಮನ್ನು ಪಾವನಗೊಳಿಸಲಿ.)

(ಸುತ್ತಲೂ ನೋಡಿ)

ಶಾರ್ಙರವರೆಲ್ಲಿ?
(ಅವರ ಆಗಮನ)

ಶಾರ್ಙರವ: ಭಗವನ್ ಇಲ್ಲಿದ್ದೇವೆ.

ಕಣ್ವರು: ನಿಮ್ಮ ತಂಗಿ ಶಕುಂತಲೆಗೆ ದಾರಿ ತೋರಿಸಿ.

ಶಾರ್ಙರವ: ಶಕುಂತಲೆ, ಇಲ್ಲಿ, ಇಲ್ಲಿ.

(ಎಲ್ಲರೂ ಮುಂದೆ ನಡೆಯುತ್ತಾರೆ)

ಕಣ್ವರು: ಒಹ್! ತಪೋವನದ ತರುಗಳು ಬಂದವು.... ತಪೋವನದ ತರುಗಳೇ, ಇವಳು ತಾನು ನೀರು ಕುಡಿಯುವ ಮುನ್ನ ನಿಮಗೇ ಮೊದಲು ನೀರು ಹಾಕುತ್ತಿದ್ದಳು, ಅವಳಿಗೆ ಅಲಂಕಾರ ಮಾಡಿಕೊಳ್ಳುವುದು ಇಷ್ಟವಾಗಿದ್ದರೂ ಅದಕ್ಕಾಗಿ ನಿಮ್ಮ ಒಂದು ಚಿಗುರನ್ನೂ ಕೊಯ್ಯುತ್ತಿರಲಿಲ್ಲ, ನಿಮಗೆ ಹೊಸದಾಗಿ ಹಣ್ಣು, ಹೂ, ಚಿಗುರು ಏನೇ ಬಿಟ್ಟರೂ ಅವಳು ಹಬ್ಬ ಮಾಡುತ್ತಿದ್ದಳು. ಇಂದು ಅವಳು ತನ್ನ ಗಂಡನ ಮನೆಗೆ ಹೋಗುತ್ತಿದ್ದಾಳೆ. ನೀವೆಲ್ಲರೂ ಅನುಜ್ಞೆಯನ್ನು ಕೊಡಿ.

(ಕೋಕಿಲರವದ ಸೂಚನೆ)
ಶಕುಂತಲೆಗೆ ತನ್ನ ವನಬಂಧುಗಳಿಂದ ಅನುಜ್ಞೆ ಸಿಕ್ಕಿಬಿಟ್ಟಿತು. ಅಂತೆಯೇ ಈ ಕೋಗಿಲೆಯಿಂದಲೂ ಅನುಜ್ಞೆ ಸಿಕ್ಕಿತು.

(ಆಕಾಶದಿಂದ ಅಶರೀರ ಧ್ವನಿ)
ಶಕುಂತಲೆ ಹೋಗುವಾಗ ದಾರಿಯಲ್ಲಿ ರಮ್ಯವಾದ ತಾವರೆಗಳಿರುವ ಸರೋವರಗಳು ಸಿಗಲಿ. ತಂಪಾದ ನೆರಳು ಕೊಡುವ ದೊಡ್ಡ ದೊಡ್ಡ ಮರಗಳಿರಲಿ. ದಾರಿಯಲ್ಲಿ ಧೂಳಿಲ್ಲದಿರಲಿ. ಇವರಿಗೆ ಅನುಕೂಲವಾಗಿ ಗಾಳಿ ಬೀಸಲಿ. ದಾರಿ ಮಂಗಳಕರವಾಗಿರಲಿ.
(ಎಲ್ಲರೂ ಕೇಳಿಸಿಕೊಂಡು ವಿಸ್ಮಯರಾಗುತ್ತಾರೆ)

ಗೌತಮಿ: ಮಗಳೇ ನಿನ್ನ ತಪೋವನದ ಬಂಧುಗಳಿಂದ ಅನುಜ್ಞೆ ಸಿಕ್ಕಿತು. ಅವುಗಳಿಗೆ ನಮಸ್ಕಾರ ಮಾಡು.

ಶಾಕುಂತಲ: (ಅವುಗಳಿಗೆ ನಮಸ್ಕಾರ ಮಾಡಿ, ಪ್ರಿಯಂವದೆಗೆ ಗುಟ್ಟಾಗಿ)
ದುಷ್ಯಂತನನ್ನು ನೋಡಲು ಉತ್ಸುಕಳಾಗಿದ್ದರೂ ಈ ಆಶ್ರಮವನ್ನು ಬಿಟ್ಟು ಕಾಲು ಮುಂದೆ ನಡೆಯುತ್ತಲೇ ಇಲ್ಲ.

ಪ್ರಿಯಂವದೆ: ದುಃಖ ನಿನಗಷ್ಟೇ ಅಲ್ಲ. ನಿನ್ನ ವಿಯೋಗದಿಂದ ತಪೋವನವೂ ದುಃಖವಾಗಿಯೇ ಕಾಣುತ್ತದೆ. ಜಿಂಕೆಗಳು ಹುಲ್ಲನ್ನು ಬಿಟ್ಟಿವೆ. ನವಿಲುಗಳು ನಾಟ್ಯವಾಡುತ್ತಿಲ್ಲ. ಲತೆಗಳಿಂದ ಕಣ್ಣೀರು ಸುರಿಸುವಂತೆ ಎಲೆಗಳು ಕೆಳಗೆ ಬೀಳುತ್ತಿವೆ.

ಶಕುಂತಲೆ: (ಜ್ಞಾಪಿಸಿಕೊಂಡು) ಅಪ್ಪ, ನನ್ನ ತಂಗಿ ವನಜ್ಯೋತ್ಸ್ನೆಯನ್ನು ಮಾತಾಡಿಸಿ ಬರುತ್ತೇನೆ.

ಕಣ್ವರು: ನಿನಗೆ ಅವಳಲ್ಲಿ ಸೋದರ ಸ್ನೇಹವಿರುವುದು ನನಗೇ ಗೊತ್ತು. ಹೋಗಿ ಬಾ.

ಶಕುಂತಲೆ: (ಲತೆಯನ್ನು ತಬ್ಬಿಕೊಂಡು) ವನಜ್ಯೋತ್ಸ್ನೆ, ನೀನು ಈ ಮಾವಿನಮರವನ್ನು ಅಪ್ಪಿಕೊಂಡಂತೆಯೇ ನನ್ನನ್ನೂ ಅಪ್ಪಿಕೋ. ಇಂದಿನಿಂದ ನಾನು ನಿನಗೆ ದೂರವಾಗುತ್ತೇನೆ.

ಕಣ್ವರು: ಅಮ್ಮ, ನಿನ್ನನ್ನು ಅನುರೂಪನಾದ ವರನಿಗೆ ಕೊಡಬೇಕೆಂದು ನನ್ನ ಸಂಕಲ್ಪವಾಗಿತ್ತು. ನಿನಗೆ ಅಂಥವನು ಸಿಕ್ಕಿದ್ದಾನೆ. ನವಮಾಲಿಕಾ ಲತೆಗೂ ಈ ಮಾವಿನ ಮರ ಸಿಕ್ಕಿದೆ. ಇನ್ನು ನಿಮ್ಮಿಬ್ಬರ ವಿಷಯದಲ್ಲಿ ನನಗೆ ಯೋಚನೆಯಿಲ್ಲ!
ಈ ಕಡೆ ನಡೆ.

ಶಕುಂತಲೆ: (ತನ್ನ ಸಖಿಯರಿಗೆ) ಈ ನವಮಾಲಿಕೆಯನ್ನೂ, ಮಾವಿನಮರವನ್ನೂ ನಿಮ್ಮ ಕೈಲಿಡುತ್ತನೆ.

ಸಖಿಯರು: ನಮ್ಮನ್ನು ಯಾರ ಕೈಲಿಡುತ್ತೀಯ? (ಕಣ್ಣೀರು ಸುರಿಸುತ್ತಾರೆ)

ಕಣ್ವರು: ಅನಸೂಯೆ, ಅಳಬೇಡ. ನೀವೇ ಶಕುಂತಲೆಯನ್ನು ಸಮಾಧಾನ ಮಾಡಬೇಕು.
(ಎಲ್ಲರೂ ಮುಂದೆ ನಡೆಯುತ್ತಾರೆ)

ಶಕುಂತಲೆ: ಅಪ್ಪ, ಆಶ್ರಮದಲ್ಲಿ ನಿಧಾನವಾಗಿ ಓಡಾಡುತ್ತಿರುವ ಆ ಗರ್ಭಿಣಿ ಜಿಂಕೆಗೆ ಸುಖಪ್ರಸವವಾದೊಡನೆ ನೀವು ನನಗೆ ಹೇಗಾದರೂ ತಿಳಿಸಲೇಬೇಕು.

ಕಣ್ವರು: ಖಂಡಿತ ಮರೆಯುವುದಿಲ್ಲವಮ್ಮ.

ಶಕುಂತಲೆ: (ನಡೆಯುವುವಾಗ ತೊಡಕಾದಂತೆ ನಟಿಸುತ್ತಾ) ಯಾರು ನನಗೆ ಅಡ್ಡ ಬರುತ್ತಿರುವುದು?
(ಹಿಂತಿರುಗಿ ನೋಡುತ್ತಾಳೆ)

ಕಣ್ವರು: ಶಕುಂತಲೆ, ತನ್ನ ಮುಖಕ್ಕೆ ಗಾಯವಾದಾಗ ಅದಕ್ಕೇ ಇಂಗುದೀ ತೈಲವನ್ನು ಹಚ್ಚಿ ಗಾಯವನ್ನು ಗುಣಮಾಡಿ, ಒಳ್ಳೆಯ ಹುಲ್ಲನ್ನು ಕೊಟ್ಟ ಬೆಳಸಿದ ಈ ಮರಿಜಿಂಕೆ ನಿನ್ನನ್ನು ಅನುಸರಿಸುತ್ತಿದೆ.

ಶಕುಂತಲೆ: ಮಗುವೇ, ಬಿಟ್ಟು ಹೋಗುತ್ತಿರುವ ನನ್ನನ್ನೇಕೆ ಅನುಸರಿಸುತ್ತಿರುವೆ? ಹುಟ್ಟಿದ ತಕ್ಷಣ ನೀನು ನಿನ್ನ ತಾಯಿಯನ್ನು ಕಳೆದುಕೊಂಡಾಗ ನಾನೇ ನಿನ್ನನ್ನು ಬೆಳಸಿದೆ. ಈಗ ನಾನಿಲ್ಲದಿದ್ದರೂ ನನ್ನ ತಂದೆ ನಿನ್ನನ್ನು ನೋಡಿಕೊಳ್ಳುತ್ತಾರೆ. ದೂರ ಹೋಗು.
(ಅಳಲು ಶುರುಮಾಡುತ್ತಾಳೆ)

ಕಣ್ವರು: ಅಮ್ಮ, ಕಣ್ಣೀರಿನಿಂದ ನಿನ್ನ ಕಣ್ಣುಗಳು ಮಬ್ಬಾಗಿ ದಾರಿ ಕಾಣಿಸುವುದಿಲ್ಲ. ದಾರಿಯಲ್ಲಿ ಏರಿಳಿತಗಳಿವೆ. ಅಲಕ್ಷ್ಯ ಮಾಡಿದರೆ ಕಾಲುಗಳಿಗೆ ತೊಂದರೆಯಾಗುತ್ತದೆ.

ಶಾರ್ಙರವ: ಭಗವನ್, ನೀರಿನ ಸೆಲೆ ಬರುವವರೆಗು ಮಾತ್ರ ಆತ್ಮೀಯರು ಬಂದು ಬೀಳ್ಕೊಡಬೇಕೆಂದು ಶಾಸ್ತ್ರ. ಸರೋವರ ಬಂದಿತು. ಅಲ್ಲಿವರೆಗೂ ಬಂದು ಸಂದೇಶ ಕೊಟ್ಟು ನೀವು ವಾಪಸ್ಸು ಹೊರಡಬೇಕು.

ಕಣ್ವರು: ಹಾಗಾದರೆ ಈ ಮರದ ನೆರಳಿಗೆ ಹೋಗೋಣ.
(ಎಲ್ಲರೂ ಮುಂದೆ ಹೋಗಿ ನಿಲ್ಲುತ್ತಾರೆ)

ಕಣ್ವರು: (ಸ್ವಗತ) ದುಷ್ಯಂತನಿಗೆ ಯುಕ್ತವಾದ ಯಾವ ಸಂದೇಶವನ್ನು ಕೊಡೋಣ?
(ಚಿಂತಿಸುತ್ತಾರೆ)

ಶಕುಂತಲೆ: (ತನ್ನ ಸಖಿಯರಿಗೆ ತಮ್ಮತಮ್ಮಲ್ಲೇ) ಇಲ್ಲಿ ನೋಡಿ, ಸರೋವರದ ತಾವರೆಯೆಲೆಗಳ ಮಧ್ಯದಲ್ಲಿ ತನ್ನ ಸಖಿಯನ್ನು ಕಾಣದೆ ಚಕ್ರವಾಕ ಪಕ್ಷಿ ಗೋಳಾಡುತ್ತಿದೆ. ನಾನೂ ಹೀಗಾಗಿಬಿಡುತ್ತೇನೋ ಎನಿಸುತ್ತಿದೆ.

ಅನಸೂಯೆ: ಇಲ್ಲ, ಇಲ್ಲ, ಹಾಗೆ ಹೇಳಬೇಡ. ಅದು ವಿರಹದಿಂದಲೇ ದೀರ್ಘವಾದ ತನ್ನ ರಾತ್ರಿಯನ್ನು ಕಳೆಯುತ್ತದೆ. ಆದರೂ ತನಗಿರುವ ಆಶಾಭಾವದಿಂದ ಅದನ್ನು ತಡೆದು ಹಗಲಿನವರೆಗೂ ಕಾಯುತ್ತದೆ.

ಕಣ್ವರು: ಶಾರ್ಙರವ, ನನ್ನ ಮಾತಾಗಿ ಇವಳನ್ನು ಮುಂದೆಯಿಟ್ಟುಕೊಂಡು ರಾಜ ದುಷ್ಯಂತನಿಗೆ ಹೀಗೆ ಹೇಳು.

ಶಾರ್ಙರವ: ಭಗವನ್, ಆಜ್ಞೆಯಾಗಲಿ.

ಕಣ್ವರು: "ರಾಜ, ನಮ್ಮನ್ನೂ, ನಿನ್ನ ಉತ್ತಮಕುಲವನ್ನೂ, ನಾವಿರದಿದ್ದಾಗ ಈ ನಮ್ಮ ಶಕುಂತಲೆಯ ಮೇಲೆ ತೋರಿಸಿದ ಸ್ನೇಹವನ್ನೂ ಕುರಿತು ಯೋಚಿಸಿ, ಇವಳನ್ನು ನಿನ್ನ ರಾಣಿಯರಲ್ಲಿ ಒಬ್ಬಳನ್ನಾಗಿ ಮಾಡಿಕೊಂಡು ಚೆನ್ನಾಗಿ ನೋಡಿಕೋ. ಮಿಕ್ಕದ್ದು ಅವಳ ಭಾಗ್ಯದೈವಕ್ಕೆ ಬಿಟ್ಟಿದ್ದು. ಇದಕ್ಕಿಂತಲೂ ಹೆಚ್ಚಿನದನ್ನು ವಧೂ ಬಂಧುಗಳು ಹೇಳಬಾರದು."

ಶಾರ್ಙರವ: ಸಂದೇಶ ಗೃಹೀತವಾಗಿದೆ.

ಕಣ್ವರು: ಮಗಳೇ, ಇನ್ನು ನಿನಗೆ ಸಂದೇಶ. ಸಂತರು ವನವಾಸಿಗಳಾದರೂ ಲೌಕಿಜ್ಞರು.

ಶಾರ್ಙರವ: ತಿಳಿದವರಿಗೆ ಅಜ್ಞಾತವಿಷಯವೇ ಇಲ್ಲ.

ಕಣ್ವರು: ಮಗಳೇ, ನೀನು ಗಂಡನ ಮನೆಗೆ ಹೋದ ಮೇಲೆ ಗುರುಜನರ ಶುಶ್ರೂಷೆ ಮಾಡು. ಸಪತ್ನಿಯರಲ್ಲಿ ಸ್ನೇಹದಿಂದಿರು. ಗಂಡ ಕೋಪಿಸಿಕೊಂಡರೂ, ನೀನು ಅವನಿಗೆ ವಿರೋಧಿಯಾಗಬೇಡ. ನಿನ್ನ ಸೇವಕರಿಗೆ ಉದಾರಿಯಾಗಿರು. ನಿನಗೆ ಒಳ್ಳೆಯದಾದಾಗ ಹೆಚ್ಚು ಉತ್ಸುಕಳಾಗಬೇಡ. ಹೀಗಿದ್ದರೆ ಯುವತಿಯರು ಗೃಹಿಣಿಯಾಗುತ್ತಾರೆ, ಇಲ್ಲದಿದ್ದರೆ, ಮನೆಗೆ ಕೆಟ್ಟಹೆಸರು ತರುತ್ತಾರೆ.

ಗೌತಮಿಗೆ ಏನನ್ನಿಸುತ್ತದೆ?

ಗೌತಮಿ:  ನೀವು ಹೇಳಿದಕ್ಕಿಂತ ಇನ್ನೂ ಹೆಚ್ಚು ಹೇಳಲು ಏನಿದೆ? ಮಗಳೇ, ಅವರು ಹೇಳಿದ್ದೆಲ್ಲವನ್ನೂ ಅನುಸರಿಸು.

ಕಣ್ವರು: ಮಗಳೇ, ನಿನ್ನ ಸ್ನೇಹಿತೆಯರನ್ನೂ, ನನ್ನನ್ನೂ ಆಲಂಗಿಸಿ ಬೀಳ್ಕೊಡು.

ಶಕುಂತಲೆ: ಅಪ್ಪ, ಪ್ರಿಯಂವದೆ ಮತ್ತು ಅನಸೂಯೆಯರೂ ಇಲ್ಲಿಂದ ನಿಮ್ಮ ಜೊತೆ ಹಿಂದೆ ಹೋಗುತ್ತಾರಾ?

ಕಣ್ವರು: ಮಗಳೇ, ಹೌದು ಅವರು ನಮ್ಮ ಜೊತೆ ಹಿಂದಕ್ಕೆ ಬರಲೇಬೇಕು. ಅವರು ಅಲ್ಲಿಗೆ ಬರುವುದು ಯುಕ್ತವಲ್ಲ. ನಿನ್ನ ಜೊತೆ ಗೌತಮಿ ಬರುತ್ತಾಳೆ.

ಶಕುಂತಲೆ: (ತಂದೆಯನ್ನು ಆಲಂಗಿಸಿ) ಅಪ್ಪ, ಮಲಯ ಪರ್ವತದಿಂದ ಚಂದನಲತೆ ಬೇರು ಸಮೇತ ಕಿತ್ತುಬಂದಂತೆ ತಂದೆಯ ತೋಳಿನಿಂದ ತಪ್ಪಿಸಿಕೊಂಡು ದೇಶವಲ್ಲದ ದೇಶದಲ್ಲಿ ಹೇಗೆ ಬಾಳಲಿ?

ಕಣ್ವರು: ಮಗಳೇ, ಭಯ ಬೇಡ. ಒಳ್ಳೆಯ ಮನೆತನದಲ್ಲಿ, ಒಳ್ಳೆಯ ಗಂಡನ ಜೊತೆ ಗರತಿಯಂತೆ ಬಾಳುತ್ತೀಯ, ರಾಣಿಯ ಕೆಲಸಗಳಲ್ಲಿ ತಲ್ಲೀನಳಾಗಿ, ಸೂರ್ಯನಿಗೆ ಸಮನಾದ ಮಗನನ್ನು ಪಡೆಯುತ್ತೀಯ.. ಇವೆಲ್ಲವುಗಳಲ್ಲಿ ನಿನಗೆ ನನ್ನ ನೆನಪೇ ಅಷ್ಟು ಕಾಡುವುದಿಲ್ಲ.

(ಶಕುಂತಲೆ ಕಣ್ವರ ಪಾದಗಳಿಗೆ ನಮಸ್ಕಾರ ಮಾಡುತ್ತಾಳೆ)

ಕಣ್ವರು: (ಆಶೀರ್ವದಿಸುತ್ತಾರೆ) ನಾನು ಬಯಸಿದ್ದು ನಿನಗೆ ದೊರೆಯಲಿ.

ಶಕುಂತಲೆ: (ತನ್ನ ಸ್ನೇಹಿತೆಯ ಬಳಿ ಬಂದು) ನಿಮ್ಮಿಬ್ಬರನ್ನೂ ಒಟ್ಟಿಗೆ ಅಪ್ಪಿಕೊಳ್ಳುತ್ತೇನೆ.

(ಅಪ್ಪಿಕೊಳ್ಳುತ್ತಾಳೆ)

ಸಖಿಯರು: ಶಕುಂತಲೆ, ಅಕಸ್ಮಾತ್ ರಾಜ ನಿನ್ನನ್ನು ಗುರುತು ಹಿಡಿಯುವುದಕ್ಕೆ ತಡ ಮಾಡಿದರೆ, ಅವನ ಹೆಸರಿರುವ ಈ ಮುದ್ರೆಯುಂಗುರವನ್ನು ತೋರಿಸು.

ಶಕುಂತಲೆ: ನಿಮ್ಮ ಸಂದೇಹದಿಂದ ನನಗೆ ಭಯವಾಗುತ್ತಿದೆ.

ಸಖಿಯರು: ಸಖಿ, ಭಯ ಪಡಬೇಡ. ಅತಿಸ್ನೇಹ ಪಾಪಶಂಕಿ!

ಶಾರ್ಙರವ: ಸೂರ್ಯ ಮುಳುಗುತ್ತಿದ್ದಾನೆ, ಬೇಗ ಹೊರಡೋಣ.

ಶಕುಂತಲೆ: (ಆಶ್ರಮದ ಕಡೆ ನೋಡುತ್ತಾ) ಅಪ್ಪ, ಮತ್ತೆ ಈ ತಪೋವನವನ್ನು ನೋಡುವುದು ಯಾವಾಗ?

ಕಣ್ವರು: ಮಗಳೇ ಕೇಳು, ಸಾಮ್ರಾಟನ ಪತ್ನಿಯಾಗಿ ಬಾಳಿ, ಅಪ್ರತಿರಥನಾದ ಮಗನನ್ನು ಪಡೆದು, ಅವನಿಗೆ ಸಮಗ್ರ ರಾಜ್ಯದ ಪಟ್ಟ ಕಟ್ಟಿ, ಅನಂತರ ಕೊನೆಯಲ್ಲಿ ಶಾಂತಿಗಾಗಿ ಮತ್ತೆ ಈ ಆಶ್ರಮಕ್ಕೆ ಬರುತ್ತೀಯ.

ಗೌತಮಿ: ಮಗಳೇ ತುಂಬಾ ಹೊತ್ತಾಯಿತು. ಅಪ್ಪನನ್ನು ಹಿಂದೆ ಕಳುಹಿಸು. ಅಥವಾ ಭಗವನ್, ಇವಳು ನಿಮ್ಮ ಜೊತೆ ಮಾತಾಡುತ್ತಲೇ ಇರುತ್ತಾಳೆ. ನೀವು ವಾಪಸ್ಸು ಹೋಗಿ.

ಕಣ್ವರು: ಮಗಳೇ, ತಪೋನುಷ್ಠಾನಕ್ಕೆ ವೇಳೆಯಾಗುತ್ತಿದೆ.

ಶಕುಂತಲೆ: (ಮತ್ತೆ ಕಣ್ವರನ್ನು ಅಪ್ಪಿಕೊಂಡು) ಅಪ್ಪ ನಿಮ್ಮ ಶರೀರ ತಪಸ್ಸಿನಿಂದ ಈಗಲೇ ಜೀರ್ಣವಾಗಿದೆ. ಇನ್ನು ನನಗಾಗಿ ಯೋಚನೆಮಾಡಬೇಡಿ.

ಕಣ್ವರು: (ಉಸಿರೆಳೆದುಕೊಳ್ಳುತ್ತಾ) ಅಮ್ಮಾ, ನಿನ್ನ ಅಗಲಿಕೆಯಿಂದ ಉಂಟಾಗುವ ಶೋಕವನ್ನು ತಡೆವುದಾದರೂ ಹೇಗೆ? ಆಶ್ರಮದ ಹೊರಗೆ ನೀನು ಹಾಕಿದ ನೀವಾರ ಧಾನ್ಯ ಬೆಳೆಯುವುದನ್ನು ನೋಡಿದರೂ ನೀನೇ ನನಗೆ ನೆನಪಿಗೆ ಬರುತ್ತೀಯ.
ಸರಿ, ಇನ್ನು ನೀನು ಹೊರಡು. ಹಾದಿ ಮಂಗಳಕರವಾಗಿರಲಿ.
(ಶಕುಂತಲೆಯ ಮತ್ತು ಅವಳ ಜೊತೆ ಹೋಗುವವರ ನಿರ್ಗಮನ)

ಸಖಿಯರು: (ಶಕುಂತಲೆಯನ್ನು ನೋಡುತ್ತಾ) ಹಾ ಧಿಕ್! ಶಕುಂತಲೆ ವನದ ಮಧ್ಯದಲ್ಲಿ ಮರೆಯಾಗಿಬಿಟ್ಟಳಲ್ಲ!

ಕಣ್ವರು: (ಉಸಿರೆಳೆದುಕೊಳ್ಳುತ್ತಾ) ಅನಸೂಯೆ, ನಿಮ್ಮ ಸ್ನೇಹಿತೆ ಹೊರಟಳು. ನೀವೂ ಬನ್ನಿ ಹೊರಡೋಣ.

ಸಖಿಯರು: ಶಕುಂತಲೆಯಿಲ್ಲದೆ ಶೂನ್ಯವಾದ ತಪೋವನವಕ್ಕೆ ಹೇಗೆ ಹೋಗೋಣ!

ಕಣ್ವರು: ಸ್ನೇಹ ಪ್ರವೃತ್ತಿ ಹೀಗೆಯೇ ನೋಡುವುದು!
(ಮುಂದೆ ನಡೆಯುತ್ತಾ)
ಶಕುಂತಲೆಯನ್ನು ಗಂಡನ ಮನೆಗೆ ಕಳುಹಿಸಿದ ಮೇಲೆ ಮಸಸ್ಸಿಗೆ ನೆಮ್ಮದಿಯಾಯಿತು. ಕನ್ಯೆ ಎಂದೂ ಪರಕೀಯ ಸೊತ್ತೇ! ಅವಳನ್ನು ಕಳಿಸಿದ ಮೇಲೆ, ಅಡವಿಟ್ಟ ಸಂಪತ್ತನ್ನು ಕೊಟ್ಟವರಿಗೆ ಹಿಂತಿರುಗಿಸಿದಷ್ಟು ಸಮಾಧಾನವಾಗಿದೆ.

(ಎಲ್ಲರೂ ನಿರ್ಗಮಿಸುತ್ತಾರೆ)
(ನಾಲ್ಕನೇ ದೃಶ್ಯ ಸಮಾಪ್ತವಾದುದು)